ಕೇರಳದಲ್ಲಿ ಭೂಕುಸಿತ: 15 ಮೃತದೇಹ ಹೊರಕ್ಕೆ

07-08-20 02:20 pm       Headline Karnataka News Network   ದೇಶ - ವಿದೇಶ

ಭಾರೀ ಮಳೆಯಿಂದಾಗಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು ಇದುವರೆಗೆ 15 ಜೀವಗಳನ್ನು ಬಲಿಪಡೆದುಕೊಂಡಿದೆ.

ಮುನ್ನಾರ್: ಕೇರಳಕ್ಕೆ ಮತ್ತೆ ಆಗಸ್ಟ್ ಶಾಪ ವಕ್ಕರಿಸಿದೆ. ರಾಜ್ಯಾದ್ಯಂತ ಕುಂಭದ್ರೋಣ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು ಇದುವರೆಗೆ 15 ಜೀವಗಳನ್ನು ಬಲಿಪಡೆದುಕೊಂಡಿದೆ. ರಕ್ಷಣಾ ಪಡೆಗಳು ಆರು ಜನರನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಿದ್ದು ಅವರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

ಕುಸಿದ ಗುಡ್ಡದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರಬಹುದಾಗಿರುವವರಿಗಾಗಿ ಶೋಧ ಕಾರ್ಯವನ್ನು ಭರದಿಂದ ನಡೆಸಲಾಗುತ್ತಿದೆ.

ಮುನ್ನಾರು ಪಟ್ಟಣದಿಂದ 28 ಕಿಲೋಮೀಟರ್ ದೂರದಲ್ಲಿರುವ ಹಾಗೂ ಇರವಿಕುಲಂ ರಾಷ್ಟ್ರೀಯ ವನ್ಯಧಾಮಕ್ಕಿಂತ 20 ಕಿಲೋಮೀಟರ್ ಅಂತರದಲ್ಲಿರುವ ಈ ಚಹಾ ಪ್ಲಾಂಟೇಷನ್ ನ ಆಸುಪಾಸಿನಲ್ಲಿ ಸುಮಾರು 80 ಜನರು ವಾಸಿಸುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಇವರೆಲ್ಲರೂ ಕಣ್ಣನ್ ದೇವನ್ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದರು.

ರಾಜಾಮಲೆಯನ್ನು ಮುನ್ನಾರ್ ನೊಂದಿಗೆ ಸಂಪರ್ಕಿಸುವ ಪೆರಿಯಾರ್ ಸೇತುವೆಯೂ ಸಹ ಈ ಗುಡ್ಡ ಕುಸಿತದಿಂದ ಹಾನಿಗೀಡಾಗಿದೆ. ಮತ್ತು ಈ ಭಾಗದಲ್ಲಿದ್ದ ಮೊಬೈಲ್ ಟವರ್ ಸಹ ಘಟನೆಯಿಂದ ಹಾನಿಗೊಳಗಾದ ಕಾರಣ ಈ ಭೀಕರ ಗುಡ್ಡ ಕುಸಿತದ ವಿಚಾರ ಹೊರಜಗತ್ತಿಗೆ ತಿಳಿಯಲು ಸರಿಸುಮಾರು 5 ಗಂಟೆಗಳು ಬೇಕಾಗಿತ್ತು. ಅದೂ ಘಟನಾ ಸ್ಥಳದಿಂದ ತಮ್ಮನ್ನು ರಕ್ಷಿಸಿಕೊಂಡ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಈ ಭೀಕರ ಘಟನೆ ಬೆಳಕಿಗೆ ಬಂದಿತ್ತು.