ಆರೆಸ್ಸೆಸ್ ನೋಂದಣಿ ; ಪ್ರಿಯಾಂಕ ಖರ್ಗೆ ಪತ್ರಕ್ಕೆ ಸಾಂವಿಧಾನಿಕ ಅರ್ಹತೆ ಇಲ್ಲ, ವಂಶಾಡಳಿತ ರಾಜಕೀಯದ ಪ್ರಚೋದನೆಯಷ್ಟೇ, ಸಂಘಕ್ಕೆ ಸನ್ನಡತೆಯ ಸರ್ಟಿಫಿಕೇಟ್ ಅಗತ್ಯವಿಲ್ಲ! ಹಿರಿಯ ವಕೀಲ ಜೇಠ್ಮಲಾನಿ ಟೀಕೆ

18-06-26 01:25 pm       HK News Staffer   ಕರ್ನಾಟಕ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾನೂನು ಪ್ರಕಾರ, ನೋಂದಣಿ ಮಾಡಿಸಿಕೊಂಡಿಲ್ಲ ಎನ್ನುವ ವಿಚಾರವನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ದೆಹಲಿ ಮಟ್ಟಕ್ಕೆ ಒಯ್ದು ದೇಶಾದ್ಯಂತ ಭಾರೀ ಚರ್ಚೆಗೀಡಾಗುವಂತೆ ಮಾಡಿದ್ದಾರೆ. ಈಗ ಸಂಘವು, ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆ ಇದೆಯಾ/ಇಲ್ಲವೋ ಎನ್ನುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಟ್ವೀಟ್ ಮೂಲಕ ಪ್ರಿಯಾಂಕ ಖರ್ಗೆಯ ನಡೆಯನ್ನು ಟೀಕಿಸಿದ್ದಾರೆ.

ಬೆಂಗಳೂರು, ಜೂನ್ 18: ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಾನೂನು ಪ್ರಕಾರ, ನೋಂದಣಿ ಮಾಡಿಸಿಕೊಂಡಿಲ್ಲ ಎನ್ನುವ ವಿಚಾರವನ್ನು ಗೃಹ ಸಚಿವ ಪ್ರಿಯಾಂಕ ಖರ್ಗೆ ದೆಹಲಿ ಮಟ್ಟಕ್ಕೆ ಒಯ್ದು ದೇಶಾದ್ಯಂತ ಭಾರೀ ಚರ್ಚೆಗೀಡಾಗುವಂತೆ ಮಾಡಿದ್ದಾರೆ. ಈಗ ಸಂಘವು, ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆ ಇದೆಯಾ/ಇಲ್ಲವೋ ಎನ್ನುವ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಟ್ವೀಟ್ ಮೂಲಕ ಪ್ರಿಯಾಂಕ ಖರ್ಗೆಯ ನಡೆಯನ್ನು ಟೀಕಿಸಿದ್ದಾರೆ. 

ಸಚಿವ ಪ್ರಿಯಾಂಕ್ ಖರ್ಗೆಯವರು RSS ಮುಖ್ಯಸ್ಥರಾದ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರವು ಸಾಂವಿಧಾನಿಕವಾಗಿ ಮಾಹಿತಿಯನ್ನು ಪಡೆಯುವ ಪ್ರಯತ್ನವಲ್ಲ. ಬದಲಿಗೆ ವಂಶಾಡಳಿತ ಅಹಂಕಾರದಿಂದ ಕೂಡಿದ ರಾಜಕೀಯ ಪ್ರಚೋದನೆಯಾಗಿದೆ. ಅವರು ಎತ್ತಿರುವ ಅಂಶಗಳಲ್ಲಿ, ಕಾನೂನಿನ ಅಂಶಗಳು ಕಡಿಮೆಯಿದ್ದು, ಪೂರ್ವಾಗ್ರಹ ಪೀಡಿತ ಊಹನಾತ್ಮಕ ಅಂಶಗಳು ಹೆಚ್ಚಿವೆ ಎಂದು ಮಹೇಶ್ ಜೇಠ್ಮಲಾನಿ ಅಭಿಪ್ರಾಯ ಪಟ್ಟಿದ್ದಾರೆ. 

ಸಂವಿಧಾನದ ವಿಧಿ 19(1)(C) ಪ್ರಕಾರ, ಪ್ರತಿಯೊಬ್ಬ ನಾಗರಿಕನಿಗೂ, ಸಂಘಟನೆ ಅಥವಾ ಸಹಕಾರ ಸಂಘಗಳನ್ನು ರಚಿಸುವ ಮೂಲಭೂತ ಹಕ್ಕನ್ನು ನೀಡುತ್ತದೆ. ಇದು, ಯಾವುದೇ ಸರ್ಕಾರ ಕೊಡುತ್ತಿರುವ ಸವಲತ್ತು ಅಲ್ಲ, ಬದಲಿಗೆ ದೇಶದ ಸಂವಿಧಾನ ಕೊಡುತ್ತಿರುವ ಸ್ವಾತಂತ್ರ್ಯವಾಗಿದೆ. 

ಸರ್ಕಾರದ ಫಲಾನುಭವಿಯಾಗಿ ಇಲ್ಲದಿರುವ ಪ್ರತಿಯೊಂದು ಸಂಘಟನೆಗಳು ಅಸ್ತಿತ್ವದಲ್ಲಿ ಇರಲು ಅಥವಾ ಕಾರ್ಯ ನಿರ್ವಹಿಸಲು, ಮೊದಲು ಸರ್ಕಾರದಿಂದ ನೋಂದಣಿಯನ್ನು ಪಡೆಯಲೇಬೇಕು ಎನ್ನುವ ನಿಯಮ ಸಂವಿಧಾನದಲ್ಲಿ ಉಲ್ಲೇಖವಾಗಿಲ್ಲ. ಕಾಂಗ್ರೆಸ್ ನಾಯಕರೊಬ್ಬರು ವಿವಾದವನ್ನು ಸೃಷ್ಟಿಸಲು ಬಯಸುತ್ತಿದ್ದಾರೆ ಎಂದ ಮಾತ್ರಕ್ಕೆ, ಇದಕ್ಕೆ ಯಾವುದೇ ನೋಂದಣಿಯ ಅಗತ್ಯವಿಲ್ಲ. 

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ತಾನು ಸಾರ್ವಜನಿಕ ಹುದ್ದೆಯಲ್ಲಿದ್ದೇನೆ ಎನ್ನುವ ಕಾರಣಕ್ಕಾಗಿ ಆದೇಶಗಳನ್ನು ಹೊರಡಿಸಿ, ಅದನ್ನು ಪಾಲಿಸಲೇಬೇಕೆಂದು ಒತ್ತಡ ಹಾಕಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆಯವರು ಕರ್ನಾಟಕದ ಸಚಿವರಾಗಿ ಅವರಿಗೆ ಕಾನೂನಾತ್ಮಕ ಅಧಿಕಾರಗಳನ್ನು ಮಾತ್ರ ನೀಡುತ್ತದೆ. ಆದರೆ, ಅವರಿಗೆ ಯಾವುದೇ ಸಂಘಟನೆಗಳು ನೋಂದಣಿ ಮಾಡಿಸಬೇಕು ಅಥವಾ ಪುನರ್ ರಚಿಸಬೇಕು ಎಂದು ಒತ್ತಾಯಿಸುವ ಅಧಿಕಾರವನ್ನು ನೀಡುವುದಿಲ್ಲ. 

ರಾಷ್ಟ್ರೀಯ ಸ್ವಯಂಸೇವಕ ಸಂಘವು ತಮ್ಮ ಸದಸ್ಯರಿಂದ ಸ್ವಯಂಪ್ರೇರಿತವಾಗಿ ಪಡೆಯುವ ’ಗುರುದಕ್ಷಿಣೆ’ಯು ತೆರಿಗೆ ವಿನಾಯತಿಯ ಪ್ರಶ್ನೆಯನ್ನು ನ್ಯಾಯಾಲಯ ಈಗಾಗಲೇ ಪರಿಶೀಲಿಸಿದೆ. ಕಮಿಷನರ್ ಆಫ್ ಇಂಕಮ್ ಟ್ಯಾಕ್ಸ್ VS ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಕರಣದಲ್ಲಿ, ಪಾಟ್ನಾ ಹೈಕೋರ್ಟ್, ಸದಸ್ಯರು ಸ್ವಯಂಪ್ರೇರಿತವಾಗಿ ನೀಡುವ ಗುರುದಕ್ಷಿಣೆ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ತೀರ್ಪನ್ನು ನೀಡಿದೆ.

ಕೆಲವು ಕಾಂಗ್ರೆಸ್ ನಾಯಕರು ಚೀನಾ ಕಮ್ಯುನಿಸ್ಟ್ ಪಾರ್ಟಿ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದರೂ, ಅದನ್ನು ಚರ್ಚೆಗೆ ಎತ್ತಿಕೊಳ್ಳದೆ ಗೌಪ್ಯವಾಗಿಡುತ್ತಾರೆ.‌ ನೂರು ವರ್ಷಗಳಿಂದ ದೇಶದಲ್ಲಿ ಚಾಲ್ತಿಯಲ್ಲಿರುವ ಸಂಘಟನೆಯನ್ನು ಗುರಿ ಮಾಡುತ್ತಾರೆ. ‌ತಮ್ಮ ವಿದೇಶಿ ಸಂಪರ್ಕವನ್ನು ವಾಸ್ತವದಿಂದ ಮರೆಮಾಚುತ್ತಾರೆ. ಸಂವಿಧಾನದ ಕಲಂ 19(4) ಜನರಿಗೆ ನೀಡಿದ ಸ್ವಾತಂತ್ರ್ಯದ ಬಗ್ಗೆ ನಿಯಂತ್ರಣವನ್ನೂ ಇಟ್ಟುಕೊಂಡಿದೆ. ಆದರೆ ಅದು, ನೆಲದ ಕಾನೂನು ಮೀರದೆ ಇರುವುದಕ್ಕೆ ಸೀಮಿತವಾಗಿದೆ. ಯಾವುದೇ ಸ್ವಯಂ ಸೇವಾ ಸಂಘಟನೆ ಸರ್ಕಾರದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂಬ ನಿಯಮ ಇಲ್ಲ.‌

ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಗರಿಕರ ನಡುವಿನ ಸ್ವಯಂ ಸೇವಾ ಸಂಘಟನೆಯಾಗಿದ್ದು ಸೈದ್ಧಾಂತಿಕ ನೆಲೆಯಲ್ಲಿ, ಸಾಂಸ್ಕೃತಿಕವಾಗಿ ಮತ್ತು ರಾಷ್ಟ್ರೀಯತೆ ನೆಲೆಯಲ್ಲಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ಇದಕ್ಕಾಗಿ ಸರ್ಕಾರದ ಸಚಿವರೊಬ್ಬರಿಂದಾಗಲೀ, ರಾಜಕೀಯ ಪ್ರಭುತ್ವದಿಂದಾಗಲೀ ಅನುಮತಿ ಪಡೆಯುವ ಅಗತ್ಯವಿಲ್ಲ‌. ಕಾಂಗ್ರೆಸ್ ಸಚಿವರೊಬ್ಬರು ಕೇಳುತ್ತಾರೆಂದು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಜೇಠ್ಮಲಾನಿ ಹೇಳಿದ್ದಾರೆ. 

ಆರೆಸ್ಸೆಸ್ ಎಂದೂ ಕಾನೂನಿನಿಂದ ಹೊರಗಿದೆ ಎಂದು ಹೇಳಿಕೊಂಡಿಲ್ಲ. ಅಲ್ಲದೆ, ಸರ್ಕಾರದ ವಿನಾಯ್ತಿಗಳನ್ನು ಕೇಳಿಲ್ಲ. ಬದಲಿಗೆ, ನೂರು ವರ್ಷಗಳಿಂದ ಸಾರ್ವಜನಿಕವಾಗಿ ಸಕ್ರಿಯವಾಗಿದೆ, ಆಗಿಂದಾಗ್ಗೆ ಕಾಂಗ್ರೆಸ್ ಸರ್ಕಾರದ ನಿಯಂತ್ರಣ ಯತ್ನದ ಹೊರತಾಗಿಯೂ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ. ಯಾವುದೇ ಬೆದರಿಸುವ ತಂತ್ರಗಳಿಗೆ ಅದು ತಲೆಬಾಗಿಲ್ಲ. ಹಣಕಾಸಿನ ಆಡಿಟ್ ಮಾಹಿತಿಯನ್ನು ಬೇಕಾದರೆ ನೀಡುತ್ತೇವೆ ಎಂದು ಮೋಹನ್ ಭಾಗವತ್ ಸ್ಪಷ್ಟ ಪಡಿಸಿದ್ದಾರೆ. ಒಟ್ಟಿನಲ್ಲಿ, ಸಂಘವು ನೋಂದಣಿ ಮಾಡಿಸಬೇಕು ಎನ್ನುವ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರ ವಾದ ಟೆಕ್ನಿಕಲಿ ರಾಂಗ್ ಎಂದೂ, ಯಾವುದೇ ಸರ್ಕಾರದ ಅಥವಾ ವಿದೇಶಿ ಅನುದಾನವಿಲ್ಲದೆ ಕೆಲಸ ಮಾಡುತ್ತಿರುವ ಸಂಘಟನೆಗೆ ಯಾವುದೇ ರಾಜಕಾರಣಿಯ ಸನ್ನಡತೆಯ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅಭಿಪ್ರಾಯ ಪಟ್ಟಿದ್ದಾರೆ.