ಏರ್ ಇಂಡಿಯಾ ವಿಮಾನ ದುರಂತ ; 15ಕ್ಕೂ ಹೆಚ್ಚು ಸಾವು ಶಂಕೆ

07-08-20 03:31 pm       Headline Karnataka News Network   ದೇಶ - ವಿದೇಶ

ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದೆ. ಈ ಅವಘಡದಲ್ಲಿ ಎರಡು ಪೈಲೆಟ್ ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಏರ್​ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 112ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕ್ಯಾಲಿಕಟ್ ಆಗಸ್ಟ್  07: ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ  ದುರಂತಕ್ಕೀಡಾಗಿದೆ. ದುಬೈನಿಂದ ಕ್ಯಾಲಿಕಟ್  ಆಗಮಿಸಿದ ಎರ್ ಇಂಡಿಯಾ ವಿಮಾನ ಲ್ಯಾಂಡ್ ಆಗುವ ಹಂತದಲ್ಲಿ ರನ್ ವೇಯಿಂದ ಜಾರಿದ್ದು ದುರಂತಕ್ಕೀಡಾಗಿದೆ.

ಈ ಅವಘಡದಲ್ಲಿ ಎರಡು ಪೈಲೆಟ್ ಸೇರಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಏರ್​ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. 112ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವಿಮಾನದಲ್ಲಿ ಸುಮಾರು 191 ಮಂದಿ ಪ್ರಯಾಣಿಕರಿದ್ದರು ಎಂದು ಡಿಜಿಸಿಎ ಹೇಳಿದೆ. ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಕ್ಯಾಲಿಕಟ್ ವಿಮಾನ ನಿಲ್ದಾಣದ ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್ ವೇಯಿಂದ ಜಾರಿ ನಿಯಂತ್ರಣ ತಪ್ಪಿ ಹೊರಗೆ ಬಿದ್ದಿದೆ. 

ಸಂಜೆ 7.45 ರ ಸುಮಾರಿಗೆ  ವಿಮಾನ ಲ್ಯಾಂಡ್ ಆಗುತ್ತಿದ್ದಾಗ ಘಟನೆ ನಡೆದಿದೆ. ಮಳೆಯ ಕಾರಣ ರನ್ ವೇಯಿಂದ ಹೊರಕ್ಕೆ ಜಾರಿದ್ದು ಅಲ್ಲಿಯೇ ಪಕ್ಕದಲ್ಲಿರುವ ಪ್ರಪಾತಕ್ಕೆ ಬಿದ್ದಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಮಳೆಯಿಂದಾಗಿ ದುರ್ಘಟನೆ ವೇಳೆ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿಲ್ಲ. 

ಸ್ಥಳದಲ್ಲಿ 24 ಆ್ಯಂಬುಲೆನ್ಸ್​ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ, ಎನ್‌ಡಿಆರ್‌ಎಫ್‌ ತಂಡದ 50 ಸೈನಿಕರು ರಕ್ಷಣಾ ಸ್ಥಳಕ್ಕೆ ಧಾವಿಸಿದ್ಧಾರೆ.

ವಿಮಾನದಲ್ಲಿ ಕರ್ನಾಟಕದ ಕರಾವಳಿಯ ಮಂದಿಯೂ ಇದ್ದರು ಎನ್ನಲಾಗ್ತಿದೆ. ಲಾಕ್ ಡೌನ್ ಬಳಿಕ ವಿಶೇಷ ವಿಮಾನದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರು ಹಿಂತಿರುಗುತ್ತಿದ್ದರು..