Kukke Subrahmanya, New Train Service, Minister Somanna: ಕುಕ್ಕೆ ಸುಬ್ರಹ್ಮಣ್ಯಕ್ಕೆ ಎ.12ರಿಂದ ಬೆಂಗಳೂರಿನಿಂದ ಹೊಸ ರೈಲು ; ಹಾವೇರಿಯಿಂದ ವಂದೇ ಭಾರತ್ ರೈಲಿಗೆ ಚಾಲನೆ ; ಸಚಿವ ಸೋಮಣ್ಣ ಮಹತ್ವದ ಮಾಹಿತಿ 

09-04-25 04:05 pm       HK News Desk   ಕರ್ನಾಟಕ

ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ ಎಪ್ರಿಲ್ 12ರಿಂದ ಬೆಂಗಳೂರಿನಿಂದ ಹೊಸ ರೈಲು ಸಂಚರಿಸಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಣೆ ಮಾಡಿದರು. 

ಬೆಂಗಳೂರು, ಎ.9 : ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ ಎಪ್ರಿಲ್ 12ರಿಂದ ಬೆಂಗಳೂರಿನಿಂದ ಹೊಸ ರೈಲು ಸಂಚರಿಸಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಣೆ ಮಾಡಿದರು. 

ತುಮಕೂರಿನಲ್ಲಿ ರೈಲ್ವೇ ಗೇಟ್ ಮೇಲ್ಸೇತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ರೈಲ್ವೇ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಇದೇ 12 ರಂದು ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಒಂದು ಹೊಸ ರೈಲು ಬಿಡುತ್ತಿದ್ದೇವೆ. ದಿನಕ್ಕೆ ನಾಲ್ಕು ಬಾರಿ ಹೋಗಿ ಬರುವಂತಹ ಕೆಲಸ ಆಗಲಿದೆ ಎಂದು ಅವರು ಹೇಳಿದರು. 

ಬಟವಾಡಿ ಗೇಟ್​ನಲ್ಲಿ ಇವತ್ತು 27 ಕೋಟಿ ರೂ. ವೆಚ್ಚದಲ್ಲಿ ಕೆಲಸ ಆರಂಭಿಸಲಾಗಿದೆ. ಬಡ್ಡಿಹಳ್ಳಿ ಬಳಿ 43 ಕೋಟಿ ರೂ. ವೆಚ್ಚದಲ್ಲಿ, ಮೈದಾಳದ ಬಳಿ 51 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ಮಾಡಲಾಗುತ್ತಿದೆ. 650 ಕೋಟಿ ರೂ. ವೆಚ್ಚದ 22 ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ. 23 ಕಾಮಗಾರಿಗಳ ಪೈಕಿ ಈಗಾಗಲೇ 10 ಕಾಮಗಾರಿಗೆ ಚಾಲನೆ ಕೊಡಲಾಗಿದೆ. ಹಂತ ಹಂತವಾಗಿ ಕೆಲಸಗಳನ್ನು ಪ್ರಾರಂಭ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಬಂದ ಮೇಲೆ ರೈಲ್ವೇ ಇಲಾಖೆಗೆ ಒಂದು ಕಾಯಕಲ್ಪ ಕೊಟ್ಟಿದ್ದಾರೆ ಎಂದು ಸೋಮಣ್ಣ ಹೇಳಿದರು. 

ಕರ್ನಾಟಕದಲ್ಲಿ ಇದ್ದಂತಹ 33 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನ ನಾವು (ಕೇಂದ್ರ ಸರ್ಕಾರ) ಕೈಗೆತ್ತಿಕೊಂಡಿದ್ದೇವೆ. ಇದೇ 11 ರಂದು ಹಾವೇರಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿಗೆ ಚಾಲನೆ ಕೊಡುತ್ತಿದ್ದೇವೆ. ಮುಂದಿನ 15 ದಿನಗಳಲ್ಲಿ ಗದಗ, ವಾಡಿ, ಕುಷ್ಠಗಿ, ಯಲಬುರ್ಗಾ ರೈಲು ಸಂಚಾರ ಲೋಕಾರ್ಪಣೆ ಮಾಡುತ್ತೇವೆ. ಅನೇಕ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡುವಂತಹ ಕೆಲಸ ಈಗಾಗಲೇ ಆಗಿದೆ ಎಂದು ಸೋಮಣ್ಣ ಹೇಳಿದರು.

New Train Service Launched,  Bangalore to Kukke Subrahmanya, Vande Bharat Train from Haveri Announced by Minister Somanna.