ಮುಸ್ಲಿಂ ಪೋಷಕರ ಹೈಡ್ರಾಮಾ ; ತರಗತಿಯಲ್ಲಿ ಹಿಜಾಬ್ ಅವಹೇಳನ ಆರೋಪ, ಶಿಕ್ಷಕಿಯ ಕಿತ್ತು ಹಾಕಿದ ಶಾಲಾಡಳಿತ, ಕ್ಷುಲ್ಲಕ ನೆಪದಲ್ಲಿ ವಜಾ ಮಾಡಿದ್ದಕ್ಕೆ ಹಿಂದು ಸಂಘಟನೆಗಳ ಆಕ್ಷೇಪ

12-02-22 06:34 pm       HK Desk news   ಕರ್ನಾಟಕ

ಹಿಜಾಬ್ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಆವರಣದಲ್ಲಿ ಜಮಾಯಿಸಿ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲು ಒತ್ತಾಯಿಸಿದ ಘಟನೆ ನಡೆದಿದೆ.  

ಬೆಂಗಳೂರು, ಫೆ.12 : ಒಂದೆಡೆ ಹಿಜಾಬ್ ವಿಚಾರ ರಾಜ್ಯದಲ್ಲಿ ತೀವ್ರ ಹೊಯ್ದಾಟಕ್ಕೆ ಕಾರಣವಾಗಿದ್ದರೆ, ಬೆಂಗಳೂರಿನ ಖಾಸಗಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ತಮ್ಮ ಧರ್ಮ, ಹಿಜಾಬ್ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮುಸ್ಲಿಂ ವಿದ್ಯಾರ್ಥಿಗಳ ಪೋಷಕರು ಶಾಲೆಯ ಆವರಣದಲ್ಲಿ ಜಮಾಯಿಸಿ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲು ಒತ್ತಾಯಿಸಿದ ಘಟನೆ ನಡೆದಿದೆ.  

ಬೆಂಗಳೂರು ನಗರದ ಚಂದ್ರಾ ಲೇಔಟ್ ನಲ್ಲಿರುವ ವಿದ್ಯಾಸಾಗರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಘಟನೆ ನಡೆದಿದೆ. ನೂರಾರು ಮಂದಿ ಪೋಷಕರು ಸೇರಿ ಗಲಾಟೆ ನಡೆಸಿದ್ದರಿಂದ ಸ್ಥಳೀಯ ಪೊಲೀಸರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಶಾಲೆಯ ಆಡಳಿತ ಕಮಿಟಿಯವರು ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಿದ್ದು, ಪೋಷಕರನ್ನು ಮನವೊಲಿಕೆ ಮಾಡಿ ಕಳಿಸಿದ್ದಾರೆ.  

ಇದೇ ವೇಳೆ, ಮಾಧ್ಯಮಕ್ಕೆ ಮಾಹಿತಿ ನೀಡಿದ ಪೋಷಕರಲ್ಲಿ ಒಬ್ಬರಾದ ಸೊಹಾಬುದ್ದೀನ್, ಇದು ಹಿಜಾಬ್ ಕುರಿತ ಹೋರಾಟ ಅಲ್ಲ. ಶಿಕ್ಷಕಿಯೊಬ್ಬರು ಏಳನೇ ಕ್ಲಾಸಿನಲ್ಲಿ ತರಗತಿ ನಡೆಸುತ್ತಿದ್ದಾಗ, ದೇಶದಲ್ಲಿ ಮುಸ್ಲಿಮರ ಸಂಖ್ಯೆ 25 ಶೇಕಡಾ ಮಾತ್ರ ಇದ್ದು, ಇನ್ಮುಂದೆ ಹಿಜಾಬ್ ಹಾಕಿ ಶಾಲೆಗೆ ಬರುವಂತಿಲ್ಲ ಎಂದು ಹೇಳಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ, ಬೋರ್ಡ್ ನಲ್ಲಿ ಧಾರ್ಮಿಕವಾಗಿ ಅವಹೇಳನ ಮಾಡುವ ರೀತಿ ಏನೋ ಬರೆದಿದ್ದಾರಂತೆ. ಈ ಶಾಲೆಯಲ್ಲಿ ಅತಿ ಹೆಚ್ಚು ಮುಸ್ಲಿಂ ಮಕ್ಕಳಿದ್ದಾರೆ. ಉತ್ತಮ ಶಿಕ್ಷಣವೂ ಸಿಗುತ್ತಿದೆ. ಆದರೆ, ಈಗ ಒಬ್ಬ ಶಿಕ್ಷಕಿ ನಮ್ಮ ವಿರೋಧಿಯಾಗಿ ವರ್ತಿಸಿದ್ದಾರೆ ಎಂದು ಹೇಳಿದರು. ಹಿಜಾಬ್ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವುದು ನಮಗೆ ತಿಳಿದಿದೆ. ಹೀಗಾಗಿ ನಮ್ಮ ವಿದ್ಯಾರ್ಥಿನಿಯರು ಶಾಲೆಗೆ ಹೋಗದೆ ಹೈಕೋರ್ಟ್ ತೀರ್ಪು ಬರಲು ಕಾಯುತ್ತಿದ್ದಾರೆ. ಸೋಮವಾರ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಶಾಲೆಯ ಪ್ರಿನ್ಸಿಪಾಲ್ ಶಿವಕುಮಾರ್ ಪ್ರತಿಕ್ರಿಯಿಸಿ, ಶಿಕ್ಷಕಿ ಕ್ಲಾಸಿನಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ಹೇಳಿದ್ದಾರೆ. ಅದರಲ್ಲೇನು ತಪ್ಪು ಆಗಿಲ್ಲ. ಅದರ ಜೊತೆಗೆ ಕ್ಲಾಸಿನಲ್ಲಿ ಮಾತನಾಡದಂತೆ ಸೂಚಿಸಿ, ಗಣಿತದ ಬಗ್ಗೆ ಪಾಠ ಮಾಡುತ್ತಿದ್ದರು. ಈ ವೇಳೆ, ಕ್ಲಾಸಿನಲ್ಲಿ ಮಾತನಾಡುತ್ತಿದ್ದ ಮಕ್ಕಳ ಹೆಸರನ್ನು ಸೂಚಿಸುವ ರೀತಿ LKS ಎಂದು ಬೋರ್ಡಿನಲ್ಲಿ ಸ್ಪೆಲ್ಲಿಂಗ್ ಬರೆದಿದ್ದರು. ಅದನ್ನೇ ನೆಪವಾಗಿರಿಸಿ ತಪ್ಪು ಕಲ್ಪನೆಗೆ ಒಳಗಾದ ವಿದ್ಯಾರ್ಥಿಗಳು ಶಿಕ್ಷಕಿ ಬಗ್ಗೆ ದೂರುತ್ತಿದ್ದಾರೆ. ನಮ್ಮ ಶಾಲೆಯಲ್ಲಿ 90 ಶೇ. ಮುಸ್ಲಿಂ ಮಕ್ಕಳೇ ಇದ್ದಾರೆ. ಈವರೆಗೂ ಹಿಜಾಬ್ ಆಗಲೀ, ಇನ್ನಿತರ ಯಾವುದೇ ವಿಚಾರದಲ್ಲಿ ಸಮಸ್ಯೆ ಆಗಿಲ್ಲ. ಈಗಲೂ ಹಿಜಾಬ್ ಹಾಕಿದ ಮಕ್ಕಳಿಗೂ ನಾವು ಯಾವುದೇ ನಿರಾಕರಣೆ ಮಾಡಿಲ್ಲ ಎಂದು ಹೇಳಿದ್ದಾರೆ.

ಶಿಕ್ಷಕಿಗೆ ವಜಾ ಶಿಕ್ಷೆ – ಹಿಂದು ಸಂಘಟನೆಗಳ ಆಕ್ಷೇಪ

ಶಿಕ್ಷಕಿ ಶಶಿಕಲಾ ಅವರು ತಪ್ಪು ಮಾಡಿಲ್ಲ ಅಂದರೂ, ಮುಸ್ಲಿಂ ಪೋಷಕರ ಒತ್ತಾಯಕ್ಕೆ ಮಣಿದು ಶಾಲಾಡಳಿತ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಇದೇ ವೇಳೆ, ಒಂದಷ್ಟು ಮುಸ್ಲಿಂ ಮಹಿಳೆಯರು ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ಬಂದು ಶಿಕ್ಷಕಿ ಶಶಿಕಲಾ ವಿರುದ್ಧ ದೂರು ನೀಡಿದ್ದು, ಅವರನ್ನು ಯಾವುದೇ ಶಿಕ್ಷಣ ಸಂಸ್ಥೆಯಲ್ಲೂ ಕೆಲಸಕ್ಕೆ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿ ದೂರು ನೀಡಿದ್ದಾರೆ. ಆದರೆ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿದ್ದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಂ ಪೋಷಕರು ಸ್ಥಳದಿಂದ ತೆರಳಿದ ಬಳಿಕ ಮಧ್ಯಾಹ್ನ ಹೊತ್ತಿಗೆ ಶಾಲೆಯ ಮುಂದೆ ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದ್ದು, ಶಾಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ. ಪೊಲೀಸರು ಸಂಘಟನೆಯ ಕಾರ್ಯಕರ್ತರನ್ನು ಮನವೊಲಿಸಿದ್ದು, ಮನವಿಗೆ ಬಗ್ಗದೇ ಇದ್ದುದಕ್ಕೆ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

Bangalore Tension gripped Chandra Layout after a group of parents gathered in front of Vidya Sagar Public School in Bengaluru on Saturday and staged a protest against the management of the school over  restrictions on their children.