ಪ್ರಧಾನಿ ಮೋದಿ ಕರೆ ಎಫೆಕ್ಟ್ ; ದೇಶಾದ್ಯಂತ ಚಿನ್ನ ಖರೀದಿ 70 ಶೇ. ಕುಸಿತ, ಮೇ ತಿಂಗಳಲ್ಲೇ ಏಳೂವರೆ ಟನ್ ಚಿನ್ನದ ಬೇಡಿಕೆ ಇಳಿಕೆ !

31-05-26 09:25 pm       HK News Staffer   ದೇಶ - ವಿದೇಶ

ಗಲ್ಫ್ ಯುದ್ಧ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿರುವುದು ಮತ್ತು ಕೇಂದ್ರ ಸರಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚಿನ್ನದ ಬೇಡಿಕೆ ದೇಶದಲ್ಲಿ ಶೇ.70ರಷ್ಟು ಕುಸಿದಿದೆ.

ನವದೆಹಲಿ, ಮೇ 31: ಗಲ್ಫ್ ಯುದ್ಧ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚಿನ್ನ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿರುವುದು ಮತ್ತು ಕೇಂದ್ರ ಸರಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚಿನ್ನದ ಬೇಡಿಕೆ ದೇಶದಲ್ಲಿ ಶೇ.70ರಷ್ಟು ಕುಸಿದಿದೆ.

ಆಮದು ಸುಂಕ ಏರಿಕೆಯಾದ ನಂತರದ 14 ದಿನಗಳಲ್ಲಿ ಬೇಡಿಕೆ ಪ್ರಮಾಣ 7.5 ಟನ್ ಗಳಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷ ಮೇ ತಿಂಗಳ ಇದೇ ಅವಧಿಯಲ್ಲಿ ಅಂದರೆ ಮೇ 13ರಿಂದ 27ರ ಅವಧಿಯಲ್ಲಿ ಚಿನ್ನದ ಬೇಡಿಕೆ ಪ್ರಮಾಣ 25 ಟನ್ ಇತ್ತು. ಈ ಸಲ ಎರಡು ವಾರದಲ್ಲಿ 7.5 ಟನ್ ನಷ್ಟು ಚಿನ್ನದ ಬೇಡಿಕೆ ಕುಸಿದಿದೆ. ದೇಶಾದ್ಯಂತ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗಿದ್ದು ಚಿನ್ನ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ ಎಂದು ಅಖಿಲ ಭಾರತ ಆಭರಣ ವ್ಯಾಪಾರಿಗಳ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ ಹೇಳಿದ್ದಾರೆ. 

ಅಮದು ಸುಂಕ ಹೆಚ್ಚಳದ ನಂತರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿದಂತೆ ಚಿನ್ನದ ಮೇಲೆ ತೆರಿಗೆ ಹೊರೆ ಶೇ.9.18 ರಿಂದ ಶೇ.18.45ಕ್ಕೆ ಏರಿದೆ. ರೂಪಾಯಿ ಅಪಮೌಲ್ಯ, ಕಚ್ಚಾ ತೈಲದ ಹೆಚ್ಚಿದ ಬೆಲೆಗಳು, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಿನ್ನೆಲೆಯಲ್ಲಿ ಸರಕಾರ ಸುಂಕಗಳನ್ನು ಹೆಚ್ಚಿಸಿದೆ. 

ಪ್ರಧಾನಿ ಮೋದಿಯವರ ಕರೆ ಚಿನ್ನದ ಬೇಡಿಕೆ ಕುಸಿಯಲು ಪ್ರಮುಖ ಕಾರಣ. ''ಒಂದು ವರ್ಷದ ತನಕ ಚಿನ್ನದ ಖರೀದಿಯಿಂದ ದೂರವಿರಿ," ಎಂದು ಮೋದಿ ಕರೆ ನೀಡಿರುವುದು ಚಿನ್ನ ಖರೀದಿ ಮೇಲೆ ದೊಡ್ಡ ಪರಿಣಾಮ ಬೀರಿದೆ.‌ ಇದೇ ವೇಳೆ ಚಿನ್ನದ ಮೇಲಿನ ಹೂಡಿಕೆಯೂ ಕಡಿಮೆಯಾಗಿದೆ. ಜನರು ಕಡಿಮೆ ಕ್ಯಾರೆಟ್‌ನ ಆಭರಣಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಆದರೆ ಹಳೆಯ ಚಿನ್ನದ ಮಾರಾಟವು ಹೆಚ್ಚಾಗಿದೆ. ಗ್ರಾಹಕರು ತಮ್ಮ ಬಜೆಟ್ ಮೀರಿ ಖರ್ಚು ಮಾಡುತ್ತಿಲ್ಲ ಎಂದು ಜಾಗತಿಕ ಚಿನ್ನ ಸಂಶೋಧನಾ ಮಂಡಳಿ ಮುಖ್ಯಸ್ಥೆ ಕವಿತಾ ಚಾಕೋ ತಿಳಿಸಿದ್ದಾರೆ. ಬೇಡಿಕೆ ಕುಸಿದರೂ ಚಿನ್ನದ ದರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 16100 ರು.‌ ಆಸುಪಾಸಿನಲ್ಲಿ ಇದೆ.‌