DK Shivakumar, Mangalore Night life, Cabinet: ಕರಾವಳಿ ಏಳು ಗಂಟೆಗೆ ಡೆಡ್ ಸಿಟಿಯಾಗುತ್ತೆ, ಹಾಗಾಗಿ ಐಟಿಯವರು ಅಲ್ಲಿ ಬರ್ತಾ ಇಲ್ಲ, ಇದ್ಯಾಕೆ ಆಗತ್ತೆ ಅಂತ ಶಾಸಕರೆಲ್ಲ ಕುಳಿತು ಚರ್ಚೆ ಮಾಡಿ ; ಡಿಸಿಎಂ ಡಿಕೆಶಿ ಸೂಚನೆ

04-03-25 07:20 pm       Bangalore Correspondent   ಕರ್ನಾಟಕ

ಕರಾವಳಿಯಲ್ಲಿ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೂ ಅವಕಾಶ ಇದೆ. ಆದರೆ ಕರಾವಳಿ ಭಾಗದಲ್ಲಿ ಏಳು ಗಂಟೆ ವೇಳೆಗೆ ಎಂಟೈರ್ ಡೆಡ್ ಆಗುತ್ತೆ. ಇದ್ಯಾಕೆ ಆಗುತ್ತದೆ ಎಂದು ಎಲ್ಲ ಶಾಸಕರು ಸೇರಿ ಚರ್ಚೆ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು, ಮಾ.4: ಕರಾವಳಿಯಲ್ಲಿ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೂ ಅವಕಾಶ ಇದೆ. ಆದರೆ ಕರಾವಳಿ ಭಾಗದಲ್ಲಿ ಏಳು ಗಂಟೆ ವೇಳೆಗೆ ಎಂಟೈರ್ ಡೆಡ್ ಆಗುತ್ತೆ. ಇದ್ಯಾಕೆ ಆಗುತ್ತದೆ ಎಂದು ಎಲ್ಲ ಶಾಸಕರು ಸೇರಿ ಚರ್ಚೆ ಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕರಾವಳಿಯಲ್ಲಿ ಕುಕ್ಕೆ, ಧರ್ಮಸ್ಥಳಕ್ಕೆ ಬರುವ ಜನರು ಫಾಲ್ಸ್ ಇನ್ನಿತರ ಪ್ರದೇಶಕ್ಕೂ ಹೋಗುವಂತೆ ವ್ಯವಸ್ಥೆ ಆಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರಸ್ತಾಪಕ್ಕೆ, ಸಚಿವ ಸಿಸಿ ಪಾಟೀಲ್ ಪ್ರತಿಕ್ರಿಯೆಗೂ ಮುನ್ನ ಡಿಸಿಎಂ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದಕ್ಕೆ ಕಡಿಮೆ ಇದೆ. ಅತಿ ಹೆಚ್ಚು ಪ್ರತಿಭಾವಂತರು ಇದ್ದಾರೆ. ಆದರೆ ಅವರೆಲ್ಲ ಬೆಂಗಳೂರು, ಮುಂಬೈ ಅಥವಾ ದುಬೈಗೆ ಹೋಗುತ್ತಾರೆ. ಎರಡು ವರ್ಷಗಳಿಂದ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿಗೂ ಪ್ರವೇಶ ಕಡಿಮೆಯಾಗಿದೆ. ಇದೆಲ್ಲ ಯಾಕೆ ಆಗುತ್ತಿದೆ ಎಂದು ಚಿಂತನೆ ಮಾಡಬೇಕು.

ಸಂಜೆಯಾದ ಕೂಡಲೇ ಸಿಟಿ ಡೆಡ್ ಆಗುವ ಪ್ರದೇಶಕ್ಕೆ ಐಟಿ- ಬಿಟಿಯವರು ಬರುತ್ತಾರೆಯೇ ಎಂದು ಕೇಳಿದ ಶಿವಕುಮಾರ್, ಅತಿ ಹೆಚ್ಚು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಇರೋದು ಅಲ್ಲೇ.. ಯುವಕರಿಗೆ ಸಂತೋಷವಾಗಿರಲು ವ್ಯವಸ್ಥೆ ಇಲ್ಲಾಂದ್ರೆ ಜನರು ಬರಲ್ಲ. ಐಟಿಯವರು ಬರಲ್ಲ, ಇದಕ್ಕಾಗಿ ನೀವೊಮ್ಮೆ ಕುಳಿತು ಚಿಂತಿಸಿ ಹೇಳಿ ಎಂದರು. ಇದಕ್ಕುತ್ತರಿಸಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಮರವಂತೆ ಬೀಚ್ ನಲ್ಲಿ ಅದೇ ರೀತಿಯಾಗಿದೆ, ಒಂದು ಲೈಟಿಂಗ್ಸ್ ಹಾಕಿ ಎಂದರೆ ಅಧಿಕಾರಿಗಳು ಮುಂದೆ ಬರಲ್ಲ ಎಂದರು. ಅದಕ್ಕೆ ಸ್ಪೀಕರ್ ಆಕ್ಷೇಪಿಸಿದ್ದರಿಂದ ಗಂಟಿಹೊಳೆ ಕುಳಿತುಬಿಟ್ಟರು.

ಡಿಕೆಶಿ ಮಾತಿಗೆ ಉತ್ತರಿಸಿದ ಹರೀಶ್ ಪೂಂಜ, ಮಾನ್ಯ ಡಿಸಿಎಂ ಅವರೇ ನೀವು ಹೇಳಿದ ಮಾತಿಗೆ ಪೂರ್ಣ ಬೆಂಬಲ ಇದೆ. ಅತಿ ಹೆಚ್ಚು ಯುವ ಸಮುದಾಯ ನಮ್ಮಲ್ಲಿದೆ, ಅವರಿಗೆ ಉದ್ಯೋಗ ಇನ್ನಿತರ ವ್ಯವಸ್ಥೆ ಆಗಬೇಕು. ನೀವು ಏನು ಹೇಳುತ್ತೀರೋ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು. ಡಿಸಿಎಂ ಉತ್ತರಿಸಿ ಆ ಬಗ್ಗೆ ನಾವೊಮ್ಮೆ ಕುಳಿತು ಮೀಟಿಂಗ್ ಮಾಡೋಣ ಎಂದರು.

Managalore is a dead city after 7pm, need to discuss to improve night life says DK Shivakumar in cabinet assembly session.