ಜಾತಿ ಸಮೀಕ್ಷೆ ದೋಷಪೂರಿತ, ರಾಜ್ಯಕ್ಕೆ ಜಾತಿಗಣತಿ ಮಾಡುವ ಅಧಿಕಾರವಿಲ್ಲ ; ಒಕ್ಕಲಿಗ, ಲಿಂಗಾಯತ ಪ್ರಮುಖರ ವಿರೋಧ 

12-04-25 11:09 pm       Bangalore Correspondent   ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ.17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದು ವಿವಾದಿತ ಜಾತಿ ಗಣತಿ ವರದಿ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧಿಸಿದ್ದು, ಹೊಸದಾಗಿ ವರದಿ ರೂಪಿಸುವಂತೆ ಒತ್ತಾಯ ಮಾಡಿವೆ. 

ಬೆಂಗಳೂರು, ಎ.12 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎ.17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದು ವಿವಾದಿತ ಜಾತಿ ಗಣತಿ ವರದಿ ಬಗ್ಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ವಿರೋಧಿಸಿದ್ದು, ಹೊಸದಾಗಿ ವರದಿ ರೂಪಿಸುವಂತೆ ಒತ್ತಾಯ ಮಾಡಿವೆ. 

ಜಾತಿ ಗಣತಿ ವರದಿ ದೋಷಪೂರಿತವಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಬಿ.ಕೆಂಚಪ್ಪ ಗೌಡ ಹೇಳಿದ್ದು ಈ ಸಮೀಕ್ಷಾ ವರದಿಗೆ ಯಾವುದೇ ಆಧಾರವಿಲ್ಲ. ಇದು ಸಂಪೂರ್ಣ ದೋಷಪೂರಿತ. 2011ರ ಜನಗಣತಿ ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ. ಇದು ಇಂದಿನ ಸಂದರ್ಭದಲ್ಲಿ ಅರ್ಥಹೀನವಾಗಿದೆ. ನಮ್ಮ ಸಮುದಾಯದ ಯಾರೂ ಗಣತಿದಾರರನ್ನು ನೋಡಿಲ್ಲ. ಹೀಗಾಗಿ ಜಾತಿ ಗಣತಿ ನಡೆಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದರು. 

ನಿವೃತ್ತ ಐಎಎಸ್ ಅಧಿಕಾರಿ, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಹೇಳಿಕೆ ನೀಡಿದ್ದು, ಜಾತಿ ಗಣತಿ ಅಕ್ರಮ ಮತ್ತು ದೋಷಪೂರಿತವಾಗಿದೆ. ಭಾರತೀಯ ಜನಗಣತಿ ಕಾಯ್ದೆಯಡಿ ರಾಜ್ಯ ಸರ್ಕಾರಕ್ಕೆ ಜನಗಣತಿ ನಡೆಸುವ ಅಧಿಕಾರವಿಲ್ಲ. ಭಾರತ ಸರ್ಕಾರ ಮಾತ್ರ ಇದನ್ನು ಮಾಡಬಹುದು. 1931ರ ನಂತರ ಇದನ್ನು ಇಲ್ಲಿಯ ವರೆಗೆ ಮಾಡಿಲ್ಲ. ಕೇಂದ್ರ ಸರ್ಕಾರ ಹೊರತುಪಡಿಸಿ ಯಾವುದೇ ಪ್ರಾಧಿಕಾರ ಮಾಡುವ ಜಾತಿ ಗಣತಿ ಕಾನೂನು ಬಾಹಿರವಾಗುತ್ತದೆ ಎಂದು ಹೇಳಿದರು.

ಸಮೀಕ್ಷೆ ಸಮಯದಲ್ಲಿ ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಪಡೆಯುವ ಉದ್ದೇಶದಿಂದ ವಂಚಿಸಲಾಗಿದೆ. ಮೀಸಲಾತಿ ಸೌಲಭ್ಯ ಪಡೆಯಲು ಜನರು ತಮ್ಮ ಜಾತಿಗಳನ್ನು ಹಿಂದುಳಿದ ಸಮುದಾಯಗಳಿಗೆ ಸೇರಿಸಿದ್ದಾರೆ ಎಂದು ಹೇಳಿದ್ದಾರೆ. 

ಚಿತ್ರದುರ್ಗದ ಮುರುಘಾ ಮಠದ ಪ್ರಭಾರಿ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾತಿ ಗಣತಿ ವರದಿ ಶಿಫಾರಸ್ಸುಗಳು ಬಹಿರಂಗವಾಗುವವರೆಗೂ ಕಾಯುತ್ತೇವೆ, ಪರವಾಗಿದೆಯೋ ಅಥವಾ ವಿರೋಧವಾಗಿದೆಯೋ ಕಾದು ನೋಡಬೇಕು, ಅಖಿಲ ಭಾರತ ವೀರಶೈವ ಮಹಾಸಭಾ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು. 

ಜಾತಿ ಸಮೀಕ್ಷೆಗೆ ರಾಜ್ಯ ಸರ್ಕಾರ 165 ಕೋಟಿ ರೂ. ವೆಚ್ಚ ಮಾಡಿರುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ಯಾವುದೇ ಸಚಿವರು ವರದಿಗೆ ವಿರುದ್ಧವಾಗಿಲ್ಲ. ಈ ಬಗ್ಗೆ ಸೂಕ್ತ ಸಮಾಲೋಚನೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Vokkaliga and Lingayat Leaders Challenge Legitimacy of Caste Survey, Claims of Flawed Methodology and State Overreach.