ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ ಇರಾನ್ ತೊರೆದು ಬರುವಂತೆ ಭಾರತೀಯರಿಗೆ ಸಲಹೆ, ಇಸ್ರೇಲ್ ದಾಳಿ ಹಿನ್ನೆಲೆ ಭಾರತ ಎಚ್ಚರಿಕೆ ರವಾನೆ

08-06-26 09:11 pm       HK News Staffer   ದೇಶ - ವಿದೇಶ

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ನೆಲೆಸಿರುವ ಭಾರತ ಮೂಲದ ಪ್ರಜೆಗಳು ಆದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಅಲ್ಲದೆ, ಭಾರತೀಯರು ಅನಗತ್ಯವಾಗಿ ಇರಾನ್‌ಗೆ ಪ್ರಯಾಣಿಸದಂತೆಯೂ ಎಚ್ಚರಿಕೆ ನೀಡಿದೆ.

ನವದೆಹಲಿ, ಜೂನ್ 8: ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ನೆಲೆಸಿರುವ ಭಾರತ ಮೂಲದ ಪ್ರಜೆಗಳು ಆದಷ್ಟು ಬೇಗ ದೇಶ ತೊರೆಯುವಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಅಲ್ಲದೆ, ಭಾರತೀಯರು ಅನಗತ್ಯವಾಗಿ ಇರಾನ್‌ಗೆ ಪ್ರಯಾಣಿಸದಂತೆಯೂ ಎಚ್ಚರಿಕೆ ನೀಡಿದೆ. 

ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಹೊಸ ಪ್ರಯಾಣ ಸಲಹೆ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭದ್ರತಾ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಇತ್ತೀಚಿನ ಬೆಳವಣಿಗೆ ಗಮನದಲ್ಲಿಟ್ಟು ಭಾರತ ಕಡೆಯಿಂದ ನೀಡಿರುವ ಎಂಟನೇ ಸಲಹೆ ಇದಾಗಿದೆ. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಲ್ಲಾ ಭಾರತೀಯ ನಾಗರಿಕರು ಇರಾನ್‌ಗೆ ಯಾವುದೇ ರೀತಿ ಪ್ರಯಾಣ ಕೈಗೊಳ್ಳಬಾರದು. ಈಗಾಗಲೇ ಇರಾನ್‌ನಲ್ಲಿ ಇರುವವರು ಲಭ್ಯವಿರುವ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ದೇಶ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಸ್ರೇಲ್ ಸೋಮವಾರ ಮುಂಜಾನೆ ಇರಾನ್‌ನ ಮಧ್ಯ ಮತ್ತು ಪಶ್ಚಿಮ ಭಾಗಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಈ ಎಚ್ಚರಿಕೆ ನೀಡಲಾಗಿದೆ. ಇರಾನ್ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಈ ದಾಳಿ ನಡೆಸಿದ್ದು, ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಆತಂಕ ಹೆಚ್ಚಾಗಿದೆ. ವಿದ್ಯಾರ್ಥಿಗಳು, ಉದ್ಯಮಿಗಳು, ಯಾತ್ರಿಕರು, ಪ್ರವಾಸಿಗರು ಸೇರಿದಂತೆ ಇರಾನ್‌ನಲ್ಲಿರುವ ಎಲ್ಲಾ ಭಾರತೀಯರಿಗೆ ಕೂಡಲೇ ದೇಶ ತೊರೆದು ಬರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. 

ಮಾಹಿತಿ ಪ್ರಕಾರ, ಫೆಬ್ರವರಿ ಅಂತ್ಯದಲ್ಲಿ ಇಸ್ರೇಲ್ ಮತ್ತು ಅಮೆರಿಕ ದಾಳಿಯ ನಂತರ ಸಂಘರ್ಷ ತೀವ್ರಗೊಂಡಾಗ ಸುಮಾರು 9,000 ಭಾರತೀಯರು ಇರಾನ್‌ನಲ್ಲಿ ನೆಲೆಸಿದ್ದರು. ಇವರಲ್ಲಿ ಸುಮಾರು 1,800 ಮಂದಿ ಭಾರತಕ್ಕೆ ಮರಳಿದ್ದು, ಇನ್ನೂ 7,500ಕ್ಕೂ ಹೆಚ್ಚು ಭಾರತೀಯರು ಅಲ್ಲಿಯೇ ಉಳಿದಿದ್ದಾರೆ ಎಂದು ಅಂದಾಜಿಸಲಾಗಿದೆ.