ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್ ? ಬೆಳಗ್ಗೆ ಎದ್ದ ತಕ್ಷಣ ಮಾಡುವ ತಪ್ಪು ಶೇ.80ರಷ್ಟು ಹೃದಯಾಘಾತಕ್ಕೆ ಕಾರಣ? ತಜ್ಞರು ಹೇಳೋದೇನು?

14-05-26 07:28 pm       HK News Staffer   ಸಿನಿಮಾ

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಪ್ರತಿಭಾವಂತ ನಟ-ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಅಭಿಮಾನಿಗಳು ಮತ್ತು ಕಲಾವಿದರನ್ನು ಆಘಾತಕ್ಕೆ ದೂಡಿದೆ. ಫಿಟ್ನೆಸ್‌ಗೆ ಅತ್ಯಂತ ಮಹತ್ವ ನೀಡುತ್ತಿದ್ದ, ಯಾವುದೇ ಕೆಟ್ಟ ಅಭ್ಯಾಸಗಳಿಲ್ಲದ ದಿಲೀಪ್ ರಾಜ್ ಅವರು ಕೇವಲ 47ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಮನ್ನಷ್ಟು ನೋವುಂಟು ಮಾಡಿದೆ.

ಬೆಂಗಳೂರು, ಮೇ 14: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಪ್ರತಿಭಾವಂತ ನಟ-ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಅಭಿಮಾನಿಗಳು ಮತ್ತು ಕಲಾವಿದರನ್ನು ಆಘಾತಕ್ಕೆ ದೂಡಿದೆ. ಫಿಟ್ನೆಸ್‌ಗೆ ಅತ್ಯಂತ ಮಹತ್ವ ನೀಡುತ್ತಿದ್ದ, ಯಾವುದೇ ಕೆಟ್ಟ ಅಭ್ಯಾಸಗಳಿಲ್ಲದ ದಿಲೀಪ್ ರಾಜ್ ಅವರು ಕೇವಲ 47ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಮನ್ನಷ್ಟು ನೋವುಂಟು ಮಾಡಿದೆ.

ಮೇ 12ರ ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಈ ವೇಳೆ ತಮ್ಮ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಅವರು ಸ್ಮಾರ್ಟ್‌ವಾಚ್ ಬಳಸಿದ್ದರು. ಹೃದಯಬಡಿತ ಸಹಜವಾಗಿದೆ ಎಂದು ವಾಚ್‌ನಲ್ಲಿ ತೋರಿಸಿದ್ದರಿಂದ ಗಂಭೀರ ಸಮಸ್ಯೆಯಿಲ್ಲ ಎಂದು ಭಾವಿಸಿ ಅವರು ವೈದ್ಯರನ್ನು ತಕ್ಷಣ ಸಂಪರ್ಕಿಸಿರಲಿಲ್ಲ. ಮೇ 13ರ ಬೆಳಗ್ಗೆ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ತೆಗೆದುಕೊಂಡಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

ದಿಲೀಪ್ ರಾಜ್ ಅವರು ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದರು. ನಿಯಮಿತ ವ್ಯಾಯಾಮ, ಫಿಟ್ನೆಸ್‌ ರೂಟೀನ್ ಮತ್ತು ಶಿಸ್ತಿನ ಜೀವನಶೈಲಿಗೆ ಅವರು ಹೆಸರಾಗಿದ್ದರು. ಆದರೂ, ಎದೆನೋವಿನಂತಹ ಗಂಭೀರ ಲಕ್ಷಣವನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಮಾರ್ಟ್‌ವಾಚ್ ತೋರಿಸಿದ ಮಾಹಿತಿಯನ್ನು ಸಂಪೂರ್ಣವಾಗಿ ನಂಬಿ ವೈದ್ಯಕೀಯ ಪರೀಕ್ಷೆಯನ್ನು ಮುಂದೂಡಿದದ್ದು ಅವರ ಜೀವಕ್ಕೆ ಮಾರಕವಾಯಿತೆಂಬ ಚರ್ಚೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಅನೇಕರು ಆರೋಗ್ಯದ ಮೇಲ್ವಿಚಾರಣೆಗೆ ಸ್ಮಾರ್ಟ್‌ವಾಚ್‌ಗಳನ್ನು ಅವಲಂಬಿಸುತ್ತಿದ್ದಾರೆ. ಹೃದಯಬಡಿತ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ನಿದ್ರೆಯ ಗುಣಮಟ್ಟ, ದೇಹದ ಉಷ್ಣಾಂಶ ಸೇರಿದಂತೆ ಹಲವು ಮಾಹಿತಿಗಳನ್ನು ಈ ಸಾಧನಗಳು ನೀಡುತ್ತವೆ. ಆದರೆ ತಜ್ಞರ ಪ್ರಕಾರ, ಇವು ಪ್ರಾಥಮಿಕ ಮಾಹಿತಿ ನೀಡುವ ಉಪಕರಣಗಳಷ್ಟೇ ಹೊರತು ವೈದ್ಯಕೀಯ ಪರೀಕ್ಷೆಗೆ ಪರ್ಯಾಯವಲ್ಲ. ಕೆಲವು ವೇಳೆ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಈ ಸಾಧನಗಳು ಗುರುತಿಸಲು ವಿಫಲವಾಗುವ ಸಾಧ್ಯತೆ ಇರುತ್ತದೆ.

‘ಮಿಲನ’, ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ದಿಲೀಪ್ ರಾಜ್, ಕಿರುತೆರೆಯಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದರು. ನಟನೆಯ ಜೊತೆಗೆ ಡಬ್ಬಿಂಗ್ ಕಲಾವಿದ ಹಾಗೂ ಧಾರಾವಾಹಿ ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸುಗಳ ನಡುವೆ ಅವರ ಅಗಲಿಕೆ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿದೆ.

ಎದೆನೋವು, ಉಸಿರಾಟದ ತೊಂದರೆ, ಅಸ್ವಸ್ಥತೆ ಅಥವಾ ಹೃದಯ ಸಂಬಂಧಿತ ಯಾವುದೇ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ. ಸ್ಮಾರ್ಟ್‌ವಾಚ್‌ಗಳು ಸಹಾಯಕ ಸಾಧನಗಳಷ್ಟೇ; ಅವು ವೈದ್ಯಕೀಯ ತಪಾಸಣೆಗೆ ಪರ್ಯಾಯವಲ್ಲ. ಅನುಮಾನಾಸ್ಪದ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.

ಏನದು ಬೆಳಗಿನ ತಪ್ಪು?

ಸಾಮಾನ್ಯವಾಗಿ ಬಹುತೇಕ ಮಂದಿ ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಎದ್ದು ನಿಂತುಕೊಳ್ಳುತ್ತಾರೆ. ಇದೇ ಕಾರಣದಿಂದ ಶೇ.80ರಷ್ಟು ಹೃದಯಾಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ. ನಿದ್ರಾ ಪ್ರಕ್ರಿಯೆಯಲ್ಲಿ ಮನುಷ್ಯನ ದೇಹ ಬಹುತೇಕ ವಿಶ್ರಾಂತಿಯಲ್ಲಿರುತ್ತದೆ. ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಮೊದಲು ನಮ್ಮ ಮೆದುಳು ಸಕ್ರಿಯವಾಗುತ್ತದೆ.

ಆದರೆ ದೇಹದ ಇತರೆ ಭಾಗಗಳು ಸಕ್ರಿಯವಾಗಲು ಕೊಂಚ ಸಮಯ ಹಿಡಿಯುತ್ತದೆ. ಪ್ರಮುಖವಾಗಿ ಹೃದಯ ಇನ್ನೂ ರಾತ್ರಿ ಮೂಡ್ ನಲ್ಲೇ ಇರುತ್ತದೆ. ಹೀಗಾಗಿ ನಿದ್ರೆಯಿಂದ ಎದ್ದ ಕೂಡಲೇ ನಿಲ್ಲುವುದರಿಂದ ಕಾರ್ಟಿಸೋಲ್ ಗಳ ಹೆಚ್ಚಳ, ರಕ್ತನಾಳಗಳ ಸಂಕೋಚನ ಮತ್ತು ರಕ್ತದೊತ್ತಡದಲ್ಲಿ ತೀವ್ರ ಹಠಾತ್ ಏರಿಕೆಯ ಅಪಾಯಗಳು ಉದ್ಭವಿಸಬಹುದು. ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ವೈಜ್ಞಾನಿಕ ಪುರಾವೆ ಇಲ್ಲ

ಇಂತಹ ವಾದಗಳಿಗೆ ಪ್ರಸ್ತುತ ಸ್ಪಷ್ಟ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗೆಯೇ “ಬೆಳಗ್ಗೆ ಎದ್ದ ತಕ್ಷಣ ನಿಂತುಕೊಳ್ಳುವುದು 80% ಹೃದಯಾಘಾತಗಳಿಗೆ ಕಾರಣ” ಎಂಬುದನ್ನು ಸಮರ್ಥಿಸುವ ಮಾನ್ಯ ವೈದ್ಯಕೀಯ ಸಂಶೋಧನೆಯೂ ಲಭ್ಯವಿಲ್ಲ. ಆದರೆ, ಈ ಸಂದೇಶದಲ್ಲಿನ ಕೆಲವು ಅಂಶಗಳಲ್ಲಿ ಸ್ವಲ್ಪ ದೈಹಿಕ ಸತ್ಯಾಂಶವಿದೆ.

ಬೆಳಿಗ್ಗೆ ರಕ್ತದ ಒತ್ತಡ ಮತ್ತು ಕಾರ್ಟಿಸೋಲ್ ಮಟ್ಟ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಹಠಾತ್ ದೇಹದ ಸ್ಥಿತಿಯನ್ನು ಬದಲಾಯಿಸುವುದು ರಕ್ತದ ಒತ್ತಡ ಮತ್ತು ಹೃದಯ ಬಡಿತದ ಮೇಲೆ ತಾತ್ಕಾಲಿಕ ಪರಿಣಾಮ ಬೀರುತ್ತದೆ. ವಯೋವೃದ್ಧರು ಅಥವಾ ಕಡಿಮೆ ರಕ್ತದ ಒತ್ತಡ ಇರುವವರು ಬೇಗನೆ ಎದ್ದರೆ ತಲೆ ಸುತ್ತುವ ಅನುಭವ ಹೊಂದಬಹುದು.

“80% ಹೃದಯಾಘಾತಗಳು ಒಂದು ಬೆಳಗಿನ ತಪ್ಪಿನಿಂದ ಆರಂಭವಾಗುತ್ತವೆ” ಎಂಬ ಹೇಳಿಕೆಯನ್ನು ಹೃದಯ ವೈದ್ಯಕೀಯ ಸಂಶೋಧನೆ ಸಮರ್ಥಿಸುವುದಿಲ್ಲ. ಆದರೂ, ಶಾಂತವಾಗಿ ಎದ್ದುಕೊಳ್ಳುವುದು ಸಾಮಾನ್ಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸವಾಗಬಹುದು. ನಿಧಾನವಾದ ಬೆಳಗಿನ ರೊಟೀನ್ ಕೆಲವರಿಗೆ ತಲೆ ಸುತ್ತುವುದು ಅಥವಾ ಒತ್ತಡ ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಇದನ್ನು ಹೃದಯಾಘಾತ ತಡೆಯುವ ವೈಜ್ಞಾನಿಕವಾಗಿ ಸಾಬೀತಾದ ವಿಧಾನವೆಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ..

ಕೆಲವು ಸಂದರ್ಭಗಳಲ್ಲಿ ವೈದ್ಯರು ವಿಶೇಷವಾಗಿ ವಯೋವೃದ್ಧರು ಅಥವಾ ತಲೆ ಸುತ್ತುವ ಸಮಸ್ಯೆಯಿರುವವರಿಗೆ ನಿಂತುಕೊಳ್ಳುವ ಮೊದಲು ನಿಧಾನವಾಗಿ ಕುಳಿತುಕೊಳ್ಳಲು ಸಲಹೆ ನೀಡುತ್ತಾರೆ. ಆದರೆ ಅದು “ಹಠಾತ್ ಎದ್ದು ನಿಲ್ಲುವುದು ಬಹುತೇಕ ಹೃದಯಾಘಾತಗಳಿಗೆ ಕಾರಣ” ಎನ್ನುವ ಹೇಳಿಕೆಯಿಂದ ಸಂಪೂರ್ಣ ಭಿನ್ನವಾಗಿದೆ.

ಹಾಗಾದ್ರೆ ಹೃದಯಾಘಾತಕ್ಕೆ ಕಾರಣಗಳೇನು?

  • ಅಧಿಕ ರಕ್ತದ ಒತ್ತಡ
  • ಮಧುಮೇಹ
  • ಹೆಚ್ಚಿನ ಕೊಲೆಸ್ಟ್ರಾಲ್
  • ಧೂಮಪಾನ
  • ಅತಿಯಾದ ತೂಕ
  • ವ್ಯಾಯಾಮದ ಕೊರತೆ
  • ಒತ್ತಡ
  • ಕಳಪೆ ನಿದ್ರೆ, ಕಡಿಮೆ ಅಥವಾ ಗುಣಮಟ್ಟ ನಿದ್ರೆ ಇಲ್ಲದೇ ಇರುವುದು
  • ಕುಟುಂಬದ ಆರೋಗ್ಯ ಇತಿಹಾಸ