13th edition Kumbh Mela, Triveni Sangama, T Narsipur: ದಕ್ಷಿಣ ಭಾರತದ ಏಕೈಕ ಕುಂಭಮೇಳಕ್ಕೆ ಚಾಲನೆ ; ಪ್ರಯಾಗಕ್ಕೆ ಹೋಗದವರು ಇಲ್ಲಿಗೆ ಬನ್ನಿ ! ಫೆ.12ರಂದು ತ್ರಿವೇಣಿ ಸಂಗಮದಲ್ಲಿ ಮಾಘ ಸ್ನಾನ 

10-02-25 05:18 pm       HK News Desk   ಕರ್ನಾಟಕ

ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ದೇಶ- ವಿದೇಶದಲ್ಲಿ ಸದ್ದು ಮಾಡಿರುವಾಗಲೇ ಟಿ.ನರಸೀಪುರದ ಸಂಗಮ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ಶುರುವಾಗಿದೆ. ಬೆಳಗ್ಗೆ 11 ಗಂಟೆಗೆ ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ದಕ್ಷಿಣ ಭಾರತದ ಏಕೈಕ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. 

ಮೈಸೂರು, ಫೆ.10: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ ದೇಶ- ವಿದೇಶದಲ್ಲಿ ಸದ್ದು ಮಾಡಿರುವಾಗಲೇ ಟಿ.ನರಸೀಪುರದ ಸಂಗಮ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ಶುರುವಾಗಿದೆ. ಬೆಳಗ್ಗೆ 11 ಗಂಟೆಗೆ ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸುವ ಮೂಲಕ ದಕ್ಷಿಣ ಭಾರತದ ಏಕೈಕ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. 

ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರ ಹರಿಯುವ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಮೂರು ವರ್ಷಗಳಿಗೊಮ್ಮೆ ದಕ್ಷಿಣ ಭಾರತದ ಕುಂಭಮೇಳ ನಡೆಯುತ್ತಿದೆ. 1989 ರಲ್ಲಿ ಚುಂಚನಗಿರಿ ಶ್ರೀ ಹಾಗೂ ಸುತ್ತೂರು ಶ್ರೀಗಳು ದಕ್ಷಿಣ ಭಾರತದ ಕುಂಭಮೇಳಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನ ವರೆಗೆ 12 ಕುಂಭಮೇಳವಾಗಿದ್ದು  ಫೆ.10ರಿಂದ ಮೂರು ದಿನಗಳಲ್ಲಿ 13ನೇ ಕುಂಭಮೇಳ ಸ್ನಾನ ನಡೆಯಲಿದೆ. 

ಫೆ.11ರಂದು ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ - ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ. ಗುಂಜಾ ನರಸಿಂಹ ಸ್ವಾಮಿ ದೇವಸ್ಥಾನದಿಂದ ಟಿ.ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ರುದ್ರ ಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿ ಗಂಗಾರತಿ ಮಾದರಿಯಲ್ಲಿ ದೀಪಾರತಿ ಕಾರ್ಯಕ್ರಮ ನಡೆಯಲಿದೆ.

ಕುಂಭಮೇಳದ ಕೊನೆಯ ದಿನ ಫೆ.12ರಂದು ಮಾಘ ಪೂರ್ಣಿಮೆಯಂದು ಬೆಳಗ್ಗೆ ಮಘಾ ನಕ್ಷತ್ರದಲ್ಲಿ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. ಮಹೋದಯ ಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಅಂದು ಬೆಳಗ್ಗೆ 9ರಿಂದ 9.30ರ ವರೆಗಿನ ಮೀನ ಲಗ್ನ‌ ಮತ್ತು ಮಧ್ಯಾಹ್ನ 12ರಿಂದ 1ರ ವರೆಗಿನ ವೃಷಭ ಲಗ್ನದಲ್ಲಿ ಸಮಯ ನಿಗದಿ‌ ಮಾಡಲಾಗಿದೆ. 

ಕುಂಭಮೇಳಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗಾಗಿ ಮೈಸೂರು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಕುಂಭಮೇಳವನ್ನು 1989 ರಿಂದ ಪ್ರತಿ 3 ವರ್ಷಗಳಿಗೊಮ್ಮೆ ಈ ಸ್ಥಳದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಆದರೆ 2022ರಲ್ಲಿ ಕೋವಿಡ್ ಕಾರಣದಿಂದ ಕುಂಭಮೇಳ ನಡೆದಿರಲಿಲ್ಲ. ಇದೀಗ 6 ವರ್ಷದ ಬಳಿಕ ಕುಂಭಮೇಳ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಪವಿತ್ರ ತೀರ್ಥ ಸ್ನಾನಕ್ಕಾಗಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಾವೇರಿ, ಕಪಿಲೆ ಮತ್ತು ಸ್ಪಟಿಕ ಸರೋವರಗಳು ಸೇರುವ ತಿರುಮಕೂಡಲು ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೂರು ಕಡೆ ಸ್ನಾನಘಟ್ಟದ ವ್ಯವಸ್ಥೆ ಮಾಡಲಾಗಿದೆ.

13th edition of the Kumbh Mela to place at Triveni Sangama in T Narsipur. The 13th edition of the Kumbh Mela at the confluence of the Cauvery, Kapila and Spatika Sarovara at T. Narsipur will gather thousands of pilgrims taking a holy dip during the Mahamagha Punya Snana.