ಸಚಿವ ಆನಂದ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಬಿಜೆಪಿಯೊಳಗೆ ಸಂಚಲನ ಮೂಡಿಸಿದೆ. ಬಿಜೆಪಿ ಒಳಗಡೆಯೇ ವಲಸಿಗ ಸಚಿವ- ಶಾಸಕರ ಬಗ್ಗೆ ಶಂಕೆ ಮೂಡುವಂತೆ ಮಾಡಿದೆ.

02-02-22 09:53 pm       HK Desk news   ಕರ್ನಾಟಕ

ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಎರಡು ದಿನಗಳ ಹಿಂದೆ ದಿಢೀರ್ ಆಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ಸಚಿವರು, ಶಾಸಕರ ಮೇಲೆ ಗುಪ್ತಚರ ಇಲಾಖೆ ಮೂಲಕ ಕಣ್ಣಿಡಲು ಹೊರಟಿದ್ದಾರೆ.

ಬೆಂಗಳೂರು, ಫೆ.2 : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಎರಡು ದಿನಗಳ ಹಿಂದೆ ದಿಢೀರ್ ಆಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ರಾಜ್ಯ ಸರಕಾರದ ಸಚಿವರೊಬ್ಬರು ನೇರವಾಗಿ ಪ್ರತಿಪಕ್ಷ ನಾಯಕರ ಮನೆಗೆ ತೆರಳಿ ಅಲ್ಲಿ ಚರ್ಚೆ ನಡೆಸಿದ್ದು ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ನಾಯಕರು ತೀವ್ರ ಗರಂ ಆಗಿದ್ದಾರೆ ಎನ್ನುವ ಮಾಹಿತಿ ಲಭಿಸಿದ್ದು, ಬಿಜೆಪಿ ಸಚಿವರು, ಶಾಸಕರ ಮೇಲೆ ಗುಪ್ತಚರ ಇಲಾಖೆ ಮೂಲಕ ಕಣ್ಣಿಡಲು ಹೊರಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಬಿಜೆಪಿ ಶಾಸಕರು ಕಾಂಗ್ರೆಸ್ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ವಲಸಿಗರಾಗಿ ಬಂದವರನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತರುವಲ್ಲಿ ತೆರೆಮರೆಯ ಕಸರತ್ತು ನಡೆದಿದೆ ಎನ್ನುವ ವದಂತಿಗಳು ಹರಿದಾಡಿದ್ದವು. ಈ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೆಸರೆರಚಾಟ ಮಾಡಿಕೊಂಡಿದ್ದರೂ, ಆಡಳಿತಾರೂಢ ಬಿಜೆಪಿಗೆ ಮಾತ್ರ ಈ ರೀತಿಯ ಬೆಳವಣಿಗೆ ಭಾರೀ ಮುಜುಗರ ತಂದಿದೆ. ಇವೆಲ್ಲದರ ನಡುವೆ, ಸಚಿವ ಆನಂದ್ ಸಿಂಗ್ ಖಾಸಗಿ ಕಾರಿನಲ್ಲಿ ಡಿಕೆಶಿಯ ಬೆಂಗಳೂರಿನ ಮನೆಗೆ ಭೇಟಿ ನೀಡಿದ್ದು ತೀವ್ರ ಚರ್ಚೆಗೀಡು ಮಾಡಿದೆ.

ಈ ಬೆಳವಣಿಗೆ ಬಗ್ಗೆ ಬೇಸರ ಮಾಡಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಶಾಸಕರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಮನೆಗೆ ಹೋಗಿದ್ದೇಕೆ ? ಅದರಲ್ಲೂ ಖಾಸಗಿ ಕಾರಿನಲ್ಲಿ ಹೋಗುವಂಥದ್ದೇನಿತ್ತು ? ಅಭಿವೃದ್ಧಿ ವಿಚಾರವಾದ್ರೆ ಸಚಿವರ ಕಚೇರಿಗೆ ಶಾಸಕರೇ ಬರಬೇಕು. ಆದರೆ ಸಚಿವರೇ ಅಲ್ಲಿಗೆ ಹೋಗಿ ಭೇಟಿ ಮಾಡುತ್ತಾರಂದ್ರೆ ಏನರ್ಥ ಎಂದು ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಎರಡು ವರ್ಷಗಳ ಹಿಂದೆ ಯಾರೆಲ್ಲ ವಲಸಿಗರಾಗಿ ಬಂದಿದ್ದಾರೆ. ಅಂಥ ಸಚಿವರು, ಶಾಸಕರ ಬಗ್ಗೆ ಗುಪ್ತಚರ ವಿಭಾಗದ ಮೂಲಕ ಕಣ್ಣಿಡಲು ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಹಾಗೊಂದ್ವೇಳೆ ಕಾಂಗ್ರೆಸ್ ನಾಯಕರ ಮದುವೆ ಇನ್ನಿತರ ಕಾರ್ಯಕ್ರಮಗಳಿದ್ದರೆ, ಅಲ್ಲಿಗೆ ಬಿಜೆಪಿ ಸಚಿವರು ತೆರಳುವ ಮುನ್ನ ತಮ್ಮ ಗಮನಕ್ಕೆ ತರಬೇಕು. ತಮಗೆ ಮಾಹಿತಿ ನೀಡಿಯೇ ಕಾರ್ಯಕ್ರಮಕ್ಕೆ ತೆರಳಬೇಕು ಎಂದು ಸಿಎಂ ಬೊಮ್ಮಾಯಿ ಎಲ್ಲ ಸಚಿವರಿಗೂ ಖಡಕ್ ಸೂಚನೆ ರವಾನಿಸಿದ್ದಾರೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವ ಸಚಿವರು, ಶಾಸಕರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಬಿಜೆಪಿಯಿಂದ ತಯಾರಿ ನಡೆದಿದೆ ಎನ್ನುವ ಮಾಹಿತಿಯೂ ಲಭಿಸಿದೆ.

ಸಚಿವ ಆನಂದ್ ಸಿಂಗ್ ಬಹಿರಂಗವಾಗಿಯೇ ಕೆಪಿಸಿಸಿ ಅಧ್ಯಕ್ಷರ ಭೇಟಿ ಮಾಡಿದ್ದರಿಂದಾಗಿ ವಲಸಿಗರ ಮೇಲೆ ಸಂಶಯದ ಸುಳಿಯಾಡಿದ್ದು, ಬಿಜೆಪಿ ಒಳಗಡೆಯೇ ತಳಮಳ ಶುರುವಾಗಿದೆ. ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯ ನಾಯಕರಲ್ಲಿ ಆತಂಕವೂ ಕಾಡತೊಡಗಿದೆ. ಕೆಲವು ಮಾಹಿತಿ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿಯಲ್ಲಿ ಭಿನ್ನರಾಗ ಹಾಡುತ್ತಿರುವ ಶಾಸಕರು, ಸಚಿವರನ್ನು ಸಂಪರ್ಕಿಸಿದ್ದು, ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬಿಜೆಪಿಗೆ ಹೋಗಿದ್ದವರ ಪೈಕಿ ಒಂದಷ್ಟು ಮಂದಿ ಮತ್ತೆ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದಾರೆ ಎನ್ನುವ ಮಾಹಿತಿಗಳೂ ಇವೆ.

ವಲಸಿಗರ ಪೈಕಿ ಹೆಚ್ಚಿನವರು ದೈಹಿಕವಾಗಿ ಬಿಜೆಪಿಯಲ್ಲಿದ್ದರೂ, ಮಾನಸಿಕವಾಗಿ ಕಾಂಗ್ರೆಸ್ ನಾಯಕರ ಆಪ್ತರೇ ಆಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಅವರ ನಡುವಿನ ಚರ್ಚೆ ಅಸಹಜವೆಂದು ಕಂಡುಬರಲ್ಲ. ಆದರೆ, ಬಿಜೆಪಿ ಕಣ್ಣಿಗೆ ಆ ರೀತಿಯ ಭೇಟಿ ಸಹಜವಾಗಿಯೇ ಸಂಶಯದ ಸುಳಿಯಾಡಿಸಿದೆ. ಹೀಗಾಗಿ ಚುನಾವಣೆ ಹತ್ತಿರ ಬರುವ ಸಂದರ್ಭದಲ್ಲೇ ಮತ್ತೆ ಪಕ್ಷಾಂತರಕ್ಕೆ ವೇದಿಕೆ ಸಿದ್ಧವಾಗುತ್ತಾ ಅನ್ನುವ ಕುತೂಹಲ ಎದ್ದಿದೆ. ಇದೇ ಕಾರಣಕ್ಕೆ ಎಚ್ಚೆತ್ತ ಸಿಎಂ ಬೊಮ್ಮಾಯಿ, ವಲಸಿಗರ ಮೇಲೆ ಒಂದು ಕಣ್ಣಿಡಲು ಮುಂದಾಗಿದ್ದಾರೆ. ಇವರು ರಾಜ್ಯದ ಯಾವುದೇ ಮೂಲೆಗೆ ಹೋದರೂ, ಅವರ ಹಿಂದೆ ಗೂಢಚಾರಿಕೆಯ ಕಣ್ಣು ನೆಟ್ಟಿರುತ್ತದೆ ಅನ್ನುವ ಸುಳಿವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ.

A meeting between Karnataka Congress president D K Shivakumar and a minister in the state government has sparked speculation that the BJP leader was unhappy with some recent party appointments for in-charge of districts.