Santosh Lad, Modi, Nitin Gadkari: ಬಿಜೆಪಿ ಅಧಿಕಾರದಲ್ಲಿ ಇರಬಾರದು, ಪಕ್ಷ ದೇಶದಿಂದ ತೊಲಗಬೇಕು ; ನಿತಿನ್ ಗಡ್ಕರಿ ಪ್ರಧಾನಿ ಆಗ್ಬೇಕು, ಮೋದಿ ವಿರುದ್ಧ ಸಂತೋಷ್ ಲಾಡ್ ಫೈಟು 

21-02-25 04:36 pm       HK News Desk   ಕರ್ನಾಟಕ

ಕೇಂದ್ರ ಸರ್ಕಾರಕ್ಕೆ ಇನ್ನೂ ನಾಲ್ಕು ವರ್ಷಗಳ ಅಧಿಕಾರವಧಿ ಇದೆ. ದೇಶ ಇನ್ನಾದರೂ ಅಭಿವೃದ್ಧಿ ಕಾಣಲು ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾದರೆ ಒಳಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ತಿಳಿಸಿದರು.

ದಾವಣಗೆರೆ, ಫೆ 21: ಕೇಂದ್ರ ಸರ್ಕಾರಕ್ಕೆ ಇನ್ನೂ ನಾಲ್ಕು ವರ್ಷಗಳ ಅಧಿಕಾರವಧಿ ಇದೆ. ದೇಶ ಇನ್ನಾದರೂ ಅಭಿವೃದ್ಧಿ ಕಾಣಲು ಸಚಿವ ನಿತಿನ್ ಗಡ್ಕರಿ ಪ್ರಧಾನಿಯಾದರೆ ಒಳಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್‌ ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿ ಇರಬಾರದು, ಅದು ದೇಶದಿಂದ ತೊಲಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ದೇಶದ ಜನಾಭಿಪ್ರಾಯ ಬಿಜೆಪಿಗೆ ಸಿಕ್ಕಿದೆ. ದೇಶದ ಒಳಿತಿಗೆ ಪ್ರಧಾನಿ ಬದಲಾಗಬೇಕು ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶವನ್ನು ಒಬ್ಬರೇ ನಡೆಸಲು ಸಾಧ್ಯವಿಲ್ಲ. ಕೇಂದ್ರದ ಐವರು ಸಚಿವರ ಹೆಸರು ಜನರಿಗೆ ಗೊತ್ತಿಲ್ಲ. ಮಾಧ್ಯಮಗಳು ಪ್ರಧಾನಿ  ಮೋದಿ ಅವರನ್ನ ಹೀರೋ ಮಾಡಿವೆ. ದೀಪಾವಳಿಯಲ್ಲಿ ಸಿಡಿಸುವ ಪಟಾಕಿ ಕೂಡ ಚೀನಾದಿಂದ ಬರುತ್ತಿದೆ. ಹಾಗದರೆ ಮೇಕ್ ಇನ್ ಇಂಡಿಯಾ ಏನಾಯಿತು ಎಂದು ಪ್ರಶ್ನಿಸಿದರು.

ಕುಂಭಮೇಳದಲ್ಲಿ ನೀರು ಕಲುಷಿತಗೊಂಡಿರುವುದನ್ನು ವರದಿಗಳು ಖಚಿತಪಡಿಸಿವೆ. ಭಕ್ತರಿಗೆ ಕಲ್ಪಿಸಿದ ವ್ಯವಸ್ಥೆಯಲ್ಲಿ ತಾರತಮ್ಯ ಮಾಡಲಾಗಿದೆ. ಶ್ರೀಮಂತರಿಗೆ ಲಕ್ಷಾಂತರ ರೂಪಾಯಿ ಟೆಂಟ್‌ಗಳಿವೆ. ಬಡವರು ಪುಣ್ಯ ಸ್ನಾನಕ್ಕೆ ಹಲವು ದಿನ ಕಾಯಬೇಕಿದೆ. ಕಾಲ್ತುಳಿತದಲ್ಲಿ ಮೃತಪಟ್ಟರ ಲೆಕ್ಕವನ್ನೂ ಸರ್ಕಾರ ಸರಿಯಾಗಿ ತಿಳಿಸಲಿಲ್ಲ. ದೆಹಲಿಯ ಸಂಸತ್ ಭವನದಿಂದ 3 ಕಿ.ಮೀ ದೂರದ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಪ್ರಾಣ ಕಳೆದುಕೊಂಡರು. ಸೌಜನ್ಯಕ್ಕೂ ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಭೇಟಿ ನೀಡಲಿಲ್ಲ ಎಂದು ಕಿಡಿಕಾರಿದರು.

'ಮುಡಾ' ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಇದು ನ್ಯಾಯಕ್ಕೆ ಸಂದ ಜಯ. ದೇಶದ ಏಕೈಕ ಹಿಂದುಳಿದ ಸಮುದಾಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ತೊಂದರೆ ನೀಡಬೇಕು ಎಂಬ ಬಿಜೆಪಿ ಹುನ್ನಾರ ಸಫಲವಾಗಿಲ್ಲ. 'ಮುಡಾ' ಪ್ರಕರಣದಲ್ಲಿ ಕೇವಲ 14 ನಿವೇಶನಗಳ ಬಗ್ಗೆ ಮಾತ್ರ ಚರ್ಚೆ ಆಯಿತು. ಇನ್ನೂ ಬಾಕಿ ಇರುವ 110 ನಿವೇಶನಗಳ ಬಗ್ಗೆಯೂ ಚರ್ಚೆ ಆಗುವ ಅಗತ್ಯ ಇದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Santosh lad demands change of prime minster, Nitin Gadkari should be the PM of india. Says BJP party must leave india, modi must resign and Nitin Gadkari should be the PM of india he added.