ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ ಸಭೆ ನಡೆಸಿಕೊಂಡು ಬನ್ನಿ, ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಹೈಕೋರ್ಟ್ ಸೂಚನೆ, ಮತ್ತೆ ಸರ್ಕಾರದ ಬುಡಕ್ಕೆ ಚೆಂಡು 

24-10-25 06:04 pm       HK News Desk   ಕರ್ನಾಟಕ

ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಸುವ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರಕ್ಕೆ ಸೌಹಾರ್ದದಿಂದ ವಿಷಯ ಇತ್ಯರ್ಥಗೊಳಿಸಲು ಸೂಚನೆ ನೀಡಿದೆ. ಇದಕ್ಕಾಗಿ ಅ.28ರಂದು ಶಾಂತಿಸಭೆ ನಡೆಸಿ ಸರ್ಕಾರದ ನಿರ್ಧಾರ ತಿಳಿಸುವಂತೆ ಸೂಚಿಸಿದ್ದು ಅ.30ಕ್ಕೆ ವಿಚಾರಣೆ ಮುಂದೂಡಿದೆ. 

ಕಲಬುರಗಿ, ಅ.24 : ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ನಡೆಸುವ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರಕ್ಕೆ ಸೌಹಾರ್ದದಿಂದ ವಿಷಯ ಇತ್ಯರ್ಥಗೊಳಿಸಲು ಸೂಚನೆ ನೀಡಿದೆ. ಇದಕ್ಕಾಗಿ ಅ.28ರಂದು ಶಾಂತಿಸಭೆ ನಡೆಸಿ ಸರ್ಕಾರದ ನಿರ್ಧಾರ ತಿಳಿಸುವಂತೆ ಸೂಚಿಸಿದ್ದು ಅ.30ಕ್ಕೆ ವಿಚಾರಣೆ ಮುಂದೂಡಿದೆ. 

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿರುವ ತಹಶೀಲ್ದಾರ್‌ ಕ್ರಮವನ್ನು ಆಕ್ಷೇಪಿಸಿ ಆರೆಸ್ಸೆಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ವಿಚಾರಣೆ ನಡೆಸಿದರು. 

ಸರ್ಕಾರ ಮತ್ತು ಆರೆಸ್ಸೆಸ್ ಕಡೆಯ ವಕೀಲರ ವಾದ ಆಲಿಸಿದ ನ್ಯಾಯಪೀಠವು, ಅಕ್ಟೋಬರ್‌ 28ಕ್ಕೆ ಶಾಂತಿ ಸಭೆ ನಡೆಸಿ ಜಿಲ್ಲಾ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದೆ. ಅಲ್ಲದೆ, ಅಕ್ಟೋಬರ್‌ 30ರಂದು ಮುಂದಿನ ನಿರ್ಧಾರ ಮಾಡೋಣ. ಎಲ್ಲವೂ ಸರಿಯಾದರೆ ನವೆಂಬರ್‌ 2ಕ್ಕೆ ಆರ್‌ಎಸ್‌ಎಸ್‌ ಪಥಸಂಚಲನ ನಡೆಸಬಹುದು ಎಂದು ಪೀಠ ಸೂಚನೆ ನೀಡಿದೆ. 

ಆರೆಸ್ಸೆಸ್ ಪರವಾಗಿ ಪುತ್ತೂರು ಮೂಲದ ವಕೀಲ ಅರುಣ್ ಶ್ಯಾಮ್ ಹಾಜರಾಗಿದ್ದರು. ಕೋರ್ಟ್ ಸೂಚನೆಯಂತೆ ನ.2ರಂದು ಪಥಸಂಚಲನಕ್ಕೆ ದಿನ ನಿಗದಿ ಮಾಡಲಾಗಿತ್ತು. ಇತರ ಸಂಘಟನೆಗಳು ಆ ದಿನವೇ ಮೆರವಣಿಗೆ ನಡೆಸಲು ಅರ್ಜಿ ಸಲ್ಲಿಸುವ ಮೂಲಕ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ಆರೆಸ್ಸೆಸ್ ಪಥಸಂಚಲನಕ್ಕೆ ಭದ್ರತೆ ನೀಡಬೇಕು ಎಂದು ವಾದಿಸಿದರು. 

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗಿದ್ದು ಇದರ ಬಗ್ಗೆ ನಿರ್ಣಯಿಸಲು ಎರಡು ವಾರದ ಸಮಯ ಕೊಡುವಂತೆ ಕೇಳಿಕೊಂಡರು. ಸರ್ಕಾರದ ವಾದಕ್ಕೆ ಆಕ್ಷೇಪಿಸಿದ ಅರುಣ್ ಶ್ಯಾಮ್, ರಾಜ್ಯ ಸರ್ಕಾರಕ್ಕೆ ಭದ್ರತೆ ಕೊಡಲು ಆಗಲ್ಲ ಅಂದ್ರೆ ಕೇಂದ್ರ ಮೀಸಲು ಪಡೆಯ ಸಹಾಯ ಪಡೆಯಲಿ. ಶಾಂತಿ ಸುವ್ಯವಸ್ಥೆ ವಿಚಾರದಲ್ಲಿ ಎರಡು ವಾರ ಕಾಲ ಸಮಯ ದೂಡುವುದು ಸರಿಯಲ್ಲ ಎಂದು ಹೇಳಿದರು. ನ್ಯಾಯಾಧೀಶರು ಕೊನೆಗೆ, ಅ.28ರಂದು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆ ನಡೆಸಿ ಬನ್ನಿ ಎಂದು ಮತ್ತೊಂದು ಅವಕಾಶ ನೀಡಿ ವಿಚಾರಣೆ ಮುಂದೂಡಿದರು. 

ಆರೆಸ್ಸೆಸ್ ಪಥ ಸಂಚಲನಕ್ಕೆ ಅವಕಾಶ ನೀಡಬಾರದೆಂದು ದಲಿತ ಸಂಘಟನೆಗಳು ತಮಗೂ ಜಾಥಾ ನಡೆಸಲು ಅವಕಾಶ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿರುವುದು ಕಲಬುರಗಿಯಲ್ಲಿ ಬಿಸಿಯೇರುವಂತೆ ಮಾಡಿದೆ.

The Kalaburagi Bench of the Karnataka High Court has directed the state government to amicably resolve the ongoing dispute regarding permission for the RSS Path Sanchalan (route march) in Chittapur town.