ನಟಿ ತಾಪ್ಸಿ ಪನ್ನು ಗೆ ಪ್ರತಾಪ್ ಸಿಂಹ ಟ್ವೀಟ್ ಟಾಂಗ್

06-02-21 11:54 am       Source: FILMIBEAT Manjunatha C   ಸಿನಿಮಾ

ತಾಪ್ಸಿ ಪನ್ನು ಟ್ವೀಟ್‌ಗೆ ಅದೇ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದಾರೆ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.

ನಟಿ ತಾಪ್ಸಿ ಪನ್ನು ಟ್ವೀಟ್ ಸಖತ್ ವೈರಲ್ ಆಗಿದೆ. ತಾಪ್ಸಿ ಪನ್ನು ಟ್ವೀಟ್‌ಗೆ ಅದೇ ಟ್ವಿಟ್ಟರ್‌ನಲ್ಲಿ ಉತ್ತರ ಕೊಟ್ಟಿದ್ದಾರೆ ಬಿಜೆಪಿಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.

ಎಲ್ಲವೂ ಪ್ರಾರಂಭವಾಗಿದ್ದು ರಿಹಾನ್ನ ಟ್ವೀಟ್ ನಿಂದಾಗಿ. ಪಾಪ್ ಗಾಯಕಿ ರಿಹಾನ್ನ ಭಾರತದ ರೈತ ಪ್ರತಿಭಟನೆಗೆ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಇದನ್ನು ವಿರೋಧಿಸಿ, 'ಇದು ನಮ್ಮ ಆಂತರಿಕ ವಿಷಯ ಹೊರಗಿನವರು ಮಾತನಾಡಬಾರದು' ಎಂಬರ್ಥದಲ್ಲಿ ಹಲವು ಬಾಲಿವುಡ್ ನಟರು, ಕ್ರೀಡಾ ಸ್ಟಾರ್‌ಗಳು ಟ್ವೀಟ್ ಮಾಡಿದರು.

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ತಾಪ್ಸಿ ಪನ್ನು, 'ಒಂದು ಟ್ವೀಟ್ ನಿಮ್ಮ ಐಕ್ಯತೆಯನ್ನು ಒಡೆಯುವುದಾದರೆ, ಒಂದು ಜೋಕ್ ನಿಮ್ಮ ನಂಬಿಕೆಯನ್ನು ಅಲುಗಾಡಿಸುವುದಾದರೆ, ಒಂದು ಘಟನೆ ನಿಮ್ಮ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವುದಾದರೆ, ನೀವು ನಿಮ್ಮ ನಂಬಿಕೆಗಳನ್ನು ಗಟ್ಟಿಮಾಡಿಕೊಳ್ಳಬೇಕಿದೆಯೇ ಹೊರತು ಬೇರೆಯವರಿಗೆ ಆದರ್ಶದ ಪಾಠ ಮಾಡುವ ಶಿಕ್ಷಕರಾಗಬಾರದು' ಎಂದರು. ಈ ಟ್ವೀಟ್ ಭಾರಿ ವೈರಲ್ ಆಯಿತು.

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, 'ಒಬ್ಬ ರಶೀದ್‌ನಿಂದಾಗಿ ಇಡೀಯ ಮುಸ್ಲಿಂ ಸಮುದಾಯವನ್ನು ಕೆರಳುವಂತೆ ಮಾಡಿದ. ಒಂದು ಕಾರ್ಟೂನು ವಿಶ್ವದ ಮುಸ್ಲೀಮರು ಕೆರಳುವಂತೆ ಮಾಡಿತು. 'ಡಾ ವಿಂಚಿ ಕೋಡ್' ಎಂಬ ಒಂದು ಪುಸ್ತಕ ಕ್ರಿಸ್ತರನ್ನು ಕೆರಳಿಸಿತು. ನೀವು ಕೂಡ ಒಂದು ಏಟಿನಿಂದಾಗಿ ಮದುವೆ ಮುರಿದುಕೊಂಡಿರಿ (ತಪ್ಪಡ್ ಸಿನಿಮಾದಲ್ಲಿ). ಸಿನಿಮಾ ಸಂಭಾಷಣೆ ಹೇಳುವುದಕ್ಕೆ ನೀವು ನಿಮ್ಮನ್ನು ನಿಯಂತ್ರಿಸಿಕೊಳ್ಳಿ, ಉಳಿದ ಸಂಗತಿಗಳು ನಿಮ್ಮ ಜ್ಞಾನದಿಂದ ಹೊರಗಿವೆ' ಎಂದಿದ್ದಾರೆ ಪ್ರತಾಪ್ ಸಿಂಹ.

ತಾಪ್ಸಿ ಪನ್ನು ಟ್ವೀಟ್‌ಗೆ ಹಲವಾರು ಮಂದಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ನಟ ಅಭಯ್ ಡಿಯೋಲ್ ಇನ್ನೂ ಹಲವಾರು ಮಂದಿ ತಾಪ್ಸಿ ಪನ್ನುಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

This News Article is a Copy of FILMIBEAT