Bangalore Cafe Blast, BJP Office, NIA: ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದಲ್ಲಿ ನಾಲ್ವರ ವಿರುದ್ಧ ಚಾರ್ಜ್ ಶೀಟ್ ; ಸಿರಿಯಾದಲ್ಲು ಸ್ಫೋಟ ನಡೆಸಿದ್ದ ಐಸಿಸ್ ಉಗ್ರರಿವರು, ಬಿಜೆಪಿ ಕಚೇರಿ ಸ್ಫೋಟ ಯತ್ನ ವಿಫಲ ! 

09-09-24 10:12 pm       Bangalore Correspondent   ಕರ್ನಾಟಕ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ನಾಲ್ವರು ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರು, ಸೆ.9: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ನಾಲ್ವರು ಆರೋಪಿಗಳ ವಿರುದ್ಧ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಮುಸಾವೀರ್ ಹುಸೇನ್ ಶಾಜೀಬ್, ಅಬ್ದುಲ್ ಮತೀನ್ ಅಹಮದ್ ತಾಹ, ಮಾಜ್ ಮುನೀರ್ ಅಹ್ಮದ್, ಮುಝಮ್ಮಿಲ್ ಷರೀಫ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಗೆ ಸಂಬಂಧಿತ ಸೆಕ್ಷನ್‌ಗಳಡಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಮಾರ್ಚ್‌ 1ರಂದು ಮಧ್ಯಾಹ್ನ ವೈಟ್ ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆ ಹೊಟೇಲ್ ನಲ್ಲಿ ಸ್ಫೋಟ ಘಟನೆ ನಡೆದಿತ್ತು. ಮುಸಾವೀರ್ ಹುಸೇನ್ ಸುಧಾರಿತ ಸ್ಫೋಟಕ ವಸ್ತುವಿದ್ದ ಬ್ಯಾಗ್‌ ಅನ್ನು ಹೋಟೆಲ್​​ ಒಳಗಿರಿಸಿ ಪರಾರಿಯಾಗಿದ್ದ. ಬಾಂಬ್ ಸ್ಪೋಟದಿಂದ ಹೋಟೆಲ್​​ನಲ್ಲಿದ್ದ 10 ಮಂದಿ ಗಾಯಗೊಂಡಿದ್ದರು. ತನಿಖೆ ಎತ್ತಿಕೊಂಡ ಎನ್​ಐಎ ತಂಡ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಐದಾರು ರಾಜ್ಯಗಳ 29 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ಆರಂಭದಲ್ಲಿ ಯಾವುದೇ ಸುಳಿವೂ ಸಿಕ್ಕಿರದ ಕಾರಣ ನಾನಾ ರೀತಿಯ ಶಂಕೆಗೂ ಸುದ್ದಿ ಕಾರಣವಾಗಿತ್ತು. ಸ್ಫೋಟದ 42 ದಿನಗಳ ನಂತರ ಏಪ್ರಿಲ್‌ 12ರಂದು ಎನ್​ಐಎ ಇಬ್ಬರು ಪ್ರಮುಖ ಆರೋಪಿಗಳು ಮತ್ತು ಸಂಚಿನ ರೂವಾರಿಗಳಾದ ಅಬ್ದುಲ್‌ ಮತೀನ್‌ ಅಹಮದ್‌ ತಾಹ ಮತ್ತು ಮುಸೀರ್‌ ಹುಸೇನ್‌ ಶಾಜೀಬ್‌ ಎಂಬವರನ್ನು ಬಂಧಿಸಿತ್ತು.

ಆರೋಪಿಗಳು ಹಿಂದುಗಳ ಹೆಸರಲ್ಲಿ ವಿವಿಧ ರಾಜ್ಯಗಳ ಹೋಟೆಲ್​ಗಳಲ್ಲಿ ತಲೆಮರೆಸಿಕೊಳ್ಳುತ್ತಿದ್ದರು. ಇವರು ಸಿಕ್ಕಿಬೀಳದಿರುತ್ತಿದ್ದರೆ ಬಾಂಗ್ಲಾದೇಶಕ್ಕೆ ಪಲಾಯನ ಆಗುತ್ತಿದ್ದರು. ಇವರ ಜೊತೆಗೆ ಜೈಲಿನಲ್ಲಿದ್ದ ಮಾಜ್ ಮುನೀರ್‌ ಅಹಮದ್‌ ಮತ್ತು ಮುಜಾಮಿಲ್‌ ಶರೀಫ್‌ ಅವರನ್ನೂ ಪ್ರಕರಣದಲ್ಲಿ ಆರೋಪಿಸಲಾಗಿದೆ. 

2020ರಿಂದಲೂ ತಲೆಮರೆಸಿಕೊಂಡಿದ್ದ ಅಬ್ದುಲ್ ಮತೀನ್ ಮತ್ತು ಮುಸೀರ್ ಹುಸೇನ್ ಐಸಿಸ್ ಉಗ್ರ ಸಂಘಟನೆಯ ಸದಸ್ಯರಾಗಿದ್ದರು. ಸಿರಿಯಾ ದೇಶದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿಯೂ ಇವರು ಭಾಗಿಯಾಗಿದ್ದರು ಎಂದು ಎನ್​​ಐಎ ಆರೋಪ ಪಟ್ಟಿಯಲ್ಲಿ ತಿಳಿಸಿದೆ. ಇವರು ಅನೇಕ ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆ ಸೇರಲು ಪ್ರೇರೇಪಿಸುತ್ತಿದ್ದರು. ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ಐಸಿಸ್ ಸೇರ್ಪಡೆಯಾಗಲು ಇವರೇ ಕಾರಣರಾಗಿದ್ದರು. ತಾಹಾ ಮತ್ತು ಶಾಜೀಬ್‌ ಇಬ್ಬರೂ ಡಾರ್ಕ್ ವೆಬ್​​ನಿಂದ ಡೌನ್ ಲೋಡ್ ಮಾಡಿಕೊಂಡ ದಾಖಲೆಗಳ ಮೂಲಕ ಭಾರತದ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಮತ್ತು ಬಾಂಗ್ಲಾದೇಶದ ಗುರುತಿನ ಚೀಟಿಗಳನ್ನು ಹೊಂದಿದ್ದರು. ಇವರಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣದ ನೆರವು ಸಿಗುತ್ತಿತ್ತು. 

ವಿಧ್ವಂಸಕ ಕೃತ್ಯ ಎಸಗಬೇಕೆಂಬ ಐಸಿಸ್ ಉಗ್ರರ ಸೂಚನೆಯಂತೆ, ಬೆಂಗಳೂರಿನಲ್ಲಿ ಸ್ಫೋಟ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಡೆದ ಜನವರಿ 22 ರಂದು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಸಂಚು ಹೂಡಿದ್ದರು. ಅದು ವಿಫಲಗೊಂಡಿದ್ದರಿಂದ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಮುಂದಾಗಿದ್ದರು ಎಂದು ಎನ್​​​ಐಎ ಆರೋಪ ಪಟ್ಟಿಯಲ್ಲಿ ತಿಳಿಸಿದೆ.

The National Investigation Agency (NIA) on Monday filed a chargesheet against four accused in connection with the blast at the Rameshwaram Cafe here on March 1. The chargesheet mentioned that the accused planned to carry out an IED blast at the Karnataka BJP headquarters on the day of Pran Pratishtha ceremony (January 22) of Ram Lalla in Ayodhya but failed to do so.