ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯೋಗಿಗಳು ಸಾವಿಗೆ ಶರಣು ; ವಿಡಿಯೋ ಕರೆ ಬಳಿಕ ನೇಣಿಗೆ ಕೊರಳೊಡ್ಡಿದ ಕಾಸರಗೋಡಿನ ಯುವತಿ

13-08-26 01:17 pm       HK News Staffer   ಕ್ರೈಂ

ವಿವಾಹ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯೋಗಿಗಳಾಗಿದ್ದ ಕಾಸರಗೋಡು ಮತ್ತು ಕಣ್ಣೂರಿನ ಯುವ ಜೋಡಿ ವಿಡಿಯೋ ಕರೆಯ ಬಳಿಕ ಪ್ರತ್ಯೇಕ ಜಾಗದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಕಾಸರಗೋಡು, ಆ.13: ವಿವಾಹ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯೋಗಿಗಳಾಗಿದ್ದ ಕಾಸರಗೋಡು ಮತ್ತು ಕಣ್ಣೂರಿನ ಯುವ ಜೋಡಿ ವಿಡಿಯೋ ಕರೆಯ ಬಳಿಕ ಪ್ರತ್ಯೇಕ ಜಾಗದಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. 

ಕಾಸರಗೋಡು ಜಿಲ್ಲೆಯ ಪಳ್ಳಿಕ್ಕರ ಪೂಚಕ್ಕಾಡ್ ನಿವಾಸಿ ಪಿ. ಅನುಶ್ರೀ (25) ಮೈಸೂರು ಜಿಲ್ಲೆಯ ಹುಣಸೂರಿನ ಬಾಡಿಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಇವರು ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗೆ ಘಟನೆ ನಡೆದಿದ್ದು ಇದಾಗಿ ಕೆಲವೇ ಗಂಟೆಗಳಲ್ಲಿ ಬೆಳಗ್ಗೆ 10 ಗಂಟೆಯ ಸುಮಾರಿಗೆ, ಅನುಶ್ರೀ ಅವರೊಂದಿಗೆ ನಿಶ್ಚಿತಾರ್ಥ ಆಗಿದ್ದ ಯುವಕ ಕಣ್ಣೂರು ಮೂಲದ ವಿ. ಅಮಲ್ (26) ಎರ್ನಾಕುಲಂ ನಾರ್ತ್ ರೈಲ್ವೇ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಅಮಲ್ ಅವರು ಎರ್ನಾಕುಲಂನ ಎಂ.ಜಿ. ರೋಡ್ ಎಸ್‌ಬಿಐ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 

ಅನುಶ್ರೀ ಮತ್ತು ಅಮಲ್ ನಡುವೆ ಇತ್ತೀಚೆಗಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಮುಂದಿನ ಡಿಸೆಂಬರ್ 26ರಂದು ಮದುವೆಗೆ ದಿನಾಂಕ ನಿಗದಿಯಾಗಿತ್ತು. ಕಳೆದ ಶನಿವಾರವಷ್ಟೇ ಇಬ್ಬರೂ ಕಾಸರಗೋಡಿನ ಮನೆಗೆ ಬಂದು ಭಾನುವಾರ ಸಂಜೆ ವಾಪಸ್ ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಆನಂತರ ತಮ್ಮ ಕೆಲಸದ ಸ್ಥಳಕ್ಕೆ ತೆರಳಿದ್ದು ಬುಧವಾರ ಬೆಳಗ್ಗೆ ಇಬ್ಬರೂ ವಿಡಿಯೋ ಕರೆ ಮಾಡಿದ್ದಾರೆ. ಈ ವೇಳೆ, ಏನು ಮಾತುಕತೆ ಆಗಿದೆ, ಯಾಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿಲ್ಲ. ಇಬ್ಬರೂ ಡೆತ್ ನೋಟ್ ಬರೆದಿಟ್ಟಿಲ್ಲ. ಖಾಸಗಿ ಮಾತುಕತೆ ವಿಷಯದಲ್ಲಿ ವೈಮನಸ್ಸಿನಿಂದಾಗಿ ಸಾವಿನ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ. 

ಅಮಲ್ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಎರ್ನಾಕುಲಂ ಟೌನ್ ನಾರ್ತ್ ಪೊಲೀಸರು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಆತ‌ನೂ ಬೆಳಗ್ಗೆ ಹತ್ತು ಗಂಟೆ ವೇಳೆಗೆ ಕೊಠಡಿಯಲ್ಲಿ ಸಾವಿಗೆ ಶರಣಾಗಿದ್ದ. ಎರಡೂ ಕಡೆಯ ಪೊಲೀಸರು ಅನುಶ್ರೀ ಮತ್ತು ಅಮಲ್ ಸಾವಿನ ಕುರಿತಾಗಿ ತನಿಖೆ ಕೈಗೊಂಡಿದ್ದಾರೆ. ವಿವಾಹಕ್ಕೆ ಕೆಲವೇ ದಿನ ಇರುವಾಗ ದುರಂತ ಸಂಭವಿಸಿರುವುದು ಎರಡೂ ಕುಟುಂಬಗಳಲ್ಲಿ ಆಘಾತ ಮೂಡಿಸಿದೆ.