ಸುಶಾಂತ್ ಸಾವು: ಸಿಬಿಐ ವರದಿ ಬಗ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

04-02-21 02:27 pm       Source: FILMIBEAT   ಸಿನಿಮಾ

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಕುರಿತು ವರದಿ ನೀಡುವಂತೆ ಸಿಬಿಐಗೆ ನಿರ್ದೇಶನ ಮಾಡಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಕುರಿತು ವರದಿ ನೀಡುವಂತೆ ಸಿಬಿಐಗೆ ನಿರ್ದೇಶನ ಮಾಡಬೇಕು ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ವಕೀಲ ಪುನೀತ್ ಕೌರ್ ಥಂಡಾ ಎಂಬುವವರು ಸುಪ್ರೀಂಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ''ಸುಶಾಂತ್ ಸಾವಿನ ಪ್ರಕರಣದ ತನಿಖೆ ಆರಂಭಿಸಿ ಸುಮಾರು ಐದು ತಿಂಗಳು ಕಳೆದುಹೋಗಿದೆ. ಈ ಪ್ರಕರಣದಲ್ಲಿ ಸಿಬಿಐ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಲು ಮತ್ತು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಸಲ್ಲಿಸುವಂತೆ'' ಮನವಿ ಮಾಡಿಕೊಂಡಿದ್ದರು.

ಬುಧವಾರ ಈ ಅರ್ಜಿ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಇಂತಹ ಅರ್ಜಿಗಳನ್ನು ನಾವು ಪ್ರೋತ್ಸಾಹಿಸುವುದಿಲ್ಲ, ನೀವು ಬೇಕಾದರೆ ಹೈಕೋರ್ಟ್‌ಗೆ ಹೋಗಿ ಎಂದು ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿದಸ್ಯ ಪೀಠ, "ನಾವು ಈ ಅರ್ಜಿಯನ್ನು ಪ್ರೋತ್ಸಾಹಿಸಲು ಹೋಗುವುದಿಲ್ಲ, ನೀವು ಹೈಕೋರ್ಟ್‌ಗೆ ಹೋಗಿ" ಎಂದು ಮನವಿಯನ್ನು ವಜಾಗೊಳಿಸಿದೆ. ಅಂದ್ಹಾಗೆ, ಆಗಸ್ಟ್ 2020 ರಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ವಿಚಾರಣೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಅದಕ್ಕೂ ಮೊದಲು ಈ ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸಿದರು.

ಒಂದು ಹಂತದಲ್ಲಿ ಸಿಬಿಐ ಸಂಸ್ಥೆ ಈ ಪ್ರಕರಣದಲ್ಲಿ ತನಿಖೆ ಪೂರ್ಣಗೊಳಿಸಿದೆ. ಸದ್ಯದಲ್ಲೇ ನ್ಯಾಯಾಲಯಕ್ಕೆ ಈ ವರದಿ ಸಲ್ಲಿಸಿದೆ ಎಂದು ಹೇಳಲಾಯಿತು. ಆದರೆ, ಇದುವರೆಗೂ ಸಿಬಿಐ ಈ ಕುರಿತು ಸ್ಪಷ್ಟನೆ ನೀಡಿಲ್ಲ. ಜುಲೈ 14, 2020ರಂದು ನಟ ಸುಶಾಂತ್ ಮುಂಬೈನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

This News Article is a Copy of FILMIBEAT