ಜೈಲಿನಲ್ಲಿ ಹಿಂಸೆ, ಸಹ ಕೈದಿಗಳಿಂದ ಬೆದರಿಕೆ ; ಸುದೀರ್ಘ ಜೈಲುವಾಸದಿಂದ ವೃತ್ತಿಜೀವನಕ್ಕೆ ಮರಣಗಂಟೆ, ಸುಪ್ರೀಂ ಕೋರ್ಟಿನಲ್ಲಿ ನಟ ದರ್ಶನ್ ಜಾಮೀನು ಅರ್ಜಿ

03-05-26 09:15 pm       HK News Staffer   ಸಿನಿಮಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು ಜೈಲಿನ ಒಳಗಿನ ಸ್ಥಿತಿಗತಿ ಮತ್ತು ತಮ್ಮ ವೃತ್ತಿಜೀವನಕ್ಕೆ ಎದುರಾಗಿರುವ ಸಂಕಷ್ಟಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರು, ಮೇ 3: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು ಜೈಲಿನ ಒಳಗಿನ ಸ್ಥಿತಿಗತಿ ಮತ್ತು ತಮ್ಮ ವೃತ್ತಿಜೀವನಕ್ಕೆ ಎದುರಾಗಿರುವ ಸಂಕಷ್ಟಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಜೈಲಿನಲ್ಲಿ ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದರ್ಶನ್ ದೂರಿದ್ದಾರೆ. ಮೇ 4ರಂದು ಅರ್ಜಿ ವಿಚಾರಣೆ ನಡೆಯಲಿದ್ದು ಎಲ್ಲಾ ಅಂಶಗಳನ್ನು ಪರಿಗಣಿಸಿ ಸುಪ್ರೀಂ ಯಾವ ಆದೇಶ ನೀಡಲಿದೆ ಎನ್ನುವ ಕುತೂಹಲ ಇದೆ. ಜೈಲಿನ ನಿಯಮಗಳನ್ನು ಮೀರಿ ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಹಿಂಸೆಯಾಗುತ್ತಿದೆ. ಸಹ ಕೈದಿಗಳಿಂದ ನಿರಂತರ ಬೆದರಿಕೆ, ನಿಂದನೆ ಮತ್ತು ಮೂದಲಿಕೆಯನ್ನು ಅನುಭವಿಸುತ್ತಿದ್ದೇನೆ. ಮಾಧ್ಯಮಗಳಲ್ಲಿ ನನ್ನ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರದಿಂದ ಜೈಲಿನ ಒಳಗಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎಂದು ನೋವು ತೋಡಿಕೊಂಡಿದ್ದಾರೆ. 

ಇತರ ಕೈದಿಗಳಿಗೆ ಹೋಲಿಸಿದರೆ ತಾರತಮ್ಯ ಎಸಗುತ್ತಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ತನ್ನ ವೃತ್ತಿಜೀವನದ ಮೇಲೆ ಈ ಜೈಲುವಾಸ ಬೀರುತ್ತಿರುವ ಪರಿಣಾಮದ ಬಗ್ಗೆ ವಿವರಿಸಿರುವ ದರ್ಶನ್, “ಪ್ರತಿ ವರ್ಷ ನಾನು 2 ರಿಂದ 3 ಸಿನಿಮಾಗಳನ್ನು ಮಾಡುತ್ತಿದ್ದೆ. ಜಾಮೀನು ರದ್ದಾಗುವ ವೇಳೆಯೂ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮೀಡಿಯಾ ಹೌಸ್ ಸ್ಟೂಡಿಯೋಸ್‌ನಂತಹ ದೊಡ್ಡ ಸಂಸ್ಥೆಗಳ ಚಿತ್ರಗಳಿಗೆ ಸಹಿ ಮಾಡಿದ್ದೆ. ನಿರ್ಮಾಪಕರು ಈಗಾಗಲೇ ಸುಮಾರು 6 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಸುದೀರ್ಘ ಜೈಲು ವಾಸದಿಂದ ನನ್ನ ಜೀವನಕ್ಕೆ ತೊಂದರೆಯಾಗಿದ್ದು, ಇದು ನನ್ನ ವೃತ್ತಿಜೀವನಕ್ಕೆ ಮರಣಗಂಟೆಯಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ತನಿಖೆ ಮತ್ತು ಸಾಕ್ಷ್ಯ ವಿಚಾರಣೆಯ ವಿಳಂಬದ ಬಗ್ಗೆಯೂ ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ 262 ಸಾಕ್ಷಿಗಳ ವಿಚಾರಣೆ ನಡೆಸಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಕಳೆದ 8 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಸದ್ಯಕ್ಕೆ ಈ ಪ್ರಕ್ರಿಯೆ ಮುಗಿಯುವ ಲಕ್ಷಣಗಳಿಲ್ಲ. ಇಷ್ಟು ದೀರ್ಘ ಕಾಲ ವಿಚಾರಣಾಧೀನ ಕೈದಿಯಾಗಿ ಇರಿಸುವುದು ಮೂಲಭೂತ ಹಕ್ಕಿನ ಹರಣವಾಗುತ್ತದೆ ಎಂದು ವಾದಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ.