ಏರ್ ಇಂಡಿಯಾ ವಿಮಾನ ದುರಂತ ; ಬ್ಲ್ಯಾಕ್ ಬಾಕ್ಸ್ ಪತ್ತೆ;

08-08-20 07:37 am       Headline Karnataka News Network   ದೇಶ - ವಿದೇಶ

ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದೆ. ಈ ಅವಘಡದಲ್ಲಿ ಎರಡು ಪೈಲೆಟ್ ಸೇರಿ 17 ಮಂದಿ ಮೃತಪಟ್ಟಿದ್ದಾರೆ ಎಂದು ಏರ್​ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ, ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ ಆಗಿದೆ.

ಕ್ಯಾಲಿಕಟ್, ಆಗಸ್ಟ್​ 8​: ಇಲ್ಲಿಯ ಕರಿಪುರ್ ಏರ್​ಪೋರ್ಟ್​ನಲ್ಲಿ ಶುಕ್ರವಾರ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ರನ್​ವೇಯಿಂದ ಜಾರಿಬಿದ್ದು ಭಾರೀ ದುರಂತ ಸಂಭವಿಸಿತ್ತು. ಮಳೆ ಅತಿಯಾಗಿ ಸುರಿಯುತ್ತಿದ್ದುರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಅಸಲಿ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ, ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ ಆಗಿದೆ. ಈ ಬ್ಲ್ಯಾಕ್​ ಬಾಕ್ಸ್​ನಲ್ಲಿ ದುರಂತದ ಹಿಂದಿನ ನಿಜವಾದ ರಹಸ್ಯ ಇದೆ ಎನ್ನಲಾಗುತ್ತಿದೆ. 

ಪ್ರತಿ ವಿಮಾನದಲ್ಲೂ ಬ್ಲ್ಯಾಕ್​ ಬಾಕ್ಸ್​ ಇರುತ್ತದೆ. ಈ ಬ್ಲ್ಯಾಕ್ ಬಾಕ್ಸ್​ನಲ್ಲಿ ವಿಮಾನದ ವೇಗ, ವಿಮಾನದ ಸ್ಥಿತಿ-ಗತಿ, ಪೈಲಟ್​ಗಳ ಸಂಭಾಷಣೆ ಕೂಡ ಇರಲಿದೆ. ಹೀಗಾಗಿ, ಏರ್​ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗುವುದಕ್ಕೂ ಮೊದಲು ಏನಾಗಿತ್ತು ಎನ್ನುವುದು ಈ ಬ್ಲ್ಯಾಕ್​ ಬಾಕ್ಸ್​ನಲ್ಲಿ ರೆಕಾರ್ಡ್​ ಆಗಿರುತ್ತದೆ.

ನಾಗರಿಕ ವಿಮಾನಯಾನ, ವಿಮಾನ ಅಪಘಾತ ತನಿಖಾ ವಿಭಾಗ, ಏರ್​ ಇಂಡಿಯಾ ಹಾಗೂ ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಅಧಿಕಾರಿಗಳು ಈಗಾಗಲೇ ಕೋಯಿಕ್ಕೋಡ್​ ತಲುಪಿದ್ದಾರೆ ಎಂದು ಏರ್​ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾವಿನ ಸಂಖ್ಯೆ ಹೆಚ್ಚಳ:

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. X1344 ಬೋಯಿಂಗ್ 737 ವಿಮಾನ ದುಬೈನಿಂದ ಕೋಯಿಕ್ಕೋಡ್​ಗೆ ಹೊರಟಿತ್ತು. ಸಂಜೆ 7:41ಕ್ಕೆ ವಿಮಾನ ಲ್ಯಾಂಡ್​ ಆಗಿದ್ದು, ರನ್​ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್​ ಸೇರಿ 17 ಜನರು ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ 19ಕ್ಕೆ ಏರಿಕೆ ಆಗಿದೆ.