ಮರಗೆಣಸು ಸಿಕ್ಕರೆ ಬಿಡಬೇಡಿ! ಇದನ್ನು ಸೇವಿಸಿದರೆ ಕಾಯಿಲೆಗಳಿಂದ ದೂರವಿರಬಹುದು

11-02-22 11:25 pm       Source: ManoharV Shetty, Vijayakarnataka   ಡಾಕ್ಟರ್ಸ್ ನೋಟ್

ಮಾರುಕಟ್ಟೆಗಳಲ್ಲಿ ಮರ ಗೆಣಸು ಕಾಣಲು ಸಿಗುವುದು ತುಂಬಾನೇ ವಿರಳ, ಆದರೆ ಸಿಕ್ಕರೆ ಮಿಸ್ ಮಾಡದೇ ತೆಗೆದುಕೊಳ್ಳಿ.

ನೀವು ಕೂಡ ಕೇಳಿರಬಹುದು ಅಥವಾ ಓದಿರಬಹುದು ಒಂದು ಕಾಲದಲ್ಲಿ ಜನರು ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ತಿಂದು ಜೀವನ ಮಾಡುತ್ತಿದ್ದರು. ಆ ಕಾಲದಲ್ಲಿ ಮನುಷ್ಯನಿಗೆ ಯಾವುದೇ ರೋಗ - ರುಜಿನಗಳು, ಕಾಯಿಲೆ - ಕಸಾಲೆಗಳು ಕಾಣಿಸುತ್ತಿರಲಿಲ್ಲ. ಚೆನ್ನಾಗಿ ಕೆಲಸ ಮಾಡಿಕೊಂಡು, ತಮ್ಮ ಪಾಡಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇನ್ನು ತಮ್ಮ ದೇಹ ಸದೃಢತೆಯ ವಿಚಾರದಲ್ಲಿ ಸಹ ನಮಗೆ ಹೋಲಿಸಿದರೆ ತುಂಬಾ ಶಕ್ತಿವಂತರಾಗಿ ಕಾಣುತ್ತಿದ್ದರು.

ಆದರೆ ಇಂದಿನ ಆಧುನಿಕ ಯುಗದಲ್ಲಿ ಸೇವಿಸುವ ಆಹಾರ ಪದ್ಧತಿಯಿಂದ ಹಿಡಿದು, ದೈನಂದಿನ ಜೀವನ ಶೈಲಿ ಎಲ್ಲವೂ ಕೂಡ ಬದಲಾಗಿ ಬಿಟ್ಟಿದೆ. ಇತ್ತೀಚೆಗೆ ನಾವು ರೂಢಿ ಮಾಡಿಕೊಂಡಿರುವ ಕೆಲವು ಆಹಾರ ಪದಾರ್ಥಗಳು, ಆರೋಗ್ಯಕ್ಕೆ ಸಾಕಷ್ಟು ಮಾರಕ ಪರಿಣಾಮಗಳನ್ನು ಉಂಟು ಮಾಡುತ್ತಿವೆ. ಆದರೆ ವಿರ್ಯಾಸ ಎಂದರೆ, ಈ ವಿಷ್ಯಗಳು ನಮಗೆ ಗೊತ್ತಿದ್ದರೂ ಕೂಡ, ನಾವು ಅದಕ್ಕೆ ಸಾಕಷ್ಟು ಅಂಟಿಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದು ಹಲವಾರು ರೋಗ - ರುಜಿನಗಳು ಚಿಕ್ಕ ವಯಸ್ಸಿಗೆ ಬಂದು ಮನುಷ್ಯರ ಇರುವ ಆಯಸ್ಸನ್ನು ಕಡಿಮೆ ಮಾಡುತ್ತಿವೆ.

ಇವೆಲ್ಲಾ ಸಮಸ್ಯೆಗಳಿಂದ ಹೊರಬರಲು ಸಾಕಷ್ಟು ದಾರಿಗಳಿವೆ. ಹಿರಿಯರು ಅನುಸರಿಸುತ್ತಿದ್ದ ಕೆಲವೊಂದು ಆಹಾರ ಪದ್ಧತಿಗಳನ್ನು, ನಾವು ಕೂಡ ಇಂದಿಗೆ ಅನುಸರಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ. ಅಂತಹ ಆಹಾರಗಳಲ್ಲಿ ಮರಗೆಣಸು ಕೂಡ ಒಂದು. ಇಂದಿನ ಲೇಖನದಲ್ಲಿ ಈ ಮರಗೆಣಸಿನಲ್ಲಿರುವ ಪ್ರಯೋಜನಗಳ ಬಗ್ಗೆ ನೋಡೋಣ..

ಮೈಗ್ರೇನ್ ತಲೆನೋವು

  • ಮೈಗ್ರೇನ್ ತಲೆನೋವು ಅನುಭವಿಸಿದವರಿಗೆ ಗೊತ್ತು, ಇದು ಎಷ್ಟು ಹಿಂಸೆ ನೀಡುತ್ತದೆ ಎಂದು. ಎಷ್ಟೋ ಜನರು ಇಂತಹ ಮೈಗ್ರೇನ್ ತಲೆ ನೋವನ್ನು ಸಹಿಸಿಕೊಳ್ಳಲಾಗದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ವೈದ್ಯರು ಕೊಡುವ ಔಷಧಿಗಳನ್ನು ತೆಗೆದುಕೊಂಡು ಸಹ ಪರಿಹಾರ ವಾಗಿಲ್ಲ ಎಂಬುದು ಹಲವರ ಮಾತು.
  • ಅಧ್ಯಾಯಾನದ ಪ್ರಕಾರ, ಆಗಾಗ ಕಾಡುವ ತಲೆ ನೋವಿನ ಸಮಸ್ಯೆ ಇದ್ದವರು ಮರಗೆಣಸನ್ನು ಬೇಯಿಸಿ ಸೇವನೆ ಮಾಡಿದರೆ ಅದರಿಂದ ಪರಿಹಾರ ಕಾಣಬಹುದು ಎಂದು ಹೇಳಲಾಗಿದೆ. ಇಲ್ಲಾಂದ್ರೆ ಮರ ಗೆಣಸಿನ ಎಲೆಗಳು ಅಥವಾ ಅದರ ಬೇರುಗಳನ್ನು ಮೊದಲು ಚೆನ್ನಾಗಿ ಶುದ್ಧ ಮಾಡಿ ನೀರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನೆನೆ ಹಾಕಿ ನಂತರ ಅದರಿಂದ ಜ್ಯೂಸ್ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ತಲೆ ನೋವಿನ ಸಮಸ್ಯೆ ದೂರಾಗುತ್ತದೆ

ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು 

  • ದೇಹದ ಎಲ್ಲಾ ಅಂಗಗಳಂತೆ ಕಣ್ಣುಗಳು ಕೂಡ ಅಷ್ಟೇ ಮುಖ್ಯ. ಕಣ್ಣುಗಳೇ ಇಲ್ಲಾಂದ್ರೆ ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಾಗಿ ಇದರ ಆರೋಗ್ಯ ಕಾಪಾಡಿಕೊಳ್ಳುವುದು ಕೂಡ ನಮ್ಮೆಲ್ಲರ ಜವಾಬ್ದಾರಿ.
  • ಹೀಗಾಗಿ ಕಣ್ಣುಗಳ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ, ನಿಯಮಿತವಾಗಿ ಮರಗೆಣಸನ್ನು ಆಹಾರಕ್ರಮದಲ್ಲಿ ಸೇರಿಸಿಕೊಂಡರೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುವುದರಿಂದ ಕಣ್ಣು ಮಂಜಾಗುವ ಸಮಸ್ಯೆ ದೂರವಾಗುತ್ತದೆ.

ಹೊಟ್ಟೆ ಹಸಿವು ಹೆಚ್ಚಾಗುತ್ತದೆ 

  • ಕೆಲವರಿಗಂತೂ ತಾವು ಅದೂ ಇದು ಆಹಾರ ತಿಂದು ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಎದುರಾಗಿ ಮಲಬದ್ಧತೆಯಿಂದ ಹಾಗೂ ಅಜೀರ್ಣತೆಯಿಂದ ಹೊಟ್ಟೆ ಹಸಿವು ಇರುವುದಿಲ್ಲ ಅಥವಾ ಮತ್ತು ಆಹಾರ ಸೇವಿಸಬೇಕು ಅನಿಸುವುದಿಲ್ಲ. ಇದರ ಜೊತೆಗೆ ತಾವು ಯಾವುದೇ ಕೆಲಸವನ್ನು ಮಾಡದೆ ಒಂದೇ ಕಡೆ ಕುಳಿತಿರುತ್ತಾರೆ.
  • ಅಂತಹವರು ತಾವು ಸೇವಿಸುವ ಆಹಾರದಲ್ಲಿ ಮರ ಗೆಣಸಿನ ಸಣ್ಣ ಸಣ್ಣ ಚೂರುಗಳನ್ನು ಮಿಶ್ರಣ ಮಾಡಿ ಸೇವಿಸಿದರೆ ಜೀರ್ಣ ಶಕ್ತಿ ಹೆಚ್ಚಾಗಿ ಹೊಟ್ಟೆ ಹಸಿವು ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.

ಜೀರ್ಣಕ್ರಿಯೆಗೆ ಸಹಕಾರಿ

ಮರ ಗೆಣಸಿನಲ್ಲಿ ಅಧಿಕ ಪ್ರಮಾಣದಲ್ಲಿ ನಾರಿನಾಂಶ ಇರುವುದರಿಂದ ನಮ್ಮ ದೇಹದ ಪ್ರತಿ ಕಾರ್ಯ ಚಟುವಟಿಕೆಯಲ್ಲಿ ನೆರವಾಗುವಂತಹ ಅತ್ಯದ್ಭುತ ಗುಣ ಲಕ್ಷಣಗಳು ಕಂಡು ಬರುತ್ತದೆ. ಇನ್ನು ಮೊದಲೇ ಹೇಳಿದ ಹಾಗೆ ಇದರಲ್ಲಿ ನಾರಿನಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ದೇಹದ ಜೀರ್ಣ ಪ್ರಕ್ರಿಯೆ ಸಾಕಷ್ಟು ಬದಲಾವಣೆ ಕಂಡು ನಾವು ಸೇವಿಸುವ ಆಹಾರದಲ್ಲಿನ ವಿಷಕಾರಿ ಅಂಶಗಳನ್ನು ಕರುಳಿನಲ್ಲಿ ಹೀರಿಕೊಂಡು ಜಠರ ನಾಳದ ಉರಿಯೂತವನ್ನು ಕಡಿಮೆ ಮಾಡಿ ಸೇವಿಸಿದ ಆಹಾರ ಸರಿಯಾದ ಪ್ರಮಾಣದಲ್ಲಿ ಜೀರ್ಣವಾಗುವಂತೆ ಮಾಡುತ್ತದೆ.

ದೇಹದ ತೂಕ ಇಳಿಸುವವರಿಗೆ ಒಳ್ಳೆಯದು

  • ಇಂದಿನ ಇಂಟರ್ನೆಟ್ ಯುಗದಲ್ಲಿ ದೇಹದ ತೂಕ ಇಳಿಸಲು ಪ್ರಯತ್ನಿಸುವವರಿಗೆ ಹಲವಾರು ರೀತಿಯ ಆಹಾರ ಕ್ರಮ, ವ್ಯಾಯಾಮಗಳು ಬೇಕಾದಷ್ಟು ಸಿಗುತ್ತದೆ, ಆದರೆ ಅದನ್ನು ಅನುಸರಿಸುವವರು ತುಂಬಾನೇ ಕಡಿಮೆ! ಕೆಲವರು ಒಂದೆರಡು ದಿನ ಆಹಾರ ಪಥ್ಯ, ವ್ಯಾಯಾಮ ಮಾಡಿ ತೂಕ ಇಳಿಕೆಯಾಗದೆ ಇದ್ದರೆ ಆಗ ಮತ್ತದೇ ಜೀವನವನ್ನು ಮುಂದುವರಿಸುವರು. ಆದ್ರೆ ಆಹಾರಪದ್ಧತಿಯ ಮೂಲಕ ತೂಕ ಇಳಿಸಲು ಬಯಸುವವರಿಗೆ ಮರಗೆಣಸು ತುಂಬಾನೇ ಒಳ್ಳೆಯದು. ಇದಕ್ಕೆ ಕಾರಣ ಮರ ಗೆಣಸಿನಲ್ಲಿ ಲಭ್ಯವಿರುವ ಯಥೇಚ್ಛವಾದ ನಾರಿನಾಂಶ.
  • ಅತಿ ಮುಖ್ಯವಾಗಿ ದೇಹದಲ್ಲಿ ಕೆಟ್ಟ ಕೊಬ್ಬಿನ ಅಂಶ ಮತ್ತು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿವಾರಣೆಯಾಗಿ ದೇಹದಲ್ಲಿ ಬೊಜ್ಜು ಶೇಖರಣೆ ಆಗದಂತೆ ತಡೆಯುವ ಎಲ್ಲಾ ಗುಣಲಕ್ಷಣಗಳು ಮರಗೆಣಸಿನಲ್ಲಿದೆ. ಅಲ್ಲದೇ ಪದೇ ಪದೇ ತಿನ್ನುವ ಬಯಕೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣಕ್ಕೆ ಬರುತ್ತದೆ.

Know The Health Benefits Of Cassava To Control Migraine And Few More Uses.