ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವಾರ್ಷಿಕ 600 ಕೋಟಿ ನಷ್ಟದ ಅಂದಾಜು, ಲಬೋ ಲಬೋ ಎಂದ ಕೇರಳ ಸಂಸದರು, ಮರು ಪರಿಶೀಲನೆಗೆ ಸಿಎಂ ಸತೀಶನ್ ಆಗ್ರಹ

22-08-26 08:37 pm       HK News Staffer   ದೇಶ - ವಿದೇಶ

ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವಿಲೀನಗೊಳಿಸುವ ರೈಲ್ವೇ ಮಂಡಳಿಯ ನಿರ್ಧಾರವನ್ನು ಕೇರಳ ಸಿಎಂ ವಿ.ಡಿ. ಸತೀಶನ್ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ‘ಏಕಪಕ್ಷೀಯ’ವಾಗಿದ್ದು, ಕೇಂದ್ರ ಸರ್ಕಾರವು ಇದನ್ನು ತಕ್ಷಣವೇ ಮರು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತಿರುವನಂತಪುರಂ, ಆ.22: ಮಂಗಳೂರು ರೈಲ್ವೇ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವಿಲೀನಗೊಳಿಸುವ ರೈಲ್ವೇ ಮಂಡಳಿಯ ನಿರ್ಧಾರವನ್ನು ಕೇರಳ ಸಿಎಂ ವಿ.ಡಿ. ಸತೀಶನ್ ತೀವ್ರವಾಗಿ ಖಂಡಿಸಿದ್ದಾರೆ. ಈ ನಿರ್ಧಾರವು ‘ಏಕಪಕ್ಷೀಯ’ವಾಗಿದ್ದು, ಕೇಂದ್ರ ಸರ್ಕಾರವು ಇದನ್ನು ತಕ್ಷಣವೇ ಮರು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಕೇರಳ ರಾಜ್ಯ ಸರ್ಕಾರಕ್ಕೆ ಯಾವುದೇ ಮುನ್ಸೂಚನೆ ನೀಡದೆ ಅಥವಾ ಚರ್ಚೆ ನಡೆಸದೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಯಕಟ್ಟಿನ ಮಹತ್ವವುಳ್ಳ ಮಂಗಳೂರು ಜಂಕ್ಷನ್ ಮತ್ತು ಉಳ್ಳಾಲದಿಂದ ಮಂಗಳೂರು ವರೆಗಿನ ಪ್ರದೇಶವನ್ನು ಹೊರಗಿಡುವುದರಿಂದ ಪಾಲಕ್ಕಾಡ್ ವಿಭಾಗದ ವಾರ್ಷಿಕ ಆದಾಯ ಗಣನೀಯವಾಗಿ ಕುಸಿಯಲಿದೆ. ಇದರಿಂದ ಪಾಲಕ್ಕಾಡ್ ವಿಭಾಗದ ಅಭಿವೃದ್ಧಿಗೆ ದೊಡ್ಡ ಪೆಟ್ಟು ಬೀಳಲಿದ್ದು, ಈ ಕುರಿತು ಪ್ರಧಾನ ಮಂತ್ರಿ ಹಾಗೂ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ಬರೆಯಲಾಗುವುದು ಮತ್ತು ಸಂಸದರ ಜೊತೆಗೂಡಿ ಕೇಂದ್ರದ ಮೇಲೆ ಒತ್ತಡ ತರಲಾಗುವುದು ಎಂದು ಸತೀಶನ್ ತಿಳಿಸಿದ್ದಾರೆ. 

ಕಾಸರಗೋಡು ಸಂಸದ ರಾಜಮೋಹನ್ ಉನ್ನಿತಾನ್ ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿ, “ಇದು ಮಲಬಾರ್ ಪ್ರದೇಶದ ವಿರುದ್ಧ ಕೇಂದ್ರ ಸರ್ಕಾರ ಮುಂದುವರಿಸಿಕೊಂಡು ಬಂದಿರುವ ಮಲತಾಯಿ ಧೋರಣೆಗೆ ಮತ್ತೊಂದು ಉದಾಹರಣೆ. ಪಾಲಕ್ಕಾಡ್ ವಿಭಾಗದ ಜೀವನಾಡಿಯಾಗಿರುವ ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಕೈತಪ್ಪಿದರೆ, ಮುಂದಿನ ದಿನಗಳಲ್ಲಿ ಪಾಲಕ್ಕಾಡ್ ವಿಭಾಗವು ನಷ್ಟದಲ್ಲಿದೆ ಎಂಬ ನೆಪವೊಡ್ಡಿ ಅದನ್ನು ಸೇಲಂ ಅಥವಾ ತಿರುವನಂತಪುರಂ ವಿಭಾಗದೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಪಾಲಕ್ಕಾಡ್ ಸಂಸದ ವಿ.ಕೆ. ಶ್ರೀಕಂಠನ್ ಪ್ರತಿಕ್ರಿಯಿಸಿ, “ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಆದಾಯ ತಂದುಕೊಡುವ ವಿಭಾಗಗಳಲ್ಲಿ ಪಾಲಕ್ಕಾಡ್ ಒಂದಾಗಿತ್ತು. ಯಾವುದೇ ಕಾರಣ ನೀಡದೆ ‘ರಾತ್ರೋರಾತ್ರಿ’ ಈ ವಿಭಾಗವನ್ನು ವಿಭಜಿಸಲಾಗಿದೆ. ಪಾಲಕ್ಕಾಡ್‌ನಲ್ಲಿ ಇನ್ನು ಮುಂದೆ ದೀರ್ಘ ಪ್ರಯಾಣದ ರೈಲುಗಳ ನಿರ್ವಹಣೆ ಕಷ್ಟವಾಗಲಿದೆ. ಕೇಂದ್ರವು ಪಾಲಕ್ಕಾಡ್ ವಿಭಾಗವನ್ನು ದುರ್ಬಲಗೊಳಿಸಿ ಸಂಪೂರ್ಣವಾಗಿ ಇಲ್ಲದಂತೆ ಮಾಡಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದು, ಸಂಸತ್ತಿನ ಒಳಗೂ ಮತ್ತು ಹೊರಗೂ ಕಠಿಣ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ. 

ವಾರ್ಷಿಕ 600 ಕೋಟಿ ನಷ್ಟ ! 

ಅಕ್ಟೋಬರ್ 1 ರಿಂದ ಜಾರಿಗೆ ಬರಲಿರುವ ಹೊಸ ನಿರ್ಧಾರದ ಪ್ರಕಾರ ಉಳ್ಳಾಲದಿಂದ ಮಂಗಳೂರು ಜಂಕ್ಷನ್‌ ವರೆಗಿನ 18 ಕಿ.ಮೀ. ಮಾರ್ಗ ಹಾಗೂ ಮಂಗಳೂರಿನ ಪ್ರಮುಖ ಟರ್ಮಿನಲ್ ನಿಲ್ದಾಣಗಳು ಮೈಸೂರು ವಿಭಾಗಕ್ಕೆ ಸೇರಲಿವೆ. ಇದರೊಂದಿಗೆ ನವ ಮಂಗಳೂರು ಬಂದರಿನ (ಪಣಂಬೂರು) ಮೂಲಕ ಪಾಲಕ್ಕಾಡ್ ವಿಭಾಗಕ್ಕೆ ಬರುತ್ತಿದ್ದ ಸಿಂಹಪಾಲು ಆದಾಯ ಕೈತಪ್ಪಲಿದೆ. ಮಾಹಿತಿ ಪ್ರಕಾರ, ಪಾಲಕ್ಕಾಡ್ ವಿಭಾಗ ತನ್ನ ವಾರ್ಷಿಕ ಆದಾಯದ ಶೇ.75 ಕ್ಕಿಂತ ಹೆಚ್ಚು ಭಾಗವನ್ನು ಮಂಗಳೂರು ಭಾಗದ ಸರಕು ಸಾಗಣೆಯಿಂದಲೇ ಪಡೆಯುತ್ತಿತ್ತು. ಈಗ ವಾರ್ಷಿಕ ₹500 ರಿಂದ ₹600 ಕೋಟಿ ರೂಪಾಯಿಗಳ ನೇರ ಆದಾಯ ನಷ್ಟವಾಗಲಿದೆ ಎಂಬ ಅಂದಾಜಿದೆ.‌

ಆಗಸ್ಟ್ 31, 1956 ರಂದು 1,247.50 ಕಿ.ಮೀ. ರೈಲು ಹಳಿ ವ್ಯಾಪ್ತಿಯೊಂದಿಗೆ ಆರಂಭವಾಗಿದ್ದ ಪಾಲಕ್ಕಾಡ್ ವಿಭಾಗ, ತಿರುವನಂತಪುರಂ ಹಾಗೂ 2007 ರಲ್ಲಿ ಸೇಲಂ ವಿಭಾಗಗಳು ಪ್ರತ್ಯೇಕಗೊಂಡಾಗ ತನ್ನ ವ್ಯಾಪ್ತಿಯನ್ನು ಕಳೆದುಕೊಳ್ಳುತ್ತ ಬಂದಿತ್ತು. ಈಗ ಮಂಗಳೂರು ಕೂಡ ಕಳೆದು ಹೋಗಿರುವುದರಿಂದ ಪಾಲಕ್ಕಾಡ್‌ನಲ್ಲಿ ಯಾವುದೇ ಮುಖ್ಯ ಟರ್ಮಿನಲ್ ನಿಲ್ದಾಣ ಉಳಿಯುವುದಿಲ್ಲ. ಇದರಿಂದಾಗಿ ಭವಿಷ್ಯದಲ್ಲಿ ಮಲಬಾರ್ ಭಾಗಕ್ಕೆ ಹೊಸ ರೈಲುಗಳನ್ನು ಆರಂಭಿಸಲು ಅಥವಾ ನಿರ್ವಹಿಸಲು ಜಾಗವಿಲ್ಲದಂತಾಗುತ್ತದೆ ಎಂದು ಮಲಬಾರ್ ರೈಲು ಬಳಕೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಮಕೃಷ್ಣನ್ ಆರೋಪಿಸಿದ್ದಾರೆ.