ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸುರಂಗ ಹೆದ್ದಾರಿ ಬಳಿಯಲ್ಲೇ ಕುಸಿತ, ಇಬ್ಬರು ಕಾರ್ಮಿಕರು ಸಾವು, ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ

07-07-26 01:51 pm       HK News Staffer   ದೇಶ - ವಿದೇಶ

ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಭೀಕರ ಭೂಕುಸಿತ ಸಂಭವಿಸಿದೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಎಂಬಲ್ಲಿ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದ್ದು ಹಲವರು ಮಣ್ಣಿ‌ನಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

ವಯನಾಡ್, ಜುಲೈ 6: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮತ್ತೆ ಭೀಕರ ಭೂಕುಸಿತ ಸಂಭವಿಸಿದೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಎಂಬಲ್ಲಿ ಮೀನಾಕ್ಷಿ ಸೇತುವೆ ಬಳಿ ಭೂಕುಸಿತ ಸಂಭವಿಸಿದ್ದು ಹಲವರು ಮಣ್ಣಿ‌ನಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. 

ಕೋಝಿಕೋಡ್/ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಟ್ವಿನ್-ಟ್ಯೂಬ್ ಸುರಂಗ ರಸ್ತೆ ಯೋಜನೆ (Twin-tube tunnel road project) ಕಾಮಗಾರಿ ನಡೆಯುತ್ತಿದ್ದು ಅದೇ ಸ್ಥಳದಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಭೂಕುಸಿತ ಸಂಭವಿಸಿದೆ. ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅಲ್ಲಿಯೇ ತಂಗಿದ್ದ ಹಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆಯಿದೆ. ಕಾರ್ಮಿಕರನ್ನು ಕರೆದೊಯ್ಯಲು ಬಳಸಲಾಗುತ್ತಿದ್ದ ವಾಹನಗಳು ಸಹ ಮಣ್ಣಿನ ಅಡಿಯಲ್ಲಿ ಸಿಲುಕಿ ಸಂಪೂರ್ಣ ಜಖಂಗೊಂಡಿವೆ.

ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಧುಮುಕಿದ್ದು, ಆರಂಭದಲ್ಲಿ ಮೂವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ಸ್ಥಳೀಯ ಪೊಲೀಸ್ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ತಕ್ಷಣವೇ ಸ್ಥಳಕ್ಕೆ ನಿಯೋಜಿಸಲಾಗಿದೆ.

ಪ್ರದೇಶದಲ್ಲಿ ತೀವ್ರ ಹೈ ಅಲರ್ಟ್ ಘೋಷಿಸಲಾಗಿದೆ. ಎರಡು ದಿ‌ನಗಳಿಂದ ವಯನಾಡ್ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಜುಲೈ 11ರ ವರೆಗೆ ಮಳೆಯಾಗುವ ಸೂಚನೆ ಇದೆ. 2024ರಲ್ಲಿ ಭೀಕರ ಭೂಕುಸಿತ ಉಂಟಾಗಿದ್ದ ಚೂರಲ್ಮಲ ಪ್ರದೇಶದಿಂದ ನಾಲ್ಕು ಕಿಮೀ ದೂರದಲ್ಲಿ ಈ ಬಾರಿ ಕುಸಿತ ಉಂಟಾಗಿದೆ. ಮಲಪ್ಪುರಮ್- ವಯನಾಡ್ ನಡುವಿನ ಸುರಂಗ ಹೆದ್ದಾರಿ ಪಕ್ಕದಲ್ಲೇ ಕುಸಿತ ಉಂಟಾಗಿದ್ದು ಕಾಮಗಾರಿ ಸಲುವಾಗಿ ಟೆಂಟ್ ನಲ್ಲಿ ನೆಲೆಸಿದ್ದವರು ಮಣ್ಣಿನಡಿ ಸಿಲುಕಿದ್ದಾರೆ. 2024ರ ದುರಂತದಲ್ಲಿ ಎರಡು ಗ್ರಾಮಗಳು ನೆಲಸಮವಾಗಿದ್ದಲ್ಲದೆ, 300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.