ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ ಹಿನ್ನೆಲೆ ಪತ್ನಿ ನೇಣಿಗೆ ಶರಣು ; ದುಃಖ ತಾಳಲಾರದೆ ಪತಿಯೂ ಆತ್ಮಹತ್ಯೆ

13-07-26 10:21 pm       HK News Desk   ಕರ್ನಾಟಕ

ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾಗದ ಪತಿ ಕೂಡ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲೂಕಿನ ಹನುಮನ ಹಳ್ಳಿಯಲ್ಲಿ ನಡೆದಿದೆ.

ತುಮಕೂರು, ಜುಲೈ 13: ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾಗದ ಪತಿ ಕೂಡ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲೂಕಿನ ಹನುಮನ ಹಳ್ಳಿಯಲ್ಲಿ ನಡೆದಿದೆ.

ಶರಣ್ಯ ಹಾಗೂ ಗಿರೀಶ್ ಆತ್ಮಹತ್ಯೆ ಮಾಡಿಕೊಂಡ ದಂಪತಿ. ನಾಲ್ಕು ತಿಂಗಳ ಹಿಂದಷ್ಟೇ ಇವರ ವಿವಾಹವಾಗಿತ್ತು.

ಶರಣ್ಯಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಇದಕ್ಕಾಗಿ ಔಷಧವನ್ನು ಕೂಡ ಕೊಡಿಸಲಾಗುತ್ತಿತ್ತು. ಆದರೆ, ಏಕಾಏಕಿ ಹಾಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಲಕ್ಕೆ ಹೋಗಿದ್ದಂತಹ ಪತಿ ಗಿರೀಶ್ ಮನೆಗೆ ಬಂದು ನೋಡಿದಾಗ ಪತ್ನಿ ಕಾಣಿಸಿರಲಿಲ್ಲ. ನಂತರ ಕೊಠಡಿಯ ಬಾಗಿಲು ಹಾಕಿದ್ದನ್ನು ಗಮನಿಸಿದ್ದಾನೆ. ಕಿಟಕಿಯ ಮೂಲಕ ಹೋಗಿ ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇದರಿಂದ ಮನನೊಂದ ಗಿರೀಶ್ ಹೊಲಕ್ಕೆ ತೆರಳಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಮಗಳಿಗೆ ಆಗಾಗ್ಗೆ ಹೊಟ್ಟೆ ನೋವು ಬರುತ್ತಿತ್ತು. ಹಾಗಾಗಿ ನಾಟಿ ಔಷಧಿಯನ್ನು ಕೊಡಿಸುತ್ತಿದ್ದೆವು. ಈ ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಳಿಯ ಗಿರೀಶನು ಹೊಲದಿಂದ ಸಂಜೆ ಮನೆಗೆ ಬಂದಾಗ ಶರಣ್ಯ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗಿರೀಶ್​ ಸಹ ದುಃಖ ಸಹಿಸಲಾಗದೇ ಗ್ರಾಮದ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರ ಸಾವಿನಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆ ಯಾವುದೇ ಅನುಮಾನ ಇಲ್ಲ ಎಂದು ಮೃತ ಶರಣ್ಯಳ ಪೋಷಕರು ದೂರು ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.