ಕೊಲ್ಲೂರು ದೇಗುಲದಲ್ಲಿ ಟಿಪ್ಪು ಹೆಸರಲ್ಲಿ ಸಲಾಂ ಮಂಗಳಾರತಿ ಇಲ್ಲ, ಪ್ರದೋಷ ಪೂಜೆಗೆ ಆತ ಬರುತ್ತಿದ್ದ ಎಂಬ ಕಾರಣಕ್ಕೆ ಹೆಸರು ಬಂದಿತ್ತು !

27-03-22 10:11 pm       HK Desk news   ಕರ್ನಾಟಕ

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಟಿಪ್ಪು ಹೆಸರಿನಲ್ಲಿ ಸಲಾಂ ಮಂಗಳಾರತಿ ನಡೆಸಲಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ನಾಯಕರು ಆಕ್ಷೇಪಿಸಿದ ಬೆನ್ನಲ್ಲೇ ಕೊಲ್ಲೂರು ಕ್ಷೇತ್ರದ ಮುಖ್ಯ ಅರ್ಚಕ ಕೆ.ವಿ. ಶ್ರೀಧರ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ಕೊಲ್ಲೂರು, ಮಾ.27: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಟಿಪ್ಪು ಹೆಸರಿನಲ್ಲಿ ಸಲಾಂ ಮಂಗಳಾರತಿ ನಡೆಸಲಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ನಾಯಕರು ಆಕ್ಷೇಪಿಸಿದ ಬೆನ್ನಲ್ಲೇ ಕೊಲ್ಲೂರು ಕ್ಷೇತ್ರದ ಮುಖ್ಯ ಅರ್ಚಕ ಕೆ.ವಿ. ಶ್ರೀಧರ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ಕೊಲ್ಲೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ನಡೆಯುವ ಪ್ರದೋಷ ಕಾಲದ ಪೂಜೆಗೆ ಹೆಚ್ಚು ಮಹತ್ವ ಇದೆ. ಪ್ರದೋಷ ಕಾಲದಲ್ಲಿ ಪೂಜೆ ಮಾಡಿದರೆ ಎಲ್ಲ ದೇವರು, ದೇವತೆಗಳು ಪ್ರಸನ್ನರಾಗುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಪ್ರದೋಷ ಕಾಲದ ಪೂಜೆ ಧಾರ್ಮಿಕವಾಗಿ ಹೆಚ್ಚು ಅರ್ಥಪೂರ್ಣ ಮತ್ತು ಮಹತ್ವದ್ದು. ಹಿಂದಿನಿಂದಲೂ ಪ್ರದೋಷ ಕಾಲದ ಪೂಜೆಯನ್ನು ನಡೆಸಿಕೊಂಡು ಬರಲಾಗಿದೆ. ಇದೇ ವೇಳೆ, ರಾಜೋಪಚಾರ ಮತ್ತು ದೀಪಾರಾಧನೆಯನ್ನೂ ನಡೆಸಲಾಗುವುದು.

ಟಿಪ್ಪು ಕೊಲ್ಲೂರು ದೇವಿಗೆ ಕರುಣಾ ಕಾರುಣಿಕೆ ಎಂಬ ಹೆಸರಲ್ಲಿ ಪೂಜೆ ನಡೆಸುತ್ತಿದ್ದ. ಪ್ರದೋಷ ಕಾಲದ ಪೂಜೆಯ ಸಂದರ್ಭದಲ್ಲೇ ಟಿಪ್ಪು ಬರುತ್ತಿದ್ದುದರಿಂದ ಅದೇ ಪೂಜೆಗೆ ಸಲಾಂ ಮಂಗಳಾರತಿ ಅನ್ನುವ ಹೆಸರು ಬಂದಿತ್ತು. ಅಲ್ಲದೆ, ಕರುಣಾ ಕಾರುಣಿಕೆ ಅನ್ನುವ ಪೂಜೆಯ ಸಂಪ್ರದಾಯವೂ ಬೆಳೆದು ಬಂದಿತ್ತು. ಆದರೆ ಟಿಪ್ಪು ಕಾಲದಲ್ಲಿ ಇದು ಆರಂಭಗೊಂಡಿತ್ತು ಅನ್ನುವುದು ಕೇವಲ ನಂಬಿಕೆಯಷ್ಟೇ. ಇದಕ್ಕೆ ಯಾವುದೇ ದಾಖಲೆ ಇಲ್ಲ. ಬಾಯಿಂದ ಬಾಯಿಗೆ ಹೇಳಿಕೊಂಡು ನಡೆದುಕೊಂಡು ಬಂದಿದೆ. ಸಲಾಂ ಮಂಗಳಾರತಿ ಅನ್ನುವ ಪದ್ಧತಿಯೂ ದೇವಸ್ಥಾನದಲ್ಲಿ ಇಲ್ಲ.

ಆದರೆ ಪ್ರದೋಷ ಪೂಜೆ ಅಥವಾ ಪ್ರದೋಷ ಮಂಗಳಾರತಿ ಅನ್ನುವುದಕ್ಕೆ ಹೆಚ್ಚು ಧಾರ್ಮಿಕ ಮಹತ್ವ ಇದೆ. ಟಿಪ್ಪುವಿಗಿಂತ ಹಿಂದಿನ ಕಾಲದಿಂದಲೂ ಇದು ನಡೆದುಕೊಂಡು ಬಂದಿರುವಂಥದ್ದು. ಈ ಪೂಜೆಯ ಸಂದರ್ಭದಲ್ಲಿ ದೇಶದ ಸುಭಿಕ್ಷೆಗಾಗಿ ಪ್ರಾರ್ಥನೆ ನಡೆಸಲಾಗುತ್ತದೆ. ಅದೇ ಪೂಜೆಯ ಸಂದರ್ಭದಲ್ಲಿ ಟಿಪ್ಪು ಬಂದು ನಿಲ್ಲುತ್ತಿದ್ದ ಎನ್ನಲಾಗುತ್ತಿದ್ದು ಅದೇ ಕಾರಣದಿಂದ ಸಲಾಂ ಮಂಗಳಾರತಿ ಎನ್ನುವ ಹೆಸರು ಚಾಲ್ತಿಗೆ ಬಂದಿತ್ತು. ಆದರೆ ಇದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಅಂತಹ ಹೆಸರು ಕೂಡ ಕೊಲ್ಲೂರು ದೇವಸ್ಥಾನದಲ್ಲಿ ಚಾಲ್ತಿಯಲ್ಲಿ ಇಲ್ಲ ಎಂದು ಶ್ರೀಧರ ಅಡಿಗ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಕೊಲ್ಲೂರು ದೇವಸ್ಥಾನದ ಆಡಳಿತ ಮೊಕ್ತೇಸರರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಿಗೆ ಮನವಿ ನೀಡಿದ್ದ ವಿಶ್ವ ಹಿಂದು ಪರಿಷತ್ ಮುಖಂಡರು, ಕೊಲ್ಲೂರು ದೇಗುಲದಲ್ಲಿ ಟಿಪ್ಪು ಹೆಸರಲ್ಲಿ ನಡೆಸಲಾಗುತ್ತಿರುವ ಸಲಾಂ ಮಂಗಳಾರತಿ ಅನ್ನುವ ಪೂಜೆಯನ್ನು ಹೆಸರು ಬದಲಿಸಬೇಕು. ಟಿಪ್ಪು ಹೆಸರಿನ ಗುಲಾಮಿತನವನ್ನು ಅಳಿಸಿಹಾಕಬೇಕು ಎಂದು ಆಗ್ರಹ ಮಾಡಿದ್ದರು. ವಿಹಿಂಪ ನಾಯಕರ ಮನವಿ ಸುದ್ದಿಯಾಗುತ್ತಿದ್ದಂತೆ ಹೊಸ ವಿವಾದ ಹುಟ್ಟಿಕೊಳ್ಳುವ ಹಂತಕ್ಕೆ ಬಂದಿತ್ತು. ಆದರೆ, ಅಷ್ಟರಲ್ಲೇ ಕೊಲ್ಲೂರು ದೇಗುಲದ ಮುಖ್ಯ ಅರ್ಚಕರು ಅಂತಹ ಯಾವುದೇ ಪೂಜೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

K V Sridhara Adiga, priest of Kollur temple, has issued a clarification on Pradosha Pooja aka Salaam Mangalarati that is offered to the Goddess in Kollur Mookambika temple on which a controversy has been created by VHP.