ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ ಸಭೆಗೆ ಅನುಮತಿ ಬೇಕಿಲ್ಲಾ, ಬೀದೀಲಿ ಮೆರವಣಿಗೆ ಮಾಡಬೇಕಾದ್ರೆ ಅನುಮತಿ ಬೇಕಲ್ವಾ? ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ

08-07-26 02:06 pm       HK News Staffer   ಕರ್ನಾಟಕ

ಆರ್ ಎಸ್ ಎಸ್ ಸಂಘಟನೆ ಬೆಳಗಾವಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಬೇಕಿಲ್ಲ. ಅದು ಖಾಸಗಿ ಕಾರ್ಯಕ್ರಮ, ಆದರೆ ಬೀದಿಗಿಳಿದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ಜುಲೈ 08: ಆರ್ ಎಸ್ ಎಸ್ ಸಂಘಟನೆ ಬೆಳಗಾವಿಯಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಸರ್ಕಾರದ ಅನುಮತಿ ಬೇಕಿಲ್ಲ. ಅದು ಖಾಸಗಿ ಕಾರ್ಯಕ್ರಮ, ಆದರೆ ಬೀದಿಗಿಳಿದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮ ನಡೆಯುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, "ಕಾರ್ಯಕ್ರಮ ನಡೆಯಲಿ. ಅದು ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ನಮ್ಮ ಅನುಮತಿ ಬೇಕಾಗಿಲ್ಲಾ. ಆದರೆ ಬೀದಿಗಿಳಿದ್ರೆ ಅನುಮತಿ ಬೇಕಾಗುತ್ತದೆ" ಎಂದರು.

ಯಾವುದೇ ಸಂಘಟನೆಯಿಂದ ದೊಡ್ಡ ಮೆರವಣಿಗೆ ಮಾಡಬೇಕಾದ್ರೆ ಅನುಮತಿ ಬೇಕಲ್ವಾ? ಬೀದಿಗಿಳಿದ್ರೆ ಅನುಮತಿ ಕೇಳೇ ಕೇಳ್ತಾರೆ. ಕಾನೂನು ಸುವ್ಯವಸ್ಥೆ ವಾತಾವರಣ ಸರಿ ಇದ್ರೆ ಅನುಮತಿ ಕೊಡುತ್ತೇವೆ. ಇಲ್ಲಾ ಅಂದ್ರೆ ಮುಂದೂಡಿ ಅಂತಾ ಹೇಳುತ್ತೇವೆ ಎಂದರು‌.

ದೇಶಾದ್ಯಂತ ಇರುವ ಹಿರಿಯ ಆರ್‌.ಎಸ್‌.ಎಸ್. ಪ್ರಚಾರಕರು ಬೆಳಗಾವಿ ನಗರದಲ್ಲಿ ನಡೆಯುತ್ತಿರುವ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ದೇಶಾದ್ಯಂತ ನಡೆಯುವ ಜನಗಣತಿ ಪ್ರಕ್ರಿಯೆ, ರಾಮನ ದೇಣಿಗೆ ವಿವಾದ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಜುಲೈ 10ರಂದು ಸಭೆ ಆರಂಭಗೊಳ್ಳಲಿದ್ದು 12ರಂದು ಮುಕ್ತಾಯವಾಗಲಿದೆ. ಮೂರು ದಿನಗಳ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಯಲಿದೆ. ಅಷ್ಟೇ ಅಲ್ಲದೆ, ಸಂಘಟನೆಯ ವ್ಯಾಪ್ತಿಯನ್ನು ವಿಸ್ತರಿಸಲು ಶಾಖೆಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ‌. ಆರ್ ಎಸ್ ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಧ್ವನಿ ಎತ್ತಿದ ವಿಚಾರದ ಬಗ್ಗೆಯೂ ವಿಮರ್ಶೆ ನಡೆಯುವ ಸಾಧ್ಯತೆ ಇದೆ. 

ನಾನು ಇರೋವರೆಗೂ ಅನುಮತಿ ಕಡ್ಡಾಯ ! 

ಮಂಗಳವಾರ ಕಲಬುರ್ಗಿಯಲ್ಲಿ ಮಾತನಾಡಿದ್ದ ಖರ್ಗೆ, ನಾನು ಗೃಹಸಚಿವನಾಗಿ ಇರುವ ವರೆಗೂ ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್​​ ಖರ್ಗೆ ಹೇಳಿದ್ದಾರೆ. ಈಗಾಗಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಹಳೆಯ ಸಂಘಟನೆ ಅಂತಾರಲ್ಲ, ನಿಮ್ಮ ಸಂಘಟನೆಯ ದಾಖಲೆಗಳು ಎಲ್ಲಿವೆ? ಪಥಸಂಚಲನ ನಡೆಸಲು ನೀವು ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ದಾಖಲೆಗಳು ಎಲ್ಲೋ ಇರಬಹುದು, ಹುಡುಕಿಕೊಂಡು ಬರಲಿ. ಅಲ್ಲಿಯವರೆಗೆ ಸುಮ್ಮನೆ ಬಿಡಲ್ಲ ಎಂದು ಹೇಳಿದ್ದಾರೆ.