ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್‌ ನಡೆಸುತ್ತಿದ್ದಾರೆ ; ಪ್ರಕಾಶ್ ರಾಜ್‌ರನ್ನು ಕೂಡಲೇ ಅರೆಸ್ಟ್ ಮಾಡಿ, ಭಾವಚಿತ್ರ ಹರಿದು ಪ್ರಮೋದ್ ಮುತಾಲಿಕ್ ಆಕ್ರೋಶ

18-06-26 09:57 pm       HK News Staffer   ಕರ್ನಾಟಕ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆಗಳ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕಾಶ್ ರಾಜ್ ಭಾವಚಿತ್ರ ಹರಿದು ಪ್ರತಿಭಟನೆ ನಡೆಸಿ, ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಧಾರವಾಡ, ಜೂನ್ 18: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನಟ ಪ್ರಕಾಶ್ ರಾಜ್ ನೀಡಿರುವ ಹೇಳಿಕೆಗಳ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕಾಶ್ ರಾಜ್ ಭಾವಚಿತ್ರ ಹರಿದು ಪ್ರತಿಭಟನೆ ನಡೆಸಿ, ಧರ್ಮಸ್ಥಳದ ಹೆಸರಿಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಕಾಶ್ ರಾಜ್ ಹೆಸರು ಉಲ್ಲೇಖವಾಗಿರುವುದನ್ನು ಪ್ರಸ್ತಾಪಿಸಿದ ಮುತಾಲಿಕ್, “ಪ್ರಕಾಶ್ ರಾಜ್ ಸ್ವತಃ ಚಿನ್ನಯ್ಯ ಜೊತೆ ಸಂಪರ್ಕದಲ್ಲಿದ್ದ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದೇನೆ ಎಂದೂ ಹೇಳಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಅವರ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಿ, ಅಗತ್ಯವಿದ್ದರೆ ತಕ್ಷಣ ಬಂಧಿಸಬೇಕು” ಎಂದು ಆಗ್ರಹಿಸಿದರು.

ಧರ್ಮಸ್ಥಳವು ಶಿಕ್ಷಣ, ಆರೋಗ್ಯ, ಅನ್ನದಾನ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ದೇಶಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯಕ್ಷೇತ್ರದ ಹೆಸರನ್ನು ಕೆಡಿಸುವ ಪ್ರಯತ್ನ ನಡೆದಿದೆ. ಈ ಷಡ್ಯಂತ್ರದ ಹಿಂದಿನ ಸತ್ಯ ಹೊರಬರಬೇಕು. ಚಿನ್ನಯ್ಯ ಮತ್ತು ಪ್ರಕಾಶ್ ರಾಜ್ ನಡುವೆ ಏನು ಸಂಬಂಧ ಎಂಬುದನ್ನು ಎಸ್‌ಐಟಿ ತನಿಖೆ ಮಾಡಬೇಕು ಎಂದು ಮುತಾಲಿಕ್ ಹೇಳಿದರು.

ಇದೇ ವೇಳೆ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನೀವು ಬಹುಭಾಷಾ ನಟರಾಗಿರಬಹುದು. ಆದರೆ ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಮಾತನಾಡಬೇಡಿ” ಎಂದು ಎಚ್ಚರಿಕೆ ನೀಡಿದರು.

ಧರ್ಮಸ್ಥಳ ಚರಿತ್ರೆ ವಧೆ ಮಾಡುವ ಉದ್ದೇಶದಿಂದಲೇ ಪ್ರಕಾಶ್‌ ರೈ ಬುರುಡೆ ಗ್ಯಾಂಗ್ ಗೆ ಬೆಂಬಲಿಸಿದ್ದಾರೆ. ರೈ ಅವರೇ ಧನ ಸಹಾಯ ಮಾಡಿ ಈ ಗ್ಯಾಂಗ್‌ ನಡೆಸುತ್ತಿದ್ದಾರೆ ಎಂದು ಶ್ರೀ ರಾಮ ಸೇನಾ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ; 

ಆ‌ರ್ ಎಸ್‌ಎಸ್ ನಂತಹ ಬೃಹತ್ ಸಂಘಟನೆ ಹಾಗೂ ಹಿಂದೂ ಧರ್ಮದ ಕುರಿತು ಮಾತನಾಡುವಾಗ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರದಿಂದ ಇರಬೇಕು. ಆರ್‌ಎಸ್‌ಎಸ್‌ನ ಸಾಂವಿಧಾನಿಕ ಮಾನ್ಯತೆ, ನೋಂದಣಿ ವಿವರಗಳು ಮತ್ತು ದೇಣಿಗೆಯ ಪಾರದರ್ಶಕತೆ ಬಗ್ಗೆ ಪ್ರಶ್ನಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವುದು ರಾಜಕೀಯ ಪ್ರೇರಿತ ಎಂದು ವಾಗ್ದಾಳಿ ನಡೆಸಿದರು.