ಆರೆಸ್ಸೆಸ್ ನೋಂದಣಿ, ಕಾರ್ಯ ಚಟುವಟಿಕೆ, ಕಾನೂನು ಮಾನ್ಯತೆ ಬಗ್ಗೆ ಪ್ರಶ್ನೆ ಎತ್ತಿದ ಸಚಿವ ಪ್ರಿಯಾಂಕ್ ಖರ್ಗೆ ; ಚರ್ಚೆ ಹುಟ್ಟುಹಾಕಿದ ಸರ್ಕಾರದ ಪತ್ರ, ನೋಂದಣಿ ಅಗತ್ಯವಿಲ್ಲ ಎಂದು ಭಾಗವತ್ ತಿರುಗೇಟು

16-06-26 12:26 pm       HK News Staffer   ಕರ್ನಾಟಕ

ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ನೋಂದಾಯಿಸಿಕೊಳ್ಳುವ ಜತೆಗೆ ತನ್ನ ಸಾಂಖ್ಯಿಕ ಮತ್ತು ಕಾನೂನುಬದ್ಧ ಸ್ಥಿತಿಗತಿ ಕುರಿತಂತೆ ಸ್ಪಷ್ಟನೆ ನೀಡಬೇಕು ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು, ಜೂನ್ 16: ನೂರು ವರ್ಷ ಪೂರೈಸಿದ ಸಂಭ್ರಮದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ನೋಂದಾಯಿಸಿಕೊಳ್ಳುವ ಜತೆಗೆ ತನ್ನ ಸಾಂಖ್ಯಿಕ ಮತ್ತು ಕಾನೂನುಬದ್ಧ ಸ್ಥಿತಿಗತಿ ಕುರಿತಂತೆ ಸ್ಪಷ್ಟನೆ ನೀಡಬೇಕು ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಈ ಸಂಬಂಧ ವಿಷಯಗಳ ಕುರಿತು ಚರ್ಚಿಸಲು ಅಧಿಕೃತ ಪ್ರತಿನಿಧಿಗಳನ್ನು ನಿಯೋಜಿಸಿ ಲಿಖಿತ ಉತ್ತರ ನೀಡಬೇಕೆಂದು ಖರ್ಗೆ ಅವರು ಕಳೆದ ಜೂ.13ರಂದು ಬರೆದಿರುವ ಪತ್ರದಲ್ಲಿ ಕೋರಿದ್ದಾರೆ. ಹೊಸ ಸರಕಾರದಲ್ಲಿ ಗೃಹ ಖಾತೆ ವಹಿಸಿಕೊಂಡ ಸಂದರ್ಭದಲ್ಲೇ ಆರ್‌ಎಸ್ ಎಸ್ ನೋಂದಣಿಗಾಗಿ ದಾಖಲೆ ಸಿದ್ದಪಡಿಸಿಟ್ಟುಕೊಳ್ಳಲಿ ಎಂದಿದ್ದ ಪ್ರಿಯಾಂಕ್ ಖರ್ಗೆ ಅವರು ಈ ಸಂಬಂಧ ಮೋಹನ್ ಭಾಗವತ್ ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದಾರೆ. ಆರ್‌ಎಸ್‌ಎಸ್‌ನ ಅತ್ಯುನ್ನತ ತೀರ್ಮಾನಗಳನ್ನು ತೆಗೆದುಕೊಳ್ಳುವ 'ಅಖಿಲ ಭಾರತೀಯ ಪ್ರತಿನಿಧಿ ಸಭೆ' (ಎಬಿಪಿಎಸ್) ಬಿಡುಗಡೆ ಮಾಡಿರುವ 2025-26ರ ವರದಿಯಲ್ಲಿನ ಅಂಶಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ ಸಾವಿರಾರು ಶಾಖೆಗಳು, ಸಾಪ್ತಾಹಿಕ ಮಿಲನ್‌ಗಳು (ವಾರದ ಸಭೆ) ಮತ್ತು ಮಾಸಿಕ ಮಂಡಳಿಗಳಿದ್ದು, ಸಾರ್ವಜನಿಕ ಕಾರ್ಯಕ್ರಮಗಳು, ಸಮಾವೇಶಗಳು, ಪಥಸಂಚಲನಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿಕೊಂಡಿದೆ. ಇಷ್ಟೊಂದು ವಿಸ್ತಾರವಾದ ಸಾಂಸ್ಥಿಕ ಅಸ್ತಿತ್ವ ಹೊಂದಿರುವಾಗ, ವಿಶೇಷವಾಗಿ ಸಾರ್ವಜನಿಕ ಒಗ್ಗೂಡುವಿಕೆ, ಸಮವಸ್ತ್ರಧಾರಿ ಪಥಸಂಚಲನಗಳು ಮತ್ತು ದೊಡ್ಡ ಮಟ್ಟದ ಕಾಠ್ಯಕ್ರಮಗಳನ್ನು ಒಳಗೊಂಡಿರುವಾಗ, ಇದನ್ನು ಕೇವಲ ಒಂದು ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನೋಂದಣಿ ಬಗ್ಗೆ ಆತ್ಮವಿಮರ್ಶೆ ಮಾಡಿ

ಆರ್‌ಎಸ್ಎಸ್ ತನ್ನ ಶತಮಾನೋತ್ಸವವನ್ನು ಕೇವಲ ಸಂಭ್ರಮಾಚರಣೆಯಾಗಿ ಮಾತ್ರವಲ್ಲದೆ, ಸಂವಿಧಾನಾತ್ಮಕ ಆತ್ಮಪರಿಶೀಲನೆಯ ಅವಕಾಶವಾಗಿ ಬಳಸಿಕೊಳ್ಳಬೇಕು. 100ನೇ ವರ್ಷದಲ್ಲಿ ಭಾರತಕ್ಕೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ತನ್ನನ್ನು ತಾನು ನೋಂದಾಯಿಸಿಕೊಳ್ಳುವುದು. ತನ್ನ ಚಟುವಟಿಕೆಗಳು, ಹಣಕಾಸು ವ್ಯವಹಾರಗಳು, ಕಾನೂನುಬದ್ಧ ಸ್ಥಿತಿಗತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ಪಾರದರ್ಶಕ ಮತ್ತು ಉತ್ತರದಾಯಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದೂ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಗೃಹ ಸಚಿವರು ಪತ್ರದಲ್ಲಿ ಕೇಳಿರುವ ಅಂಶಗಳು 

  • ಆರೆಸ್ಸೆಸ್‌ನ ಕಾನೂನುಬದ್ಧ ಸ್ಥಾನಮಾನ, ಸಂಘಟನಾ ರಚನೆಯ ಬಗ್ಗೆ ತಿಳಿಸಿ 
  • ಸಂಘಟನೆಯ ಪದಾಧಿಕಾರಿಗಳು, ಅಧಿಕೃತ ಪ್ರತಿನಿಧಿಗಳ ವಿವರ ನೀಡಿ
  • ದೇಣಿಗೆ, ಕೊಡುಗೆ ಇತರೆ ಆದಾಯ ಮೂಲದ ಮಾಹಿತಿ ನೀಡಿ, ವೆಚ್ಚ-ಆಸ್ತಿಗಳ ವಿವರ 
  • ಅನ್ವಯವಾಗುವ ತೆರಿಗೆಗಳನ್ನು ಕಾನೂನುಬದ್ದವಾಗಿ ಪಾವತಿಸಲಾಗುತ್ತಿದೆಯೇ?
  • ಅಧಿಕೃತ ನೋಂದಣಿಯಿಲ್ಲದೆ ಚಟುವಟಿಕೆ ನಡೆಸಲು ಕಾನೂನು ಆಧಾರವೇನು?
  • ಸಾರ್ವಜನಿಕ ಉತ್ತರದಾಯಿತ್ವವಿಲ್ಲದೆ ವ್ಯಾಪಕವಾಗಿ ಕಾರ್ಯ ನಿರ್ವಹಿಸುವ ಹಕ್ಕು ಯಾವ ಕಾನೂನು, ಸಂವಿಧಾನಾತ್ಮಕ ಚೌಕಟ್ಟಿನಡಿ ದೊರೆತಿದೆ?
  • ಸಾರ್ವಜನಿಕ ಸಭೆ, ಪಥಸಂಚಲನ ಇತರೆ ಕಾಠ್ಯಕ್ರಮಗಳಿಗೆ ಪಡೆದಿರುವ ಅನುಮತಿ ಮತ್ತು ಅನುಸರಣೆ ವ್ಯವಸ್ಥೆಗಳ ಮಾಹಿತಿ 

ನೋಂದಣಿ ಅಗತ್ಯ ಇಲ್ಲ ; ಭಾಗವತ್ 

ಗೃಹ ಸಚಿವ ಪ್ರಿಯಾಂಕ ಖರ್ಗೆ ಪತ್ರದ ಬಗ್ಗೆ ಕೇರಳದ ತ್ರಿಶ್ಶೂರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಸ್ವಯಂಸೇವಕ ಸಂಘವು ಸರ್ಕಾರದಿಂದ ಯಾವುದೇ ಅನುದಾನ ಬಳಸುತ್ತಿಲ್ಲ. ಸರ್ಕಾರದ ನಯಾಪೈಸೆ ಹಣಕಾಸು ನೆರವು ಪಡೆಯದ ಹೊರತು ನೋಂದಣಿ ಅಗತ್ಯ ಬರುವುದಿಲ್ಲ. ನೂರು ವರ್ಷಗಳಿಂದ ಯಾವುದೇ ಪ್ರಾಧಿಕಾರ ನೋಂದಣಿ ಬಗ್ಗೆ ಚಕಾರವೆತ್ತಿಲ್ಲ. ಕರ್ನಾಟಕ ಸಚಿವರು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ರಾಜಕೀಯ ಪ್ರೇರಿತವಾಗಿ ಈ ವಿಚಾರ ಎತ್ತಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

“ದೇಶದಲ್ಲಿಂದು ಅನೇಕ ಸಂಘಗಳು ನೋಂದಣಿ ಇಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಹಿಂದೂ ಧರ್ಮವೂ ನೋಂದಣಿಯಿಲ್ಲದೇ ಮುಂದುವರಿದಿದೆ. ಆರ್‌ಎಸ್‌ಎಸ್ ಯಾವುದನ್ನೂ ರಹಸ್ಯವಾಗಿ ನಿರ್ವಹಿಸುವುದಿಲ್ಲ, ಎಲ್ಲಾ ಚಟುವಟಿಕೆಗಳು ಸಾರ್ವಜನಿಕವಾಗಿ ಮುಕ್ತವಾಗಿಯೇ ನಡೆಯುತ್ತಿವೆ ಎಂದು ಭಾಗವತ್‌ ಹೇಳಿದರು. ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತ ಕಾಲದಲ್ಲಿ ಸಂಘ ಜನ್ಮ ತಾಳಿದೆ. ಸರಕಾರದಿಂದ ಹಣ ಪಡೆಯುವ ಸಂಘ-ಸಂಸ್ಥೆಗಳಿಗೆ ನೋಂದಣಿ ಅಗತ್ಯವಿದೆ. ಆರ್‌ಎಸ್ಎಸ್ ಸರಕಾರದ ಅನುದಾನ ಪಡೆಯುತ್ತಿಲ್ಲ, ಹಾಗಾಗಿ, ನೋಂದಣಿ ಸಹ ಅಗತ್ಯವಿಲ್ಲ. ಜತೆಗೆ, ಸಂಘವು 1960ರಲ್ಲೇ ತನ್ನ ಲಿಖಿತ ಸಂವಿಧಾನವನ್ನು ಅಂದಿನ ಸರಕಾರಕ್ಕೆ ಒಪ್ಪಿಸಿದಾಗ, ನೋಂದಣಿಯನ್ನು ಬಯಸದೇ ಸರಕಾರ ಸಂಘವನ್ನು ಒಪ್ಪಿಕೊಂಡಿತ್ತು ಎಂದು ಭಾಗವತ್ ವಿವರಿಸಿದ್ದಾರೆ.