ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ್ಕೂ ಹೈಕಮಾಂಡ್‌ ಕೇಳಬೇಡಿ, ಯಾರೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿದ್ದಲ್ಲ ; ವ್ಯಕ್ತಿ ಪೂಜೆ ಸಲ್ಲದು, ನಾಯಕತ್ವ ಚರ್ಚೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಕಿಡಿ 

21-12-25 05:33 pm       HK News Desk   ಕರ್ನಾಟಕ

ಅಧಿಕಾರ ಹಂಚಿಕೆಗೆ ಸಂಬಂಧಿಸಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳುತ್ತಿರುವಾಗಲೇ ರಾಜ್ಯದ ಗೊಂದಲಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು, ಎಲ್ಲದಕ್ಕೂ ಹೈಕಮಾಂಡ್‌ ಕೇಳಬಾರದು ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

ಕಲಬುರಗಿ, ಡಿ.21 : ಅಧಿಕಾರ ಹಂಚಿಕೆಗೆ ಸಂಬಂಧಿಸಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳುತ್ತಿರುವಾಗಲೇ ರಾಜ್ಯದ ಗೊಂದಲಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು, ಎಲ್ಲದಕ್ಕೂ ಹೈಕಮಾಂಡ್‌ ಕೇಳಬಾರದು ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ. 

ನಾಯಕತ್ವ ವಿವಾದವನ್ನು ಇತ್ಯರ್ಥಪಡಿಸಿ ಸುಗಮ ಆಡಳಿತಕ್ಕೆ ಸಹಕರಿಸಬೇಕು ಎಂಬ ರಾಜ್ಯ ಕಾಂಗ್ರೆಸ್‌‍ ನಾಯಕರ ಒತ್ತಾಸೆಗೆ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಗೊಂದಲಗಳನ್ನು ಹೈಕಮಾಂಡ್‌ ಸೃಷ್ಟಿಸಿಲ್ಲ, ಸ್ಥಳೀಯವಾಗಿ ಗೊಂದಲ ಮಾಡಿಕೊಳ್ಳಲಾಗಿದೆ. ಸ್ಥಳೀಯ ನಾಯಕರುಗಳೇ ಇದನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ನಾಯಕತ್ವ ವಿವಾದವನ್ನು ದೆಹಲಿ ಮಟ್ಟಕ್ಕೆ ತರಬೇಡಿ ಎನ್ನುವ ಸೂಚನೆ ನೀಡಿದ್ದಾರೆ. 

ರಾಜ್ಯದಲ್ಲಿನ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸಿ ಎಂದು ವಿ.ಆರ್‌.ಸುದರ್ಶನ್‌ ಪತ್ರ ಬರೆದು  ಮನವಿ ಮಾಡಿರುವುದು ನನಗೆ ಗೊತ್ತಿಲ್ಲ. ಕಚೇರಿಗೆ ಬಂದಿರಬಹುದು. ಅದರಲ್ಲಿ ಹೈಕಮಾಂಡ್‌ ನಾಯಕರು ಗೊಂದಲ ಬಗೆಹರಿಸಬೇಕು ಎಂಬ ಅಭಿಪ್ರಾಯ ಇರಬಹುದು, ಆದರೆ ಗೊಂದಲಗಳನ್ನು ನಾವು ಸೃಷ್ಟಿಸಿದ್ದಲ್ಲ ಎಂದು ಹೇಳಿದರು.

ಡಿ.ಕೆ.ಶಿ ಡಿ.23ರಂದು ದೆಹಲಿಗೆ ಭೇಟಿ ನೀಡುವ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ, ಅವರ ದೆಹಲಿ ಭೇಟಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು. ಗೊಂದಲಗಳನ್ನು ಸ್ಥಳೀಯವಾಗಿಯೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್‌ ಮಧ್ಯ ಪ್ರವೇಶಿಸಬೇಕು ಎನ್ನುವುದು ಸರಿಯಲ್ಲ. ಇಲ್ಲಿನ ಗೊಂದಲಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು ಎಂದರು. 

ಪಕ್ಷವನ್ನು ಎಲ್ಲರೂ ಸೇರಿ ಕಟ್ಟಿದ್ದಾರೆ. ಯಾರೋ ಒಬ್ಬರು ನಾನು ಕಟ್ಟಿದ್ದೇನೆ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಇದು ಕಾರ್ಯಕರ್ತರು ಕಟ್ಟಿದ ಪಕ್ಷ. ಯಾವುದೇ ನಾಯಕರು ಕಾಂಗ್ರೆಸ್‌‍ ಗೆ ಬಂದರೂ ನಮ್ಮ ಪಕ್ಷದ ಕಾರ್ಯಕರ್ತರು ಅವರನ್ನು ಬೆಂಬಲಿಸುತ್ತಾರೆ. ನನ್ನಿಂದಲೇ ಪಕ್ಷ ಗೆದ್ದಿದೆ ಎಂದು ಯಾರು ಹೇಳಿಕೊಳ್ಳಬಾರದು ಎನ್ನುವ ಮೂಲಕ ಡಿಕೆಶಿ ಹಾಗೂ ಇತರ ನಾಯಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಕೆಲವು ಕಾರ್ಯಕರ್ತರು ಇಂತಹವರಿಂದಲೇ ಪಕ್ಷ ಉಳಿಯುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಧೋರಣೆಯನ್ನು ಬಿಟ್ಟು ಬಿಡಬೇಕು ಎನ್ನುವ ಮೂಲಕ ವ್ಯಕ್ತಿ ಪೂಜೆ ಮಾಡುವವರಿಗೆ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನರೇಗಾ ಯೋಜನೆಯ ಹೆಸರು ಬದಲಾವಣೆಗೆ ನಮ್ಮ ಪಕ್ಷದ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ ಖರ್ಗೆ, ಇದು ಬಡವರಿಗಾಗಿ ರೂಪಿಸಿದ ಯೋಜನೆ. ನಾವು ಅಧಿಕಾರದಲ್ಲಿದ್ದಾಗ ರೂಪಿಸಿದ್ದು, ಅವರ ಯೋಜನೆಯಲ್ಲ. ಹಿಂದೆ ಅಟಾಮಿಕ್‌ ಎನರ್ಜಿ ಬಗ್ಗೆ ಮನಮೋಹನ್‌ ಸಿಂಗ್‌ ಸರ್ಕಾರ ಯೋಜನ ರೂಪಿಸಿದಾಗ ಬಿಜೆಪಿಯವರು ವಿರೋಧ ಮಾಡಿದ್ದರು. ಈಗ ಅವರೇ ಅದೇ ಯೋಜನೆಯನ್ನು ಜಾರಿಗೆ ತರುತ್ತಿದ್ದಾರೆ. ಕಾಂಗ್ರೆಸ್ ಯೋಜನೆಗಳನ್ನು ಮೊದಲು ವಿರೋಧ ಮಾಡುತ್ತಾ ನಂತರ ತಾವೇ ರೂಪಿಸಿದ್ದಾಗಿ ಬಿಂಬಿಸಿಕೊಳ್ಳುತ್ತಾರೆ. ಬಿಜೆಪಿಯವರಿಗೆ ದೇಶದ ಹಿತದೃಷ್ಟಿಯಿಂದ ದೂರದೃಷ್ಟಿ ಇಲ್ಲ. ಮುಂದಾಲೋಚನೆ ಇಲ್ಲ. ಯೋಜ‌ನಾ ಆಯೋಗವನ್ನು ತೆಗೆದು ನೀತಿ ಆಯೋಗ ಮಾಡಿದರು. ಅಲ್ಲಿ ಈಗ ನೀತಿಯೂ ಇಲ್ಲ, ಯೋಜನೆಯೂ ಇಲ್ಲ ಎಂಬಂತಾಗಿದೆ. ಹೆಸರು ಬದಲಾವಣೆ ಮಾತ್ರ ಬಿಜೆಪಿಯವರ ಸಾಧನೆ ಎಂದು ಟೀಕಿಸಿದರು. 

ಬಾಂಗ್ಲಾದೇಶಿಯರು ದೇಶದ ಒಳಗೆ ನುಸುಳುತ್ತಿದ್ದಾರೆ. ಅವರನ್ನು ಮಟ್ಟ ಹಾಕಲು ತಾಕತ್ತಿಲ್ಲದ ಮೇಲೆ ಬಿಜೆಪಿಯವರು ಕೇಂದ್ರದಲ್ಲಿ ಅಧಿಕಾರದಲ್ಲಿ ಏಕೆ ಇದ್ದಾರೆ ಎಂದು ಕೇಳಿದ ಮಲ್ಲಿಕಾರ್ಜುನ ಖರ್ಗೆ, ಗಡಿಗಳಲ್ಲಿ ಶಸ್ತ್ರ ಬಲಗಳನ್ನು ಬಳಸಿಕೊಂಡು ಜನರಿಗೆ ರಕ್ಷಣೆ ನೀಡಬೇಕು ಎಂದರು.

Amid ongoing disagreements within the Karnataka Congress over power-sharing, AICC President Mallikarjun Kharge has issued a strong warning to state leaders, urging them to settle disputes locally instead of seeking intervention from the party high command for every issue.