ನೀಟ್, ಸಿಬಿಎಸ್‌ಇ ಪರೀಕ್ಷೆ ಅಕ್ರಮ; ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ, ಕಾಕ್ರೋಚ್ ಪಾರ್ಟಿಯಿಂದ ಜೂನ್ 6ರಂದು ದೆಹಲಿಯಲ್ಲಿ ಧರಣಿ, ಯುವಜನರು ಸೇರಿಕೊಳ್ಳಲು ಅಭಿಜಿತ್ ದೀಪ್ಕೆ ಕರೆ

02-06-26 10:40 am       HK News Staffer   ದೇಶ - ವಿದೇಶ

ನೀಟ್, ಸಿಬಿಎಸ್ಇ ಪರೀಕ್ಷೆ ಅಕ್ರಮ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಕ್ಷ'ದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪೈ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಬೃಹತ್ ಆಂದೋಲನ ಆರಂಭಿಸಲು ನಿರ್ಧರಿಸಿದ್ದಾರೆ. ಪಕ್ಷ ಘೋಷಣೆ ಬಳಿಕ ಮೊದಲ ಬಾರಿಗೆ ಜೂನ್ 6ರಂದು ಅಮೆರಿಕದಿಂದ ಭಾರತಕ್ಕೆ ಮರಳುತ್ತಿರುವ ದೀಪ್ಕೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿದ್ದು ಬೆಂಬಲಿಸಲು ಆಗಮಿಸುವಂತೆ ಯುವಜನತೆಗೆ ಕೇಳಿಕೊಂಡಿದ್ದಾರೆ.

ನವದೆಹಲಿ, ಜೂನ್ 2: ನೀಟ್, ಸಿಬಿಎಸ್ಇ ಪರೀಕ್ಷೆ ಅಕ್ರಮ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಕ್ಷ'ದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪೈ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಬೃಹತ್ ಆಂದೋಲನ ಆರಂಭಿಸಲು ನಿರ್ಧರಿಸಿದ್ದಾರೆ. ಪಕ್ಷ ಘೋಷಣೆ ಬಳಿಕ ಮೊದಲ ಬಾರಿಗೆ ಜೂನ್ 6ರಂದು ಅಮೆರಿಕದಿಂದ ಭಾರತಕ್ಕೆ ಮರಳುತ್ತಿರುವ ದೀಪ್ಕೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಿದ್ದು ಬೆಂಬಲಿಸಲು ಆಗಮಿಸುವಂತೆ ಯುವಜನತೆಗೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ದೀಪ್ಕೆ, ''ಜೂನ್ 6ರಂದು ದೆಹಲಿಗೆ ಬರಲಿದ್ದೇನೆ. ವಿಮಾನ ನಿಲ್ದಾಣದಲ್ಲೇ ನಮ್ಮೊಂದಿಗೆ ನೀವು ಸೇರಿಕೊಳ್ಳಿ, ಮುಂದೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ಕೋರಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗೋಣ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ನಾವು ನಮ್ಮ ಹಕ್ಕುಗಳ ಅಡಿಯಲ್ಲೇ ಪ್ರತಿಭಟನೆ ನಡೆಸೋಣ. ಈಗಾಗಲೇ ನಮ್ಮ ಹೋರಾಟ ಬೆಂಬಲಿಸಿ 8 ಲಕ್ಷ ಮಂದಿ ಸಹಿ ಮಾಡಿದ್ದಾರೆ. ಪರೀಕ್ಷಾ ಅಕ್ರಮಗಳ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತುವುದು ನಮ್ಮ ಗುರಿ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಬೇಕಾಗಿದೆ. ನಮ್ಮ ಆಗ್ರಹವನ್ನು ಅವರು ಕೇಳಲೇಬೇಕು. ರಾಜಿನಾಮೆ ನೀಡಲೇಬೇಕು ಎಂದು ದೀಪ್ಕೆ ಹೇಳಿದ್ದಾರೆ.

ನೀಟ್ 22 ಲಕ್ಷ, ಸಿಬಿಎಸ್ಇ 17 ಲಕ್ಷ, ಸಿಯುಇಟಿ 16 ಲಕ್ಷ, ಎಸ್.ಎಸ್.ಸಿ 40 ಲಕ್ಷ ವಿದ್ಯಾರ್ಥಿಗಳು ಸೇರಿ ಸುಮಾರು ಒಂದು ಕೋಟಿ ಯುವ ಜನರ ಭವಿಷ್ಯವನ್ನು ಶಿಕ್ಷಣ ಸಚಿವರು ಕತ್ತಲೆಗೆ ದೂಡಿದ್ದಾರೆ. ಇಂಥ ಸಚಿವರು ಈ ದೇಶಕ್ಕೆ ಬೇಡ ಎಂದು ದೀಪ್ಕೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ, ನೀಟ್- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ, ಕ್ರಾಂತಿಕಾರಿ ಯುವ ಸಂಘಟನೆ ದಿಲ್ಲಿಯ ಶಿಕ್ಷಣ ಸಚಿವಾಲಯದ ಎದುರು ಸೋಮವಾರವೂ ಪ್ರತಿಭಟನೆ ನಡೆಸಿದವು. ವಿದ್ಯಾರ್ಥಿಗಳು ದೀಪ್ಕೆ ಜೊತೆಗೆ ಸೇರಿಕೊಳ್ಳುವ ಸಾಧ್ಯತೆ ಇದೆ. 

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶದ ಮರು ಮೌಲ್ಯಮಾಪನ ಮತ್ತು ಮರು ಎಣಿಕೆ ಶುಲ್ಕದ ವಿಚಾರದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮೌಲ್ಯಮಾಪನದಲ್ಲಿ ತಪ್ಪು ಮಾಡಿರುವುದು ಶಿಕ್ಷಣ ಮಂಡಳಿ. ಆದರೆ, ಮಕ್ಕಳಿಗೆ ಶಿಕ್ಷೆ ನೀಡುತ್ತಿದ್ದಾರೆ. ತನ್ನ ತಪ್ಪು ಮುಚ್ಚಿಟ್ಟುಕೊಂಡು ವಿದ್ಯಾರ್ಥಿಗಳನ್ನು ಸುಲಿಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ''ಮರು ಮೌಲ್ಯಮಾಪನ, ಮರು ಎಣಿಕೆ, ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿ ಪಡೆಯಲು ಪ್ರತ್ಯೇಕ ಶುಲ್ಕ ನಿಗದಿ ಮಾಡಲಾಗಿದೆ. ಎಡವಟ್ಟು ಮಾಡಿರುವ ಸಿಬಿಎಸ್ ಇ ಪ್ರತಿ ಮಕ್ಕಳಿಂದ 2 ಸಾವಿರ ರೂ. ಶುಲ್ಕ ವಸೂಲಿ ಮಾಡುತ್ತಿದೆ. 4 ಲಕ್ಷ ಮಕ್ಕಳಿಂದ ಕೋಟ್ಯಂತರ ರೂ. ಹಣ ವಸೂಲಿ ಮಾಡಲಾಗಿದೆ. ಶಿಕ್ಷಣ ಮಂಡಳಿಯಲ್ಲಿ ಜೇಬುಗಳ್ಳರಿದ್ದಾರೆ, ಎಚ್ಚರದಿಂದಿರಿ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಸಿಬಿಎಸ್ಇ 12ನೇ ತರಗತಿಯ 'ಆನ್ ಸ್ಕ್ರೀನ್ ಮಾರ್ಕಿಂಗ್' ಮೌಲ್ಯಮಾಪನದಲ್ಲಿ ಲೋಪ ಎಸಗಿದ ಹೈದರಾಬಾದ್ ಮೂಲದ 'ಕೊಎಂಪ್ಟ್ ಎಜು ಟೆಕ್' ಸಂಸ್ಥೆ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮೌಲ್ಯಮಾಪನದಲ್ಲಿ ಎಡವಟ್ಟುಗಳು ಬೆಳಕಿಗೆ ಬಂದ ಬಳಿಕ ಮುಜುಗರಕ್ಕೆ ಸಿಲುಕಿದ ಕೇಂದ್ರ ಸರಕಾರ, ಕೋಎಂಪ್ಟ್ ಎಜುಟೆಕ್ ಸಂಸ್ಥೆಗೆ ನೀಡಲಾದ ಟೆಂಡರ್ ಪ್ರಕ್ರಿಯೆ ಪರಿಶೀಲನೆಗೆ ಮುಂದಾಗಿದೆ. ಈ ಸಂಬಂಧ ಸಿಬಿಎಸ್ ಇಯಿಂದ ವರದಿ ಕೇಳಿರುವ ಶಿಕ್ಷಣ ಸಚಿವಾಲಯ, ಗುತ್ತಿಗೆ ಪಡೆಯಲು ಸಲ್ಲಿಸಿದ ದಾಖಲೆಗಳು, ಟೆಂಡರ್ ಪ್ರಕ್ರಿಯೆ ಪೂರ್ಣ ವಿವರ ಸಲ್ಲಿಸುವಂತೆ ನಿರ್ದೇಶನ ನೀಡಿದೆ.