ನ್ಯಾಯಾಧೀಶರಿಂದ ಅಂಬೇಡ್ಕರ್ ಗೆ ಅವಮಾನ ; ಹೈಕೋರ್ಟ್ ಸ್ವಯಂ ಪ್ರಕರಣ ದಾಖಲಿಸಬೇಕು, ರಾಜ್ಯ ಸರಕಾರವೂ ತನಿಖೆ ನಡೆಸಬೇಕು ; ಸಂಸದ ಶ್ರೀನಿವಾಸ ಪ್ರಸಾದ್ ಆಗ್ರಹ 

30-01-22 12:05 pm       HK Desk news   ಕರ್ನಾಟಕ

ರಾಯಚೂರಿನಲ್ಲಿ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ ಘಟನೆ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಬೇಕು. ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿಸಬೇಕು ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಗ್ರಹಿಸಿದ್ದಾರೆ. ‌

ಮೈಸೂರು, ಜ.30 : ರಾಯಚೂರಿನಲ್ಲಿ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ ಘಟನೆ ಬಗ್ಗೆ ರಾಜ್ಯ ಸರಕಾರ ತನಿಖೆ ನಡೆಸಬೇಕು. ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿಸಬೇಕು ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಗ್ರಹಿಸಿದ್ದಾರೆ. ‌

ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ದೇಶ ಎಂದಿಗೂ ಒಂದಾಗಿರಲಿಲ್ಲ. ಹಾಗಾಗಿಯೇ ಈ ದೇಶದ ಮೇಲೆ ಎಲ್ಲರು ದಾಳಿ ಮಾಡಿದರು. ಆದರೆ ಸರಿಯಾದ ಆಡಳಿತವನ್ನ ಕಲಿಸಿಕೊಟ್ಟವರು ಬಾಬಾ ಸಾಹೇಬ್ ಅಂಬೇಡ್ಕರ್. ಆದರೆ ರಾಯಚೂರಿನಲ್ಲಿ ನಡೆದ ಘಟನೆ ಸರಿಯಾದುದ್ದಲ್ಲ. ನನಗೆ ತುಂಬ ನೋವು ತಂದಿದೆ. ಘಟನೆ ಬಗ್ಗೆ ಸಾಕಷ್ಟು ಪ್ರತಿಭಟನೆ ಆಗಿದೆ. ಸ್ವತಃ ನ್ಯಾಯಾಧೀಶರು ಕೂಡ ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಗಣರಾಜ್ಯೋತ್ಸವ ಹಾಗೂ ಅಂಬೇಡ್ಕರ್ ಅವರ ಬಗ್ಗೆ ಜಿಲ್ಲಾ ನ್ಯಾಯಾಧೀಶರು ತಿಳಿದುಕೊಂಡಿಲ್ಲ ಅನ್ನುವುದನ್ನು ನಂಬಲಾಗದು ಎಂದರು.‌

ಇದನ್ನು ಉದ್ದೇಶಪೂರ್ವಕ ಮಾಡಿದ್ದಾರಾ? ನ್ಯಾಯಾಲಯ ಎಲ್ಲೆಡೆ ಗಾಂಧೀಜಿ, ನೆಹರು, ಅಂಬೇಡ್ಕರ್ ಅವರ ಫೋಟೋ ಇಟ್ಟುಕೊಂಡಿದೆ. ಇಟ್ಟುಕೊಳ್ಳುವುದು ಬೇಡ ಎಂದಾದರೆ ಬೇಡ. ಆದರೆ ಹಾಕಿಕೊಂಡ ಬಳಿಕ ಅದನ್ನ ತೆಗೆಸುವುದು ದೊಡ್ಡ ತಪ್ಪು. ಇದು ಒಬ್ಬ ಜಿಲ್ಲಾ ನ್ಯಾಯಾಧೀಶರಾದವರಿಗೆ ಶೋಭೆ ತರುವಂತದಲ್ಲ. ಹೈಕೋರ್ಟ್ ಈ ಬಗ್ಗೆ ಸಮಗ್ರ ತನಿಖೆ ಮಾಡಿಸಬೇಕು. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹೈಕೋರ್ಟ್ ಇದನ್ನ ಸ್ವಯಂ ಪ್ರಕರಣದ ಮೂಲಕ ವಿಚಾರಣೆ ಮಾಡಬೇಕು ಎಂದು ಶ್ರೀನಿವಾಸ ಪ್ರಸಾದ್ ಹೇಳಿದರು. ‌

ರಾಜ್ಯ ಸರ್ಕಾರ ಕೂಡ ಈ ಬಗ್ಗೆ ವಿಚಾರಣೆ ಮಾಡಿಸಬೇಕು. ವಿಚಾರಣೆ ನಡೆಸಿ ವರದಿಯನ್ನ ಹೈಕೋರ್ಟ್‌ಗೆ ನೀಡಬೇಕು. ನನಗೆ ಈ ಪ್ರಕರಣದಿಂದ ತುಂಬ ನೋವಾಗಿದೆ. ನನಗೆ ಅನಾರೋಗ್ಯ ಇದ್ದರು ಸಹ ನಿಮ್ಮ ಮುಂದೆ ಈ ಮಾತನ್ನ ಹಂಚಿಕೊಂಡಿದ್ದೇನೆ. ಸರ್ಕಾರ ಈ ಬಗ್ಗೆ ಮಾತಾಡಿಲ್ಲ, ಮೌನವಾಗಿದೆ ಅಂದರೆ ಈಗ ಕ್ರಮ ತೆಗೆದುಕೊಳ್ಳಲಿ. ಈ‌ ಬಗ್ಗೆ ನಾನು ಒತ್ತಾಯ ಮಾಡುತ್ತೇನೆ. ಅದರಲ್ಲು ವಿಶೇಷವಾಗಿ ಕಾನೂನು ಸಚಿವರು ಮಾತಾಡಬೇಕು. ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಹೈಕೋರ್ಟ್‌‌ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಬೇಕು. 

ಆರೋಗ್ಯ ಚೆನ್ನಾಗಿರುತ್ತಿದ್ದರೆ ಈ ಬಗ್ಗೆ ಖುದ್ದಾಗಿ ಭೇಟಿಯಾಗಿ ಒತ್ತಾಯ ಮಾಡುತ್ತಿದ್ದೆ. ಆದರೆ ಆರೋಗ್ಯ ಸಮಸ್ಯೆ ಇರುವುದರಿಂದ ಈ ಬಗ್ಗೆ ಕಾನೂನು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

Mysuru Insult to Ambedkar by Judge in Raichur, Srinivas prasad demands for action.