ಮಲಪ್ಪುರಂನಲ್ಲಿ ಕುಸಿದು ಹೋದ ರಾಷ್ಟ್ರೀಯ ಹೆದ್ದಾರಿ, ಆರು ವಾಹನಗಳು ಜಖಂ ; ಬಿಸಿ ರೋಡ್- ಗುಂಡ್ಯ ಹೆದ್ದಾರಿ ನಿರ್ವಹಿಸುತ್ತಿರುವ ಕೆಎನ್ಆರ್ ಕನ್ ಸ್ಟ್ರಕ್ಷನ್ ಕಂಪನಿ ಕಪ್ಪು ಪಟ್ಟಿಗೆ !

26-05-25 11:34 pm       HK News Desk   ದೇಶ - ವಿದೇಶ

ಕೇರಳದ ಮಲಪ್ಪುರಂ – ತ್ರಿಶ್ಶೂರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಬಳಿಯ ಸರ್ವಿಸ್ ರಸ್ತೆ ಕುಸಿದು ಬಿದ್ದಿದ್ದು, ಕಾಮಗಾರಿ ನಿರ್ವಹಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಕೆಎನ್ಆರ್ ಕನ್ಸ್ ಟ್ರಕ್ಷನ್ ಕಂಪನಿಯನ್ನು ಎರಡು ವರ್ಷಗಳ ಅವಧಿಗೆ ಕೇಂದ್ರ ಸಾರಿಗೆ ಸಚಿವಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.

ತಿರುವನಂತಪುರಂ, ಮೇ 27: ಕೇರಳದ ಮಲಪ್ಪುರಂ – ತ್ರಿಶ್ಶೂರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಬಳಿಯ ಸರ್ವಿಸ್ ರಸ್ತೆ ಕುಸಿದು ಬಿದ್ದಿದ್ದು, ಕಾಮಗಾರಿ ನಿರ್ವಹಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಕೆಎನ್ಆರ್ ಕನ್ಸ್ ಟ್ರಕ್ಷನ್ ಕಂಪನಿಯನ್ನು ಎರಡು ವರ್ಷಗಳ ಅವಧಿಗೆ ಕೇಂದ್ರ ಸಾರಿಗೆ ಸಚಿವಾಲಯ ಕಪ್ಪು ಪಟ್ಟಿಗೆ ಸೇರಿಸಿದೆ.

ಮೇ 19ರಂದು ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದಾಗಲೇ ಹಠಾತ್ತಾಗಿ ರಸ್ತೆ ಕುಸಿದು ಹೋಗಿದ್ದು, ನಾಲ್ಕು ವಾಹನಗಳು ಪ್ರಪಾತಕ್ಕೆ ಬಿದ್ದು ಅದರಲ್ಲಿದ್ದ ಪ್ರಯಾಣಿಕರು ತೀವ್ರ ಗಾಯಕ್ಕೀಡಾಗಿದ್ದರು. ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಎಂಬ ಪ್ರದೇಶದಲ್ಲಿ ಗದ್ದೆಯ ನಡುವೆ ಸಾಗಿದ್ದ ರಸ್ತೆಯಲ್ಲಿ ಘಟನೆ ನಡೆದಿತ್ತು. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ದುರವಸ್ಥೆ ಮತ್ತು ಕಳಪೆ ಕಾಮಗಾರಿ ಬಗ್ಗೆ ತೀವ್ರ ಆಕ್ರೋಶ ಎದ್ದಿತ್ತು.

Centre debars KNR Constructions over NH-66 collapse in Malappuram; suspends  two officials

NH collapse in Kerala: Construction company accepts blame, vows to take  corrective action

ಇದರ ಬೆನ್ನಲ್ಲೇ ಮಲಪ್ಪುರಂ ಸಂಸದ ಮತ್ತು ಮುಸ್ಲಿಂ ಲೀಗ್ ನಾಯಕ ಇ.ಟಿ. ಮಹಮ್ಮದ್ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ದೂರು ನೀಡಿದ್ದು, ಕಾಮಗಾರಿ ನಿರ್ವಹಿಸಿದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸಿದ್ದರು. ದೆಹಲಿ ಐಐಟಿ ಪ್ರೊಫೆಸರ್ ಜಿವಿ ರಾವ್ ಮತ್ತು ಇನ್ನಿತರ ತಜ್ಞರನ್ನು ಒಳಗೊಂಡ ಕಮಿಟಿ ನೀಡಿದ ಪ್ರಾಥಮಿಕ ವರದಿ ಆಧರಿಸಿ ಕಳಪೆ ಕಾಮಗಾರಿ ನಿರ್ವಹಿಸಿದ್ದಕ್ಕಾಗಿ ಕೆಎನ್ ಆರ್ ಕನ್ ಸ್ಟ್ರಕ್ಷನ್ ಕಂಪನಿ ಮತ್ತು ಕನ್ಸಲ್ಟನ್ಸಿ ಸಂಸ್ಥೆ ಹೈವೇ ಇಂಜಿನಿಯರಿಂಗ್ ಕನ್ಸಲ್ಟಂಟ್ ಅನ್ನು ಎರಡು ವರ್ಷಗಳ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಿ ಸಚಿವ ನಿತಿನ್ ಗಡ್ಕರಿ ಆದೇಶ ಮಾಡಿದ್ದಾರೆ. ಈ ಅವಧಿಯಲ್ಲಿ ಯಾವುದೇ ಸರಕಾರಿ ಟೆಂಡರ್ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿರುವ ಸಚಿವ ಗಡ್ಕರಿಯವರು, ಸಂಬಂಧಪಟ್ಟ ಇಬ್ಬರು ಇಂಜಿನಿಯರ್ ಗಳನ್ನು ಅಮಾನತು ಮಾಡಿದ್ದಾರೆ. ಅಲ್ಲದೆ, ಎರಡು ಕಂಪನಿಗಳಿಗೆ ಸರಕಾರದಿಂದ ನೀಡಿರುವ ಗ್ಯಾರಂಟಿ ಮೊತ್ತವನ್ನೂ ಹಿಂಪಡೆಯುವಂತೆ ಮಹಮ್ಮದ್ ಬಶೀರ್, ಗಡ್ಕರಿಯವರನ್ನು ಆಗ್ರಹಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮನೋಜ್ ಕುಮಾರ್, ಈ ಕುರಿತು ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಡಿಪಿಆರ್ ವರದಿಯೇ ದೋಷಪೂರಿತ ಎಂದು ಹೇಳಿದ್ದಾರೆ. ಸಚಿವ ಸುರೇಶ್ ಗೋಪಿ, ಹೆದ್ದಾರಿ ಕುಸಿದು ಹೋಗಿರುವ ಬಗ್ಗೆ ಆಕ್ರೋಶಗೊಂಡಿದ್ದು, ಇದಕ್ಕೆ ಕಾರಣ ಯಾರು, ದೋಷಪೂರಿತ ಡಿಪಿಆರ್ ಗೆ ಒಪ್ಪಿಗೆ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ್ದು, ಅವರನ್ನು ಶಿಕ್ಷಿಸುವಂತೆ ಸೂಚಿಸಿದ್ದಾರೆ.

ಮಲಪ್ಪುರಂ ಜಿಲ್ಲೆಯ ಕೂರಿಯಾಡ್ ಪ್ರದೇಶದಲ್ಲಿ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿದ್ದು, ಆರು ಪಥದ ರಸ್ತೆಯ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಕುಸಿದು ಬಿದ್ದಿರುವ ಜಾಗವನ್ನು ನೋಡುವುದಕ್ಕಾಗಿ ಜನರು ಆಗಮಿಸುತ್ತಿದ್ದು, ಟೂರಿಸ್ಟ್ ತಾಣದಂತೆ ಬದಲಾಗಿದೆ. ಸದ್ಯಕ್ಕೆ ಮಲಪ್ಪುರಂ ಜಿಲ್ಲಾಧಿಕಾರಿ, ಆ ಪ್ರದೇಶವನ್ನು ಟೂರಿಸ್ಟ್ ತಾಣ ಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ಬಿಸಿ ರೋಡ್ – ಗುಂಡ್ಯ ರಸ್ತೆಯೂ ಇವರದ್ದೇ

ವಿಶೇಷ ಅಂದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡಿನಿಂದ ಗುಂಡ್ಯ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನೂ ಇದೇ ಕೆಎನ್ ಆರ್ ಕನ್ ಸ್ಟ್ರಕ್ಷನ್ಸ್ ಸಂಸ್ಥೆಯವರು ನಿರ್ವಹಿಸುತ್ತಿದ್ದು ಕಳಪೆ ಕಾಮಗಾರಿಯಿಂದಾಗಿ ಕಪ್ಪು ಪಟ್ಟಿಗೆ ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿ ಜಾಲತಾಣದಲ್ಲಿ ಈ ಬಗ್ಗೆ ಟೀಕೆ ವ್ಯಕ್ತವಾಗಿದೆ. ಮೆಲ್ಕಾರ್, ಕಲ್ಲಡ್ಕ, ನೆಲ್ಯಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಫ್ಲೈ ಓವರ್ ಗಳನ್ನು ಮಾಡಲಾಗಿದ್ದು, ಇಂತಹದ್ದೇ ಫ್ಲೈಓವರ್ ರಸ್ತೆಯ ಒಂದು ಪಾರ್ಶ್ವ ಮಲಪ್ಪುರಂನಲ್ಲಿ ಕುಸಿದು ಬಿದ್ದಿರುವುದು ಆತಂಕ ಮೂಡಿಸಿದೆ.

The Union Ministry of Road Transport and Highways has barred the company involved in constructing the elevated National Highway-66 portion that collapsed in Malappuram district from participating in tenders for two years, effective May 19.