ನಟ ವಿಜಯ್ ಹಾದಿಯಲ್ಲೇ ಅಣ್ಣಾಮಲೈ ! ಬಿಜೆಪಿ ಬಿಟ್ಟು ದ್ರಾವಿಡರ ನಾಡಿನಲ್ಲಿ ಹೊಸ ಪಕ್ಷ ಕಟ್ಟಲು ರೆಡಿ, ರಾಜ್ಯಸಭೆ ಆಫರನ್ನೂ ತಿರಸ್ಕರಿಸಿ ಹೊಸ ಗುರಿಯಿಟ್ಟ ಸಿಂಗಂ !

02-06-26 10:01 am       HK News Staffer   ದೇಶ - ವಿದೇಶ

ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದರಿಂದ ಪಕ್ಷಕ್ಕೆ ತಮಿಳುನಾಡಿನಲ್ಲಿ ಭವಿಷ್ಯ ಇಲ್ಲ ಎಂಬುದನ್ನು ಅರಿತ ಮಾಜಿ ಐಪಿಎಸ್ ಅಧಿಕಾರಿ, ಫೈರ್ ಬ್ರಾಂಡ್ ನಾಯಕ ಕೆ.ಅಣ್ಣಾಮಲೈ ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಒಂದೆರಡು ದಿನದಲ್ಲೇ ಹೊಸ ಪಕ್ಷಕ್ಕೆ ಜೈಕಾರ ಹೇಳಲಿದ್ದಾರೆ.

ಚೆನ್ನೈ, ಜೂನ್ 2: ಇತ್ತೀಚೆಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದರಿಂದ ಪಕ್ಷಕ್ಕೆ ತಮಿಳುನಾಡಿನಲ್ಲಿ ಭವಿಷ್ಯ ಇಲ್ಲ ಎಂಬುದನ್ನು ಅರಿತ ಮಾಜಿ ಐಪಿಎಸ್ ಅಧಿಕಾರಿ, ಫೈರ್ ಬ್ರಾಂಡ್ ನಾಯಕ ಕೆ.ಅಣ್ಣಾಮಲೈ ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಒಂದೆರಡು ದಿನದಲ್ಲೇ ಹೊಸ ಪಕ್ಷಕ್ಕೆ ಜೈಕಾರ ಹೇಳಲಿದ್ದಾರೆ. 

ಸೋಮವಾರ ದೆಹಲಿಗೆ ತೆರಳಿರುವ ಅಣ್ಣಾಮಲೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಣ್ಣಾಮಲೈ ಅವರ 'ಅವತಾರ-2.0' ಪೋಸ್ಟರ್ ಗಳು ಮಾಜಿ ಪೊಲೀಸ್ ಅಧಿಕಾರಿ ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಸುಳಿವು ನೀಡಿದೆ. "ನಮ್ಮ ನಾಯಕ, ಬನ್ನಿ ಮತ್ತು ನಮ್ಮನ್ನು ಮುನ್ನಡೆಸಿ"  ಎಂಬ ಘೋಷಣೆಗಳನ್ನು ಹೊಂದಿರುವ ಪೋಸ್ಟರ್‌ಗಳು ಚೆನ್ನೈನ ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡಿವೆ. 

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷಕ್ಕೆ ಗಟ್ಟಿ ತಳಪಾಯ ನೀಡಿ ಯುವಕರ ಐಕಾನ್ ಆಗಿದ್ದ ಅಣ್ಣಾಮಲೈ ಅವರನ್ನು ಚುನಾವಣೆ ಹೊತ್ತಿಗೆ ಸೈಲಂಟ್ ಮಾಡಿಸಲಾಗಿತ್ತು. ಎಐಎಡಿಎಂಕೆ ನಾಯಕರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡಿದ್ದರೂ, ಇದರಿಂದ ಅಣ್ಣಾಮಲೈ ರಾಜಕೀಯ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ನಟ ವಿಜಯ್ ಅವರು ಫೀನಿಕ್ಸ್ ರೀತಿಯಲ್ಲಿ ಎದ್ದು ಬಂದು ಸಿಎಂ ಸ್ಥಾನಕ್ಕೆ ಏರಿದ ಹಿನ್ನೆಲೆಯಲ್ಲಿ ಅಣ್ಣಾಮಲೈ ಎಚ್ಚತ್ತುಕೊಂಡಿದ್ದು ಬಿಜೆಪಿ ಬಿಟ್ಟು ಪ್ರತ್ಯೇಕ ಪಕ್ಷ ಕಟ್ಟುವತ್ತ ಮುಖ ಮಾಡಿದ್ದಾರೆ. 

ಮೊದಲಿಗೆ ದ್ರಾವಿಡೇತರ ರಾಜಕೀಯ ಚಳವಳಿಯ ಭಾಗವಾಗಿ ಹೊಸ ಸಂಘಟನೆ ಅಥವಾ ಪಕ್ಷ ಕಟ್ಟಿ ಜನ ಮನ್ನಣೆ ಗಳಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜೂನ್ 4 ರಂದು ತನ್ನ ಜನ್ಮದಿನದಂದೇ ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆಯಿದೆ. ದೆಹಲಿಗೆ ಹೊರಡುವ ಮುನ್ನ ಚೆನ್ನೈನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅಣ್ಣಾಮಲೈ, "ಎರಡು ದಿನ ಕಾಯಿರಿ, ಎಲ್ಲವನ್ನೂ ನಿಮ್ಮ ಮಂದೆ ಹೇಳುತ್ತೇನೆ. ಇನ್ನೆರಡು ದಿನದಲ್ಲಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಅಣ್ಣಾಮಲೈ ಅವರಿಗೆ ಬಿಜೆಪಿ ರಾಜ್ಯಸಭೆ ಸ್ಥಾನದ ಆಫರ್ ನೀಡಿದೆ ಎಂದು ಹೇಳಲಾಗಿದೆ. ಆದರೆ, ಪಕ್ಷದಿಂದ ಹೊರಗೆ ಬರಲು ನಿರ್ಧರಿಸಿರುವ 41 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ರಾಜ್ಯಸಭೆ ಟಿಕೆಟ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.