ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ, ವಾಯುಪಡೆ ಅಧಿಕಾರಿ ಸೇರಿ ನಾಲ್ವರು ಹುತಾತ್ಮ, ರಾಜೌರಿ ಜಿಲ್ಲಾಧಿಕಾರಿಯೂ ಸಾವು, ನಾಲ್ಕು ದಿನಗಳ ಹಿಂದೆ ಬೆಂಗಳೂರಿನಿಂದ ಉಧಂಪುರ್ ತೆರಳಿದ್ದ ಸುರೇಂದ್ರ ಮೋಗಾ ಮೃತ್ಯು ! 

11-05-25 01:43 pm       HK News Desk   ದೇಶ - ವಿದೇಶ

ಜಮ್ಮು ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಶನಿವಾರ ರಾತ್ರಿ ಕದನ ವಿರಾಮ ಲೆಕ್ಕಿಸದೆ ಪಾಕ್ ಕಡೆಯಿಂದ ಫೈರಿಂಗ್ ಮತ್ತು ಶೆಲ್ ದಾಳಿಯಾಗಿದ್ದು ಬಿಎಸ್‌ಎಫ್ ಯೋಧ, ಇಬ್ಬರು ಭೂಸೇನೆ ಸೈನಿಕರು, ಮತ್ತೊಬ್ಬರು ವಾಯುಪಡೆ ಅಧಿಕಾರಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇತರ ಏಳು ಮಂದಿ ಭದ್ರತಾ ಪಡೆ ಸಿಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶ್ರೀನಗರ, ಮೇ 11 : ಜಮ್ಮು ಕಾಶ್ಮೀರದ ಪಾಕಿಸ್ತಾನ ಗಡಿಯಲ್ಲಿ ಶನಿವಾರ ರಾತ್ರಿ ಕದನ ವಿರಾಮ ಲೆಕ್ಕಿಸದೆ ಪಾಕ್ ಕಡೆಯಿಂದ ಫೈರಿಂಗ್ ಮತ್ತು ಶೆಲ್ ದಾಳಿಯಾಗಿದ್ದು ಬಿಎಸ್‌ಎಫ್ ಯೋಧ, ಇಬ್ಬರು ಭೂಸೇನೆ ಸೈನಿಕರು, ಮತ್ತೊಬ್ಬರು ವಾಯುಪಡೆ ಅಧಿಕಾರಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಇತರ ಏಳು ಮಂದಿ ಭದ್ರತಾ ಪಡೆ ಸಿಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜಮ್ಮು ವಿಭಾಗದ ಆರ್.ಎಸ್ ಪುರ ವಿಭಾಗದಲ್ಲಿ ಶನಿವಾರ ರಾತ್ರಿ ಗುಂಡಿನ ದಾಳಿಯಾಗಿದ್ದು ಈ ವೇಳೆ, ಬಿಎಸ್ಎಫ್ ವಿಭಾಗದ ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಬಿಹಾರ ಮೂಲದ ಅಧಿಕಾರಿ ಮೊಹಮ್ಮದ್ ಇಮ್ತಿಯಾಜ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾರೆ. ಅವರ ಜೊತೆಗಿದ್ದ ಇತರ ಏಳು ಮಂದಿ ಗಾಯಗೊಂಡಿದ್ದಾರೆ.

ಪೂಂಛ್ ವಿಭಾಗದ ಕೃಷ್ಣಘಾಟಿ ಸೆಕ್ಟರ್ ನಲ್ಲಿ ಪಾಕಿಸ್ತಾನದಿಂದ ಎಸೆಯಲ್ಪಟ್ಟ ಶೆಲ್ ಸ್ಫೋಟಗೊಂಡು ಹಿಮಾಚಲ ಪ್ರದೇಶ ಮೂಲದ ಭೂಸೇನಾ ಯೋಧ ಸುಬೇದಾರ್ ಮೇಜರ್ ಪವನ್ ಕುಮಾರ್ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಆರ್.ಎಸ್ ಪುರ ವಿಭಾಗದಲ್ಲಿ ರಾತ್ರಿ ನಡೆದ ಪಾಕಿಗಳ ಗುಂಡಿನ ದಾಳಿಗೆದುರಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಜಮ್ಮು ಕಾಶ್ಮೀರದ ಲೈಟ್ ಇನ್ಫೆಂಟ್ರಿ ವಿಭಾಗದ ರೈಫಲ್ ಮ್ಯಾನ್ ಸುನಿಲ್ ಕುಮಾರ್ ಹುತಾತ್ಮರಾಗಿದ್ದಾರೆ. 

ಉಧಂಪುರ್ ನಲ್ಲಿ ಕರ್ತವ್ಯದಲ್ಲಿದ್ದ ವಾಯುಪಡೆಯ ಮೆಡಿಕಲ್ ಅಸಿಸ್ಟೆಂಟ್ ಅಧಿಕಾರಿ ರಾಜಸ್ಥಾನ ಮೂಲದ ಸುರೇಂದ್ರ ಕುಮಾರ್ ಮೋಗಾ(36) ಪಾಕಿಸ್ತಾನ ಕಡೆಯ ದಾಳಿಗೆ ತುತ್ತಾಗಿ ದುರಂತ ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಂದ್ರ ಕುಮಾರ್ ಮೋಗಾ ನಾಲ್ಕು ದಿನಗಳ ಹಿಂದೆ ಜಮ್ಮುವಿನ ಉಧಂಪುರಕ್ಕೆ ನಿಯೋಜಿತರಾಗಿದ್ದರು.‌ ಮೋಗಾ ನಿಧನಕ್ಕೆ ರಾಜಸ್ಥಾನ ಸಿಎಂ ಭಜನಲಾಲ್ ಶರ್ಮಾ ತೀವ್ರ ಕಂಬನಿ ಮಿಡಿದಿದ್ದು ರಾಜಸ್ಥಾನದ ಜುಂಝುನು ಜಿಲ್ಲೆಯ ನಿವಾಸಿ ಸುರೇಂದ್ರ ಕುಮಾರ್ ಮೋಗಾ ಉಧಂಪುರ್ ಏರ್ ಬೇಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹುತಾತ್ಮರಾಗಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ ಎಂದು ತಿಳಿಸಿದ್ದಾರೆ. 

ಇದಲ್ಲದೆ, ರಾಜೌರಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ರಾಜ್ ಕುಮಾರ್ ಥಾಪಾ ಪಾಕಿಸ್ತಾನ ಕಡೆಯ ಶೆಲ್ ದಾಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜೌರಿ ನಗರದ ಥಾಪಾ ಮನೆಯ ಮೇಲೆ ಪಾಕ್ ಶೆಲ್ ದಾಳಿ ನಡೆಸಿದ್ದು ಇವರು ಸೇರಿದಂತೆ ಇನ್ನಿಬ್ಬರು ಸಿಬಂದಿ ಗಾಯಗೊಂಡಿದ್ದರು. ರಾಜ್ ಕುಮಾರ್ ಥಾಪಾ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿ ಮೃತಪಟ್ಟಿದ್ದಾರೆ. 

ಪಾಕಿಸ್ತಾನವೇ ಜವಾಬ್ದಾರಿ ; ಮಿಸ್ರಿ 

ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಒಪ್ಪಂದ ಉಲ್ಲಂಘಿಸಿದ ಪಾಕಿಸ್ತಾನವೇ ಇದಕ್ಕೆ ಸಂಪೂರ್ಣ ಜವಾಬ್ದಾರಿಯಾಗಿದ್ದು, ನಮ್ಮ ಸೇನೆಯೂ ಪ್ರತ್ಯುತ್ತರ ನೀಡಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಿಕ್ರಮ್ ಮಿಸ್ರಿ ಪಾಕ್ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ಕದನ ವಿರಾಮ ಉಲ್ಲಂಘನೆ ಕುರಿತು ಮಾತನಾಡಿದ ಅವರು, ಕದನ ವಿರಾಮ ಒಪ್ಪಂದಕ್ಕೆ ಎರಡೂ ರಾಷ್ಟ್ರಕ್ಕೆ ಸಮ್ಮತಿ ನೀಡಿದ್ದವು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ. ಇದಕ್ಕೆ ಪಾಕಿಸ್ತಾನವೇ ಹೊಣೆ ಎಂದಿದ್ದಾರೆ.

Hours ahead of the ceasefire agreement between India and Pakistan, Jammu and Kashmir on Saturday (May 10, 2025) morning was gripped in a war-like situation as five civilians, including a senior officer, were killed in cross-border shelling of the Pakistani troops.