ಬ್ರೇಕಿಂಗ್ ನ್ಯೂಸ್
26-06-21 05:55 pm Mangalore Correspondent ನ್ಯೂಸ್ View
ಪುತ್ತೂರು, ಜೂನ್ 26: ಸಂಸದರು ಈ ಜಿಲ್ಲೆಯ ಗ್ರಾಮ ಗ್ರಾಮಕ್ಕೂ ಸೇರಿ 16 ಸಾವಿರ ಕೋಟಿ ಅನುದಾನ ತಂದಿದ್ದಾಗಿ ಭಾಷಣ ಬಿಗಿಯುತ್ತಾರೆ. ಅನುದಾನ ಹಳ್ಳಿ ತಲುಪಿದ್ದೇ ಆಗಿದ್ದರೆ, ಬುದ್ಧಿವಂತರ ಜಿಲ್ಲೆಯಲ್ಲಿರುವ ಕುಗ್ರಾಮಗಳು ಲಕ ಲಕ ಎನ್ನಬೇಕಿತ್ತು. ಆದರೆ, ಏನು ದುರಾದೃಷ್ಟವೋ ಏನೋ, ಕಳೆದ 30 ವರ್ಷಗಳಿಂದ ಬಿಜೆಪಿ ಶಾಸಕರೇ ಅಧಿಕಾರದಲ್ಲಿರುವ ಅಷ್ಟೇ ಅಲ್ಲಾ, ಸುಳ್ಯ ಕ್ಷೇತ್ರದಲ್ಲಿ ಹುಟ್ಟಿ ಬೆಳೆದು ಸಿಎಂ ಆದಿಯಾಗಿ ಸಂಸದರು, ಶಾಸಕರು, ಸಚಿವರಾದವರೆಲ್ಲ ಅಧಿಕಾರ ಕೇಂದ್ರದಲ್ಲಿದ್ದರೂ, ಮೊಗ್ರ ಎಂಬ ಊರಿನ ಜನರ ಅಳಲಿಗೆ ಕಿವಿಕೊಡಲು ಸಾಧ್ಯವಾಗಿಲ್ಲ. ಕಡೆಗೆ, ಏನೇ ತೊಂದರೆ ಆದ್ರೂ ಜನಸೇವಕ ಪ್ರಧಾನಿ ಇದ್ದಾರೆಂಬ ಭರವಸೆಯಿಂದ ಆ ಊರಿನ ಜನ ಪ್ರಧಾನಿ ಕಚೇರಿಗೂ ತಮ್ಮ ಅಳಲು ಕಳಿಸಿಕೊಟ್ಟಿದ್ದರು. ಆದರೆ, ಹತ್ತಾರು ವರ್ಷಗಳ ಕೂಗು, ಮನವಿ ಪತ್ರಗಳ ಒಗರಾಟ, ಹೋರಾಟ ಹಳ್ಳಿಜನರ ಪಾಲಿಗೆ ರೋದನವಾಗುತ್ತಲೇ ಅಲ್ಲಿನ ಜನರು ಕೈಯಲ್ಲಿ ಸಲಾಕೆ ಹಿಡಿದಿದ್ದಾರೆ. ಒಗ್ಗಟ್ಟಿನ ಬಲ ಮತ್ತು ಛಲ ಇದ್ದರೆ, ಶರಸೇತು ಬಂಧವ ಮಾಡಿ ತೋರಿಸಿಯೇವು ಎನ್ನುತ್ತಲೇ ಮಳೆಗಾಲದ ಸಂಕಷ್ಟಕ್ಕೆ ತತ್ಕಾಲದ ಪರಿಹಾರ ಹುಡುಕಿದ್ದಾರೆ.
ಹೌದು.. ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರ ಎಂಬ ಊರಿನಲ್ಲಿ ಜನರೇ ಸೇರಿಕೊಂಡು ಹೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಕಬ್ಬಿಣದ ಸೇತುವೆ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಯ ವಸ್ತು. ಯಾಕಂದ್ರೆ, ಅಲ್ಲಿನ ಜನರು ಪ್ರತಿ ಮಳೆಗಾಲದಲ್ಲೂ ಪಡುವ ಕಷ್ಟ ಎಲ್ಲ ಮಾಧ್ಯಮಗಳಲ್ಲಿಯೂ ಬಂದಿತ್ತು. ಕಂಗಿನ ಹಾಸಿನಲ್ಲಿ ಮಾಡಿದ ಕತ್ತಿಯ ಅಲಗಿನಲ್ಲಿ ಕಸರತ್ತು ಮಾಡುತ್ತಿದ್ದ ಫೋಟೋಗಳು, ಶಾಲೆಗೆ ಹೋಗುವ ಮಕ್ಕಳನ್ನು ಹೆತ್ತವರು ಹೊಳೆ ದಾಟಿಸುತ್ತಿದ್ದ ಚಿತ್ರಣಗಳು ಅಲ್ಲಿನ ಜನರ ಬದುಕಿನ ಕಷ್ಟಕ್ಕೆ ಕನ್ನಡಿ ಹಿಡಿದಿದ್ದವು.
ಆದರೆ, ನಮ್ಮ ಆಡಳಿತಗಾರರು ಜನರ ಕಷ್ಟದ ಸ್ಥಿತಿ ಕಂಡು ಕರಗಲೇ ಇಲ್ಲ. ಅಲ್ಲಿನ ಜನರ ಬಗ್ಗೆ ಅದೆಂಥಾ ಕೋಪವೋ ಅಥವಾ ದಾರ್ಷ್ಟ್ಯವೋ ಏನೋ.. ಕೊನೆಗೆ, ಪ್ರಧಾನಿ ಕಚೇರಿಯಿಂದ ಸೂಚನೆ ಬಂದರೂ, ಈ ಜಿಲ್ಲೆಯನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ಸಂಸದ ನಳಿನ್ ಕುಮಾರ್ ಆಗಲೀ, ಅಲ್ಲಿನ ಶಾಸಕನಾಗಿರುವ, ಈಗ ಸಚಿವ ಹುದ್ದೆಗೆ ಭಡ್ತಿ ಪಡೆದಿರುವ ಎಸ್. ಅಂಗಾರ ಆಗಲೀ ತುಟಿ ಪಿಟಿಕ್ ಎನ್ನುವ ಧೈರ್ಯ ತೋರಿಲ್ಲ.
ಮೊಗ್ರ ಎನ್ನುವುದು ಪುಟ್ಟ ಹಳ್ಳಿಯೇ ಆಗಿದ್ದರೂ, ಅಲ್ಲಿನ ಜನಸಂಖ್ಯೆ 1500ಕ್ಕೂ ಹೆಚ್ಚಿದೆ. ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಎನ್ನುವ ಪಶ್ಚಿಮ ಘಟ್ಟದ ತಪ್ಪಲಿನ ಪುಟ್ಟ ಪುಟ್ಟ ಊರುಗಳಿಗೆಲ್ಲ ಮೊಗ್ರದಲ್ಲಿ ಹರಿಯುವ ಹೊಳೆ ದಾಟಿಯೇ ಸಾಗಬೇಕು. ಇತ್ತ ಗುತ್ತಿಗಾರು, ಕೊಲ್ಲಮೊಗ್ರದ ಪಟ್ಟಣ ಕೇಂದ್ರಕ್ಕೆ ಬರುವುದಿದ್ದರೂ ಮಳೆಗಾಲದಲ್ಲಿ ಹೊಳೆಯ ನೀರೇ ಅಡ್ಡಹಾದಿ. ಬೇಸಗೆಯಲ್ಲಿ ಹೊಳೆಗೆ ಇಳಿದು ಹೋಗುತ್ತಿದ್ದರೆ, ಮಳೆಗಾಲದ ಮೂರು ತಿಂಗಳಲ್ಲಿ ಜನರು ಪ್ರಾಣವನ್ನು ಒತ್ತೆಯಿಟ್ಟು ಹೊಳೆ ದಾಟಬೇಕು. ಅಲ್ಲಿನ ಜನ ಯಾರ ಕಾಲಿಗೆ ಅಡ್ಡ ಬೀಳುವುದನ್ನು ಉಳಿಸಿಕೊಂಡಿದ್ದಾರೋ ಗೊತ್ತಿಲ್ಲ. ಸ್ವಾತಂತ್ರ್ಯ ಕಾಲದಿಂದಲೂ ಜನರು ಪ್ರತಿ ಜನಪ್ರತಿನಿಧಿಯ ಬಳಿಯೂ ಕೇಳಿದ್ದು ಇದೊಂದೇ.. ಇಲ್ಲೊಂದು ಸೇತುವೆ ಮಾಡಿಕೊಡಿ ಅನ್ನುವ ಬೇಡಿಕೆಯನ್ನು ಮಾತ್ರ.
ಮೊಗ್ರದಲ್ಲಿ 95 ವರ್ಷ ಹಳೆಯದಾದ ಸರಕಾರಿ ಪ್ರಾಥಮಿಕ ಶಾಲೆ ಇದೆ. ಆರೋಗ್ಯ ಕೇಂದ್ರ, ಅಂಗನವಾಡಿ, ಕನ್ನಡ ದೇವತೆ ಪುರುಷ ದೈವಸ್ಥಾನ, ಭಜನಾ ಮಂದಿರ ಹೀಗೆ ಒಂದು ಊರಿನ ಜೀವಂತಿಕೆಗೆ ಏನೆಲ್ಲ ಅಗತ್ಯವಿದೆಯೋ ಅವೆಲ್ಲವೂ ಅಲ್ಲಿದೆ. ಆದರೆ, ನಡುವೆ ಹರಿಯುವ ಹೊಳೆಯನ್ನು ದಾಟಿ ಹೋಗುವುದು ಮಾತ್ರ ಮಳೆಗಾಲದಲ್ಲಿ ಹರಸಾಹಸದ ಕೆಲಸ ಆಗಿತ್ತು. ಕಳೆದ 20 ವರ್ಷಗಳಿಂದ ಮೊಗ್ರದ ಜನರ ಹೋರಾಟದ ದನಿ ವರ್ಷದ ಎಲ್ಲ ಕಾಲದಲ್ಲಿಯೂ ಕೇಳಿಬರುತ್ತಲೇ ಇತ್ತು. ಚುನಾವಣೆ ಬಂದಾಗ ಬಹಿಷ್ಕಾರದ ಎಚ್ಚರಿಕೆಯೂ ಬಂದಿತ್ತು. ಆದರೆ, ಜನರ ಒಕ್ಕೊರಲ ಬೇಡಿಕೆಯನ್ನು ನರಸತ್ತ ಅಧಿಕಾರಿಗಳು, ಜನಪ್ರತಿನಿಧಿಗಳು ನಿರಾಕರಿಸುತ್ತಲೇ ಬಂದಿದ್ದಾರೆ.
ನೂರಾರು ಕುಟುಂಬಗಳು, ಸಾವಿರಾರು ಜನರು ಮನಸ್ಸು ಮಾಡಿದರೆ ಒಂದು ಸಣ್ಣ ಸೇತುವೆಯನ್ನು ನಿರ್ಮಿಸಿಕೊಳ್ಳುವುದು ಕಷ್ಟವಲ್ಲ. ಆದರೆ, ಎಲ್ಲದಕ್ಕೂ ತೆರಿಗೆ ಪೀಕಿಸಿಕೊಳ್ಳುವ ಸರಕಾರ, ಆಯಾ ಊರಿನ ಜನತೆಗೆ ಮೂಲಸೌಕರ್ಯ ಒದಗಿಸುವಂಥ ದರ್ದನ್ನೂ ಹೊಂದಿರುತ್ತದೆ. ತೆರಿಗೆ ವಸೂಲಿ ಮಾಡುವುದಕ್ಕೆ ಸರಕಾರ ಕೊಡುವ ಭಕ್ಷೀಸು ಅದಷ್ಟೇ. ಆದರೆ, ಹತ್ತಾರು ವರ್ಷಗಳ ಸಿಟ್ಟು, ಸೆಡವು ಕಡೆಗೆ ಕಟ್ಟೆಯೊಡೆದು ಬಂತು. ಊರ ಜನರೆಲ್ಲಾ ಸೇರಿ ಚಂದಾ ಎತ್ತಿಯಾದರೂ ಸರಿ, ಈ ಬಾರಿ ಮಳೆಗಾಲಕ್ಕೆ ಏನಾದ್ರೂ ಮಾಡಲೇಬೇಕೆಂಬ ತೊಟ್ಟ ಹಠಕ್ಕೆ ಪ್ರತಿಯಾಗಿ ಅಲ್ಲೀಗ ಕಬ್ಬಿಣದ ತೂಗುಸೇತುವೆ ರೆಡಿಯಾಗಿ ನಿಂತಿದೆ.
ಮಹೇಶ್ ಪುಚ್ಚಪ್ಪಾಡಿ ಎನ್ನುವ ಗ್ರಾಮದ ನಾಯಕನ ಕರೆಗೆ ಓಗೊಟ್ಟ ಊರಿನ ಯುವಕರು ತೂಗುಸೇತುವೆಯ ಸರದಾರ ಗಿರೀಶ್ ಭಾರದ್ವಾಜರ ಆಶೀರ್ವಾದ ಪಡೆದು ಕೆಲಸಕ್ಕೆ ಇಳಿದೇಬಿಟ್ಟಿದ್ದರು. ಗಿರೀಶ್ ಭಾರದ್ವಾಜರ ಪುತ್ರ ಪತಂಜಲಿ ಭಾರದ್ವಾಜರ ಸಲಹೆಯಂತೆ ಕೇವಲ ಇಪ್ಪತ್ತೇ ದಿನಗಳಲ್ಲಿ ಇಪ್ಪತ್ತು ಮೀಟರ್ ಉದ್ದದ ಕಬ್ಬಿಣದ ಸೇತುವೆ ಶರಸೇತುವಿನ ರೂಪದಲ್ಲಿ ಎದ್ದು ನಿಂತಿದೆ. ಊರ ಜನರೇ ಚಂದಾ ಎತ್ತಿ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದಾರೆ. ನೋಡುವುದಕ್ಕೆ ಒಂದು ಮೀಟರ್ ಅಗಲದ ಕಾಲುಹಾದಿಯೇ ಆಗಿದ್ದರೂ, ಅಗತ್ಯಕ್ಕೆ ದ್ವಿಚಕ್ರ ವಾಹನಗಳು ಅತ್ತಿತ್ತ ಹೋಗುವಷ್ಟು ಸಾಮರ್ಥ್ಯವನ್ನೂ ಹೊಂದಿದೆ.
ಸ್ವತಃ ದುಡಿದ ಹಣಕ್ಕೆ ಬೆಲೆ ಜಾಸ್ತಿ. ಹಾಗೆಯೇ ಅಲ್ಲಿನ ಜನ ತಾವೇ ಹಣ ಹೊಂದಿಸಿ, ಕಟ್ಟಿದ ಸೇತುವೆಯಾದ್ದರಿಂದ ಅದರ ಮೌಲ್ಯವೂ ಹೆಚ್ಚಿನದು. ಹೀಗಾಗಿ, ಈ ಬಾರಿ ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ಹೊಳೆ ದಾಟಿಸುವ ಪ್ರಮೇಯ ಇರಲ್ಲ. ಶಾಲೆಗೆ ರಜೆ ಹಾಕಿಸಿ ಮನೆಯಲ್ಲಿ ಕೂರಿಸುವ ಚಿಂತೆಯೂ ಹೆತ್ತವರಿಗೆ ಇರುವುದಿಲ್ಲ. ರಾಜಕಾರಣಿಗಳ ಟೇಪ್ ಕಟ್ಟಿಂಗ್, ಉದ್ಘಾಟನೆ, ಭಾಷಣ, ಪತ್ರಿಕೆಯಲ್ಲಿ ಫೋಟೋ ಕ್ರೆಡಿಟ್ಟಿನ ಚಿಂತೆಯೇ ಇಲ್ಲದೆ ಊರ ಸೇತುವೆ ಜನರ ಬಳಕೆಗೆ ಮುಕ್ತವಾಗಿದೆ. ಚುನಾವಣೆ ಬಂದಾಗ ನಮ್ಮ ಜನ, ನಮ್ಮದೇ ಹಣ ಎಂದು ರಾಜಕಾರಣಿಗಳ ಮುಂದೆ ಅಲ್ಲಿನ ಜನ ಜಂಭ ಕೊಚ್ಚಿಕೊಳ್ಳುವುದಕ್ಕೆ ಯಾವ ಅಡ್ಡಿಯೂ ಇಲ್ಲ.
With petitions and a documentary addressed to the Prime Minister yielding no result in more than seven decades, hundreds of Kamila-Mogra villagers pooled in money and built a 50-foot-long bridge across a rivulet on their own.
18-04-24 07:28 pm
HK News Desk
Bagalkot Accident at Maharashtra, 4 killed: ಮ...
18-04-24 07:18 pm
ಪತಿ ಮೇಲಿನ ಕೋಪದಲ್ಲಿ ಅವಳಿ ಮಕ್ಕಳಿಗೆ ವಿಷವಿಕ್ಕಿದ ತ...
18-04-24 06:42 pm
Shantappa Kurubara UPSC exam, Story: ಪಿಯುಸಿ ಫ...
18-04-24 05:00 pm
PM Modi, Amit Shah, Yogi Adityanath: ಎ.20ರಿಂದ...
18-04-24 01:42 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
18-04-24 11:05 pm
Udupi Correspondent
Congress BJP, Mangalore News: ದಕ್ಷಿಣ ಕನ್ನಡ ಕ್...
18-04-24 11:00 pm
Brijesh Chowta Mangalore, BJP: 500 ವರ್ಷಗಳ ಬಳಿ...
18-04-24 10:35 pm
NMPT, Mangalore Port, Cruise: ಐಷಾರಾಮಿ ಹಡಗಿನಲ್...
18-04-24 08:33 pm
Congress BJP campaign, Sai mandir Chilimbi fi...
18-04-24 05:57 pm
18-04-24 10:03 pm
Bangalore Correspondent
Bantwal Stabbing, Mangalore crime: ಬಂಟ್ವಾಳ ;...
15-04-24 04:14 pm
Salman Khan gun shot; ಬಾಲಿವುಡ್ ನಟ ಸಲ್ಮಾನ್ ಖಾನ...
14-04-24 03:47 pm
Bangalore Crime, Wife Murder by Husband; ಬೆಂಗ...
14-04-24 02:53 pm
Bangalore Crime, Murder, suicide: ಇಬ್ಬರು ಮಕ್...
13-04-24 11:13 pm