ಮಲೆನಾಡಿಗೂ ಹಬ್ಬಿದ ಬಹಿಷ್ಕಾರದ ಕಿಚ್ಚು ; ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಉತ್ಸವಕ್ಕೆ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ, ಬಜರಂಗದಳದಿಂದಲೇ ಮಳಿಗೆ ಬಟವಾಡೆ!

23-03-22 05:08 pm       HK Desk news   ಕರ್ನಾಟಕ

ಕರಾವಳಿಯಲ್ಲಿ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕಿಚ್ಚು ಈಗ ಮಲೆನಾಡಿಗೂ ಹಬ್ಬಿದೆ. ಶಿವಮೊಗ್ಗದ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಾರಿಕಾಂಬ ಉತ್ಸವದಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧ ಹಾಕಲಾಗಿದೆ.

ಶಿವಮೊಗ್ಗ, ಮಾ.23: ಕರಾವಳಿಯಲ್ಲಿ ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕಿಚ್ಚು ಈಗ ಮಲೆನಾಡಿಗೂ ಹಬ್ಬಿದೆ. ಶಿವಮೊಗ್ಗದ ಪ್ರಸಿದ್ಧ ಕೋಟೆ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ಮಾರಿಕಾಂಬ ಉತ್ಸವದಲ್ಲಿ ಮುಸ್ಲಿಮ್ ವ್ಯಾಪಾರಸ್ಥರಿಗೆ ನಿಷೇಧ ಹಾಕಲಾಗಿದೆ.

ಹಿಂದು ಸಂಘಟನೆಗಳ ಆಗ್ರಹ, ಪ್ರತಿಭಟನೆಯ ಬಳಿಕ ದೇವಸ್ಥಾನದ ಆಡಳಿತ ಕಮಿಟಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು ಅನ್ಯಧರ್ಮೀಯರನ್ನು ವ್ಯಾಪಾರದಿಂದ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯಲ್ಲಿ ಮತ, ಧರ್ಮದ ಭೇದ ಇಲ್ಲದೆ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಆಸುಪಾಸಿನ ಹಲವು ನಗರ, ಪೇಟೆಗಳಿಂದ ಜನರು ಉತ್ಸವಕ್ಕೆ ಬರುತ್ತಾರೆ. ಕಳೆದ ಬಾರಿ 2020ರ ಫೆಬ್ರವರಿ ತಿಂಗಳಲ್ಲಿ ಉತ್ಸವ ನಡೆದಿತ್ತು.

ಮಾರಿಕಾಂಬ ಜಾತ್ರೆ ನಡೆಯೋದಕ್ಕೂ ಮೊದಲೇ ವ್ಯಾಪಾರಸ್ಥರು ಮಳಿಗೆ ಏಲಂ ಪಡೆಯುತ್ತಾರೆ. ಆದರೆ ಈ ಬಾರಿ ಹಿಂದು ಸಂಘಟನೆ ಕಾರ್ಯಕರ್ತರೊಬ್ಬರು ಮಳಿಗೆಯನ್ನು ಪಡೆದಿದ್ದು, ಅದನ್ನು ಬಳಿಕ ಹಿಂದುಯೇತರರಿಗೆ ನೀಡಬಾರದು ಎಂದು ನಿರ್ಧರಿಸಿ ಹಿಂದುಗಳಿಗೆ ಮಾತ್ರ ಬಟವಾಡೆ ಮಾಡಲಾಗಿತ್ತು. ಮಳಿಗೆ ಬಟವಾಡೆಯಲ್ಲಿ 9 ಲಕ್ಷ ರೂಪಾಯಿ ಗಳಿಕೆ ಆಗಿದ್ದು. ಅದರ ವರಮಾನ ದೇವಸ್ಥಾನಕ್ಕೆ ಹೋಗುತ್ತದೆ. ಜಾತ್ರೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತಿದ್ದು, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ವ್ಯಾಪಾರಿಗಳೆಲ್ಲ ಭಾರೀ ಕಮಾಯಿ ಮಾಡುತ್ತಿದ್ದರು. ಈ ಬಾರಿ ಹಿಂದುಗಳಿಗೆ ಮಾತ್ರ ಅವಕಾಶ ಎಂದು ನಿರ್ಧಾರಕ್ಕೆ ಬಂದಿರುವುದರಿಂದ ಅನ್ಯಧರ್ಮೀಯರಿಗೆ ನಷ್ಟ ಎದುರಾಗಿದೆ.

ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಮುಸ್ಲಿಂ ಮೂಲಭೂತವಾದಿಗಳು ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಯಾಗಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಲು ಹಿಂದು ಸಂಘಟನೆಗಳು ಮುಂದಾಗಿವೆ. ಇದಕ್ಕಾಗಿ ಕರಾವಳಿಯ ಪ್ರಸಿದ್ಧ ದೇವಸ್ಥಾನಗಳ ಉತ್ಸವಗಳಿಗೆ ಮುಸ್ಲಿಮರಿಗೆ ಬ್ರೇಕ್ ಹಾಕಿದ್ದು ಸುದ್ದಿಯಾಗುತ್ತಲೇ ಶಿವಮೊಗ್ಗದಲ್ಲಿಯೂ ಅದೇ ರೀತಿಯ ಬೆಳವಣಿಗೆ ನಡೆದಿದೆ. ಬಜರಂಗದಳದ ಪ್ರಮುಖರೇ ಸ್ಟಾಲ್ ಬಟವಾಡೆ ಮಾಡಿರುವುದರಿಂದ ಈಗ ಸ್ಟಾಲ್ ಗಳ ಮುಂದೆ ಕೇಸರಿ ಬಾವುಟವನ್ನೂ ಹಾಕಲಾಗಿದೆ.

Restrictions on Muslim traders even at Shivamogga Kote Mariyamma jatre after Muslim traders restricted at Kapu Jatre.