ಮಲಯಾಳಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಅಸ್ತು ಎಂದ ಕೇಂದ್ರ ಸರ್ಕಾರ ; ಕೇರಳ ಇನ್ಮುಂದೆ ಕೇರಳಂ, ಇಷ್ಟಕ್ಕೂ ಇವೆರಡರ ಮಧ್ಯೆ ಇರುವ ವ್ಯತ್ಯಾಸವೇನು?

24-02-26 07:54 pm       HK News Staffer   ಕರ್ನಾಟಕ

ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ನವದೆಹಲಿ, ಫೆ.24 : ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಅಧಿಕೃತವಾಗಿ ಬದಲಾಯಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯ ವಿಧಾನಸಭೆಯಲ್ಲಿ ‘ಕೇರಳ’ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ನಿರ್ಣಯ ಮಂಡಿಸಿದ್ದರು. ಈ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡು ಕೇಂದ್ರದ ಒಪ್ಪಿಗೆಗೆ ಕಳುಹಿಸಲಾಗಿತ್ತು. ಇದೀಗ ಕೇಂದ್ರ ಸಚಿವ ಸಂಪುಟವು ಸಮ್ಮತಿ ಸೂಚಿಸಿದ್ದು, ರಾಜ್ಯದ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.

ಸಂವಿಧಾನದ ಮೊದಲ ಪರಿಚ್ಛೇದದಲ್ಲಿ ರಾಜ್ಯದ ಹೆಸರನ್ನು ತಿದ್ದುಪಡಿ ಮಾಡಬೇಕಾಗಿದ್ದು, ಸಂಸತ್ತಿನ ಅನುಮೋದನೆ ಅಗತ್ಯವಿದೆ. ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಿರುವ ಎಲ್ಲಾ ಭಾಷೆಗಳಲ್ಲಿ ‘ಕೇರಳಂ’ ಎಂಬ ಹೆಸರನ್ನೇ ಬಳಕೆ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ.

‘ಕೇರಳ’ – ‘ಕೇರಳಂ’ ಭಾಷಾ ವ್ಯತ್ಯಾಸ:

ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ಮೂಲತಃ ‘ಕೇರಳಂ’ ಎಂದೇ ಕರೆಯಲಾಗುತ್ತದೆ. ಆದರೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ‘ಕೇರಳ’ ಎಂಬ ರೂಪ ಜನಪ್ರಿಯವಾಗಿದೆ. ಸ್ಥಳೀಯ ಭಾಷೆಯ ಉಚ್ಚಾರಣೆಗೆ ಹೊಂದುವಂತೆ ಸಂವಿಧಾನದಲ್ಲೂ ‘ಕೇರಳಂ’ ಎಂದು ದಾಖಲು ಮಾಡಬೇಕೆಂಬುದು ಮಲಯಾಳ ಭಾಷಿಕರ ಬಹುಕಾಲದ ಬೇಡಿಕೆಯಾಗಿತ್ತು.

ಭಾಷಾ ಶಾಸ್ತ್ರಜ್ಞರ ಪ್ರಕಾರ, ಹಲವು ಭಾರತೀಯ ರಾಜ್ಯಗಳ ಹೆಸರುಗಳು ಸ್ಥಳೀಯ ಭಾಷೆ ಮತ್ತು ಇಂಗ್ಲಿಷ್‌ನಲ್ಲಿ ಭಿನ್ನ ರೂಪದಲ್ಲಿವೆ. ಇಲ್ಲಿ ಬದಲಾವಣೆ ಕೇವಲ ಭಾಷಾ ಸ್ವರೂಪದ ಕುರಿತಾಗಿದ್ದು, ರಾಜ್ಯದ ಗಡಿ ಅಥವಾ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಐತಿಹಾಸಿಕ ದಾಖಲೆಗಳ ಪ್ರಕಾರ, ಕ್ರಿ.ಪೂ. 257ರ ವೇಳೆಗೆ ಚಕ್ರವರ್ತಿ ಅಶೋಕನ ಶಾಸನಗಳಲ್ಲಿ ‘ಕೇರಳಪುತ್ರ’ ಎಂಬ ಪದ ಉಲ್ಲೇಖವಾಗಿದೆ. ಇದು ಪ್ರಾಚೀನ ಕಾಲದಿಂದಲೂ ಈ ಪ್ರದೇಶಕ್ಕೆ ‘ಕೇರಳ’ ಎಂಬ ಗುರುತು ಇದ್ದುದನ್ನು ಸೂಚಿಸುತ್ತದೆ. ಮತ್ತೊಂದು ಸಿದ್ಧಾಂತ ಪ್ರಕಾರ, ಈ ಹೆಸರು ಪ್ರಾಚೀನ ಚೇರ ರಾಜವಂಶದ ‘ಚೇರಂ’ ಪದದಿಂದ ರೂಪಾಂತರಗೊಂಡಿದೆ ಎನ್ನಲಾಗುತ್ತದೆ. ಜರ್ಮನ್ ವಿದ್ವಾಂಸ ಡಾ. ಹರ್ಮನ್ ಗುಂಡರ್ಟ್ ತಮ್ಮ ಮಲಯಾಳಂ-ಇಂಗ್ಲಿಷ್ ನಿಘಂಟಿನಲ್ಲಿ ‘ಕೇರಂ’ ಪದವನ್ನು ‘ಚೇರಂ’ ರೂಪಾಂತರವೆಂದು ಉಲ್ಲೇಖಿಸಿದ್ದಾರೆ.

ಇನ್ನೊಂದು ನಂಬಿಕೆ ಪ್ರಕಾರ, ‘ಕೇರ’ ಎಂದರೆ ತೆಂಗಿನ ಮರ ಎಂಬ ಅರ್ಥ ಇದೆ. ರಾಜ್ಯದಲ್ಲಿ ತೆಂಗಿನ ಮರಗಳ ಸಮೃದ್ಧಿ ಇರುವುದರಿಂದ ‘ತೆಂಗಿನ ನಾಡು’ ಎಂಬ ಅರ್ಥದಲ್ಲೂ ‘ಕೇರಳಂ’ ಪದ ಬಳಸಲ್ಪಟ್ಟಿದೆ ಎನ್ನಲಾಗುತ್ತದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಕೂಡ ಚರ್ಚೆಗೆ ಕಾರಣವಾಗಿತ್ತು. ಇದೀಗ ‘ಕೇರಳ’ದಿಂದ ‘ಕೇರಳಂ’ಗೆ ಹೆಸರು ಬದಲಾವಣೆ ಕೇಂದ್ರದ ಅನುಮೋದನೆ ಪಡೆದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಸಂಸತ್ತಿನ ಅಂಗೀಕಾರದ ನಂತರ ಹೆಸರು ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿದೆ.