'ತೋತಾಪುರಿ ನನ್ನ ವೃತ್ತಿ ಬದುಕಿಗೆ ಬಹಳ ದೊಡ್ಡ ತಿರುವು ನೀಡಲಿದೆ ಎಂಬ ನಂಬಿಕೆ ಇದೆ'- ನಟಿ ಅದಿತಿ ಪ್ರಭುದೇವ

29-09-22 02:14 pm       Source: Vijayakarnataka   ಸಿನಿಮಾ

'ನವರಸ ನಾಯಕ' ಜಗ್ಗೇಶ್‌ ನಾಯಕರಾಗಿರುವ 'ತೋತಾಪುರಿ' ಸಿನಿಮಾದ ಮೊದಲ ಭಾಗ ಇದೇ ಶುಕ್ರವಾರ (ಸೆ.30) ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸಿರುವ ಅದಿ.

'ನೀರ್‌ದೋಸೆ' ಖ್ಯಾತಿಯ ವಿಜಯಪ್ರಸಾದ್‌ ಮತ್ತು ಜಗ್ಗೇಶ್‌ ಕಾಂಬಿನೇಶನ್‌ನ ಎರಡನೇ ಸಿನಿಮಾ 'ತೋತಾಪುರಿ' ಹಲವು ವಿಚಾರಗಳಿಂದಾಗಿ ಗಮನ ಸೆಳೆಯುತ್ತಿದೆ. ಇದೇ ಶುಕ್ರವಾರ (ಸೆ.30) ತೆರೆಗೆ ಬರಲಿರುವ ಈ ಚಿತ್ರದಲ್ಲಿ ಭಾವೈಕ್ಯತೆಯ ಕಥೆಯೊಂದನ್ನು ಚಿತ್ರದಲ್ಲಿ ಹೇಳಲಾಗಿದೆಯಂತೆ. ಈ ಸಿನಿಮಾದಲ್ಲಿ ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

'ತೋತಾಪುರಿ ಸಿನಿಮಾ ನನಗೆ 'ಬಜಾರ್‌' ಚಿತ್ರದ ನಂತರ ಸಿಕ್ಕ ಅವಕಾಶ. ಕಥೆಯನ್ನು ಕೇಳದೇ ಒಪ್ಪಿಕೊಂಡಂತಹ ಸಿನಿಮಾವಿದು. ನೇರವಾಗಿ ಲೊಕೇಶನ್‌ಗೆ ಹೋಗಿ ಲುಕ್‌ ಟೆಸ್ಟ್‌ ಮಾಡಿಸಿಕೊಂಡಿದ್ದೆ. ವಿಜಯ್‌ ಪ್ರಸಾದ್‌ ಅವರು ನನಗೆ ಒಂದಷ್ಟು ರಿಯಾಕ್ಷನ್‌ ಕೊಡಲು ಹೇಳಿದ್ದರು. ಅದನ್ನು ಕೊಟ್ಟೆ. ಆಗ ನೀವೇ ಈ ಸಿನಿಮಾದ ನಾಯಕಿ ಎಂದರು. ಬಹಳ ಸ್ವಾಭಿಮಾನಿ ಯುವತಿಯ ಪಾತ್ರವದು. ಮುಸ್ಲಿಂ ಯುವತಿಯಾದರೂ ಕನ್ನಡವನ್ನು ಬಹಳ ಸ್ಪಷ್ಟವಾಗಿ ಮಾತನಾಡುವಂತಹ ಪಾತ್ರವಿದು. ‘ತೋತಾಪುರಿ’ ಮನುಷ್ಯತ್ವದ ತಳಹದಿಯ ಮೇಲೆ ನಿರ್ಮಾಣವಾಗಿರುವ ಸಿನಿಮಾ. ಇಲ್ಲಿ ನಮ್ಮ ವೇಷಗಳು ಮಾತ್ರ ಧರ್ಮಗಳನ್ನು ಪ್ರತಿನಿಧಿಸುತ್ತವೆ. ಮನಸ್ಸುಗಳು ಮನುಷ್ಯತ್ವವನ್ನೇ ಹೇಳುತ್ತವೆ. ‘ತೋತಾಪುರಿ’ ಸಿನಿಮಾ ನನ್ನ ವೃತ್ತಿ ಬದುಕಿಗೆ ಬಹಳ ದೊಡ್ಡ ತಿರುವನ್ನು ನೀಡುತ್ತದೆ ಎಂಬ ನಂಬಿಕೆ ನನಗಿದೆ. ಜತೆಗೆ ಸಿನಿಮಾ ರಂಗದಲ್ಲಿಯೂ ಈ ಸಿನಿಮಾ ಹೊಸ ರೀತಿಯ ಕಥೆಗಳಿಗೆ ದಾರಿ ಮಾಡಿಕೊಡುತ್ತದೆ' ಎಂದು ಹೇಳಿದರು ಅದಿತಿ ಪ್ರಭುದೇವ.

ಕೌಟುಂಬಿಕ ಮೌಲ್ಯಗಳನ್ನು ಎತ್ತಿ ತೋರಿಸುವ ಸಿನಿಮಾ

'ವಿಜಯ್‌ ಪ್ರಸಾದ್‌ ಅವರ ಸಿನಿಮಾ ಎಂದಾಕ್ಷಣ ಡಬಲ್‌ ಮೀನಿಂಗ್‌ ಡೈಲಾಗ್‌ಗಳಿರುತ್ತವೆ ಎನ್ನುತ್ತಾರೆ. ನನಗೆ ಅಂತಹ ಅನುಭವ ಜಾಸ್ತಿಯಾಗಿಲ್ಲ. ಜತೆಗೆ ಇಲ್ಲಿ ಹೆಚ್ಚಾಗಿ ಡಬಲ್‌ ಮೀನಿಂಗ್‌ ಇಲ್ಲ. ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೌಟುಂಬಿಕ ಮೌಲ್ಯಗಳನ್ನು ಎತ್ತಿ ತೋರಿಸುವಂತಹ ಸಿನಿಮಾವಿದು. ನನಗೂ ಇಲ್ಲೊಂದು ಕೂಡು ಕುಟುಂಬವಿದೆ. ಇಡೀ ಸಿನಿಮಾ ಹಲವು ಕಲಾವಿದರಿಂದಲೇ ತುಂಬಿರುತ್ತದೆ. ಚಿತ್ರೀಕರಣದ ಅನುಭವವೂ ಸೂಪರ್‌ ಆಗಿತ್ತು. ವಿಜಯ್‌ ಪ್ರಸಾದ್‌ ಅವರು ಇಲ್ಲಿ ನಟನೆ ಮಾಡಿಸುವ ಬದಲಿಗೆ ನೈಜವಾಗಿ ಏನೇನು ಸಿಗುತ್ತದೋ ಅದನ್ನು ಸೆರೆ ಹಿಡಿದಿದ್ದಾರೆ. ಹಾಗಾಗಿ ಸಿನಿಮಾ ಜನರಿಗೆ ಹೊಸ ರೀತಿಯಲ್ಲಿ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ ಅದಿತಿ ಪ್ರಭುದೇವ.

ಮನರಂಜನೆಗೆ ಈ ಸಿನಿಮಾದಲ್ಲಿ ಯಾವುದೇ ಮೋಸವಿಲ್ಲ

'ತೋತಾಪುರಿ ಸಿನಿಮಾದಲ್ಲಿ ಹಲವು ಧರ್ಮಗಳ ಪ್ರಸ್ತಾಪವಿದೆ. ಆದರೆ ಇಲ್ಲಿ ಧರ್ಮಕ್ಕಿಂತಲೂ ಮನುಷ್ಯನ ಮನಸ್ಸು ಮುಖ್ಯ ಎಂದು ಹೇಳಲಾಗಿದೆ. ವಿಜಯ್‌ ಪ್ರಸಾದ್‌ ಅವರ ಫಿಲಾಸಫಿ ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತದೆ. ನನ್ನ ಪಾತ್ರ, ಜಗ್ಗೇಶ್‌ ಅವರ ಪಾತ್ರ, ಧನಂಜಯ ಅವರ ಪಾತ್ರ, ಸುಮನ್‌ ರಂಗನಾಥ್‌ ಅವರ ಪಾತ್ರ ಎಲ್ಲವೂ ಪ್ರೇಕ್ಷಕನಿಗೆ ಹೊಸ ರೀತಿಯ ಅನುಭವವನ್ನು ನೀಡುತ್ತವೆ. ಜತೆಗೆ ಮನರಂಜನೆಗೆ ಸಿನಿಮಾದಲ್ಲಿ ಯಾವುದೇ ಮೋಸವಿಲ್ಲ' ಎನ್ನುವುದು ಅದಿತಿ ಮಾತು.

ರೈಲಿನಲ್ಲಿ'ತೋತಾಪುರಿ' ಕಮಾಲ್‌

'ತೋತಾಪುರಿ' ಸಿನಿಮಾ ತಂಡ ಆರಂಭದಿಂದಲೂ ಪ್ರಚಾರ ಕಾರ್ಯವನ್ನು ವಿಭಿನ್ನವಾಗಿ ಮಾಡುತ್ತಿದೆ. ಬಸ್ಸು, ಆಟೋ, ಮೆಟ್ರೋ ಹಾಗೂ ಮಾಲ್‌ ಹೀಗೆ ಎಲ್ಲಾ ಕಡೆಯೂ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚಾರ ಮಾಡಲಾಗಿತ್ತು. ಈಗ ರೈಲಿನ ಮೇಲೆ ಪೋಸ್ಟರ್‌ಗಳನ್ನು ಅಂಟಿಸುವುದು ಮಾತ್ರವಲ್ಲದೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿ ರೈಲಿನಲ್ಲೊಂದು ಸುದ್ದಿಗೋಷ್ಠಿಯನ್ನು ನಡೆಸಿದೆ.

ಮೈಸೂರಿಗೆ ಪಯಣ

'ತೋತಾಪುರಿ' ತಂಡ ಪ್ರಯಾಣ ಮಾಡಿದ ರೈಲಿನ ಭೋಗಿಗಳಿಗೆಲ್ಲಾ ಸಿನಿಮಾದ ತರಹೇವಾರಿ ಪೋಸ್ಟರ್‌ ವಿನ್ಯಾಸ ಮಾಡಿಸಿ ರಂಗುಗೊಳಿಸುವುದರ ಜತೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಮಾಧ್ಯಮ ಮಿತ್ರರೊಂದಿಗೆ ಸಂದರ್ಶನ ಹಾಗೂ ಮಾತುಕತೆ ಮೂಲಕ ಪ್ರಯಾಣ ಮಾಡಿದ್ದು ಚಂದನವನದಲ್ಲಿ ಇದೇ ಮೊದಲು. ಹಾಗೆಯೇ ದಸರಾ ಸೊಬಗು ಮೈತುಂಬಿಕೊಂಡಿರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಮಾಡಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದೆ ಚಿತ್ರತಂಡ. ವಿಶೇಷವಾಗಿ ಅಲಂಕರಿಸಿದ್ದ ‘ತೋತಾಪುರಿ’ ಬಸ್‌ ಮೂಲಕ ಚಿತ್ರತಂಡ ಹಾಗೂ ಮಾಧ್ಯಮದವರು ಪಯಣಿಸಿದ್ದು ಎಲ್ಲರಿಗೂ ಹೊಸ ಅನುಭವ. ಈ ಸಿನಿಮಾದಲ್ಲಿ ದತ್ತಣ್ಣ, ವೀಣಾ ಸುಂದರ್‌, ಹೇಮಾದತ್‌, ರೋಹಿತ್‌ ಪದಕಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

Actress Aditi Prabhudeva Talks About Jaggesh Starrer Totapuri.