Dharmasthala burial case, Gag Order: ಮಾಧ್ಯಮ ನಿರ್ಬಂಧ ಕೋರಿದ್ದ ಧರ್ಮಸ್ಥಳ ಪರ ಅರ್ಜಿ ವಜಾಗೊಳಿಸಿದ ಬೆಂಗಳೂರು ಸಿವಿಲ್ ಕೋರ್ಟ್, 8842 ಲಿಂಕ್ ಡಿಲೀಟ್ ಮಾಡಲು ಕೋರಿದ್ದ ಅರ್ಜಿಗೆ ಹಿನ್ನಡೆ

06-08-25 10:51 pm       Bangalore Correspondent   ಕರ್ನಾಟಕ

ಮಾಧ್ಯಮಗಳ ಮೇಲೆ ನಿರ್ಬಂಧ ಕೋರಿ ಸಲ್ಲಿಸಲಾಗಿದ್ದ ಧರ್ಮಸ್ಥಳ ಸಂಸ್ಥೆಗಳ ಪರ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಸಿಟಿ ಸಿವಿಲ್ ನ್ಯಾಯಾಧೀಶೆ ಅನಿತಾ ಎಂ. ಅವರು ಮಾಧ್ಯಮಗಳ ಮೇಲಿನ ನಿರ್ಬಂಧ ಕೋರಿದ್ದ ಅರ್ಜಿಯನ್ನು ಬುಧವಾರ ವಜಾ ಮಾಡಿದ್ದಾರೆ.

ಬೆಂಗಳೂರು, ಆ.6 : ಮಾಧ್ಯಮಗಳ ಮೇಲೆ ನಿರ್ಬಂಧ ಕೋರಿ ಸಲ್ಲಿಸಲಾಗಿದ್ದ ಧರ್ಮಸ್ಥಳ ಸಂಸ್ಥೆಗಳ ಪರ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ. ಸಿಟಿ ಸಿವಿಲ್ ನ್ಯಾಯಾಧೀಶೆ ಅನಿತಾ ಎಂ. ಅವರು ಮಾಧ್ಯಮಗಳ ಮೇಲಿನ ನಿರ್ಬಂಧ ಕೋರಿದ್ದ ಅರ್ಜಿಯನ್ನು ಬುಧವಾರ ವಜಾ ಮಾಡಿದ್ದಾರೆ.

ಧರ್ಮಸ್ಥಳ ಸುತ್ತಮುತ್ತ ಕಾಡಿನಲ್ಲಿ ನೂರಾರು ಹೆಣಗಳನ್ನು ಹೂತ ಆರೋಪದ ಪ್ರಕರಣದ ಬಗ್ಗೆ ಮಾಧ್ಯಮಗಳ ಸುದ್ದಿ ಪ್ರಸಾರ ನಿರ್ಬಂಧಿಸಬೇಕೆಂದು ಧರ್ಮಸ್ಥಳ ದೇವಸ್ಥಾನದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಪರವಾಗಿ ಬೆಂಗಳೂರು ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿತ್ತು. ಇದಲ್ಲದೆ, 8842 ಮಾಧ್ಯಮ ಲಿಂಕ್ ಗಳನ್ನು ಡಿಲೀಟ್ ಮಾಡಬೇಕೆಂದು ಮಾನನಷ್ಟ ಮೊಕದ್ದಮೆಯನ್ನೂ ಸಲ್ಲಿಸಲಾಗಿತ್ತು. ಇದರಲ್ಲಿ 4140 ಯೂಟ್ಯೂಬ್ ವಿಡಿಯೋಗಳು, 932 ಫೇಸ್ಬುಕ್ ಪೋಸ್ಟ್ ಗಳು, 3584 ಇನ್ ಸ್ಟಾ ಗ್ರಾಮ್ ಪೋಸ್ಟ್ ಗಳು, 108 ನ್ಯೂಸ್ ಆರ್ಟಿಕಲ್ ಗಳು, 37 ರಿಡಿಫ್ ಪೋಸ್ಟ್ ಗಳು ಮತ್ತು 41 ಟ್ವೀಟ್ ಗಳನ್ನು ತೆಗೆದುಹಾಕಬೇಕೆಂದು ಕೋರಲಾಗಿತ್ತು.

ಜುಲೈ 21ರಂದು ಅರ್ಜಿಯನ್ನು ವಿಚಾರಣೆ ನಡೆಸಿದ್ದ ಈ ಹಿಂದೆ ಸಿಟಿ ಸಿವಿಲ್ ನ್ಯಾಯಾಧೀಶರಾಗಿದ್ದ ವಿಜಯ ಕುಮಾರ್ ರೈ ಆಗಸ್ಟ್ 5ರ ವರೆಗೆ ಮಧ್ಯಂತರ ನಿರ್ಬಂಧ ವಿಧಿಸಿ ಆದೇಶ ಮಾಡಿದ್ದರು. ಆದರೆ ಈ ನಿರ್ಬಂಧ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಿ ತಡೆಯಾಜ್ಞೆ ತೆರವುಗೊಳಿಸಿದ್ದಲ್ಲದೆ, ಕೆಳಗಿನ ಕೋರ್ಟಿನಲ್ಲಿಯೇ ಈ ಕುರಿತು ವಿಚಾರಣೆ ನಡೆಸುವಂತೆ ಹೇಳಿತ್ತು. ಇದೇ ವೇಳೆ, ಸಾಮಾಜಿಕ ಕಾರ್ಯಕರ್ತ ನವೀನ್ ಸೂರಿಂಜೆ, ಸಿಟಿ ಸಿವಿಲ್ ಕೋರ್ಟಿನಲ್ಲಿ ನ್ಯಾಯಾಧೀಶರಾಗಿರುವ ವಿಜಯ್ ಕುಮಾರ್ ರೈ ಧರ್ಮಸ್ಥಳಕ್ಕೆ ಸೇರಿದ ಎಸ್ಡಿಎಂ ಲಾ ಕಾಲೇಜಿನಲ್ಲಿ 1995-98ರಲ್ಲಿ ವಿದ್ಯಾರ್ಥಿಯಾಗಿದ್ದು, ನಿಷ್ಪಕ್ಷಪಾತ ತೀರ್ಪು ನೀಡಲು ತೊಡಕಾಗುತ್ತದೆ, ನ್ಯಾಯಾಧೀಶರ ಬದಲಾವಣೆ ಆಗಬೇಕೆಂದು ಆಗ್ರಹ ಮಾಡಿದ್ದರು.

ಇದರಂತೆ, ವಿಜಯ ಕುಮಾರ್ ರೈ ಧರ್ಮಸ್ಥಳ ಪ್ರಕರಣವನ್ನು ವಿಚಾರಣೆ ಮಾಡುವುದರಿಂದ ಹಿಂದೆ ಸರಿದಿದ್ದು, ಅನಿತಾ ಎಂ. ಅವರಿದ್ದ ಪೀಠಕ್ಕೆ ಅರ್ಜಿ ಬಂದಿತ್ತು. ಬುಧವಾರ ವಿಚಾರಣೆ ನಡೆಸಿದಾಗ ಹರ್ಷೇಂದ್ರ ಕುಮಾರ್ ಪರ ವಕೀಲರು ತಡೆಯಾಜ್ಞೆ ಮುಂದುವರಿಸಬೇಕು, ಹೈಕೋರ್ಟ್ ಕುಡ್ಲ ರಾಂಪೇಜ್ ಯೂಟ್ಯೂಬ್ ವಿರುದ್ಧ ಮಾತ್ರ ಆದೇಶ ಕೊಟ್ಟಿರುವುದೆಂದು ಉಲ್ಲೇಖಿಸಿದರು. ಆದರೆ ಕುಡ್ಲ ರಾಂಪೇಜ್ ಪರ ವಕೀಲ ಸಾಕ್ಷಿ ಸತೀಶ್ ಇದಕ್ಕೆ ವಿರೋಧಿಸಿದ್ದು, ಹೈಕೋರ್ಟ್ ಆದೇಶದಲ್ಲಿ ನಾಗರಿಕರ ಹಕ್ಕನ್ನು ಉಲ್ಲಂಘಿಸಿದ್ದನ್ನು ಆಕ್ಷೇಪಿಸಲಾಗಿದೆ ಎಂದು ಹೇಳಿದರು. ಇದರಂತೆ, ಧರ್ಮಸ್ಥಳ ಪರ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿಟಿ ಸಿವಿಲ್ ನ್ಯಾಯಾಲಯ ವಜಾ ಮಾಡಿ ಆದೇಶಿಸಿತು.

Dharmasthala burial case: No more media gag after new judge rejects injunction plea by temple admin.