ದುಬೈನಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿಗೆ ಕೊಟ್ಟಾರ ಗೇಟಿನಲ್ಲೇ ತಡೆ, ಬಿಸಿಲಲ್ಲಿ ನಡೆದೇ ಬಂದಿದ್ದ ಮಾಜಿ ಸಿರಿವಂತ !  

02-09-22 07:52 pm       Mangalore Correspondent   ಕರಾವಳಿ

ಹೆಸರಾಂತ ಉದ್ಯಮಿ ಬಿ.ಆರ್. ಶೆಟ್ಟಿ ಒಂದು ಕಾಲದಲ್ಲಿ ದುಬೈನಲ್ಲಿ ಅತಿ ಸಿರಿವಂತ ವ್ಯಕ್ತಿಯಾಗಿದ್ದರು. ಭಾರೀ ಜನಪ್ರಿಯ ಉದ್ಯಮಿಯಾಗಿಯೂ ಹೆಸರು ಮಾಡಿ ಪ್ರಧಾನಿ ಆಪ್ತರಲ್ಲೊಬ್ಬರು ಎನ್ನುವಂತೆ ಗುರುತಿಸಿದ್ದರು.

ಮಂಗಳೂರು, ಸೆ.2: ಹೆಸರಾಂತ ಉದ್ಯಮಿ ಬಿ.ಆರ್. ಶೆಟ್ಟಿ ಒಂದು ಕಾಲದಲ್ಲಿ ದುಬೈನಲ್ಲಿ ಅತಿ ಸಿರಿವಂತ ವ್ಯಕ್ತಿಯಾಗಿದ್ದರು. ಭಾರೀ ಜನಪ್ರಿಯ ಉದ್ಯಮಿಯಾಗಿಯೂ ಹೆಸರು ಮಾಡಿ ಪ್ರಧಾನಿ ಆಪ್ತರಲ್ಲೊಬ್ಬರು ಎನ್ನುವಂತೆ ಗುರುತಿಸಿದ್ದರು. ಒಮ್ಮೆಯಂತೂ ಪ್ರಧಾನಿ ನರೇಂದ್ರ ಮೋದಿಯವರನ್ನು ದುಬೈಗೆ ಕರೆಸಿ, ತಾವೇ ಉಸ್ತುವಾರಿ ವಹಿಸ್ಕೊಂಡು ಕಾರ್ಯಕ್ರಮವನ್ನೂ ಏರ್ಪಡಿಸಿದ್ದರು. ಆದರೆ ಹಿಂದೊಮ್ಮೆ ಆಗರ್ಭ ಶ್ರೀಮಂತನಾಗಿದ್ದ ಬಿ.ಆರ್ ಶೆಟ್ಟಿ ಇಂದು ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ನಡೆದುಕೊಂಡೇ ಬಂದಿದ್ದಲ್ಲದೆ, ಗೇಟಿನಲ್ಲಿ ತಡೆದು ನಿಲ್ಲಿಸಿದ ಪೊಲೀಸರಿಂದಾಗಿ ಕಿರಿಕಿರಿ ಅನುಭವಿಸಿದ್ದಾರೆ.

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಂತಾರಲ್ಲ. ಒಂದು ವರ್ಷದ ಹಿಂದೆ ದುಬೈನಲ್ಲಿ ಹೆಸರಾಂತ ಉದ್ಯಮಪತಿಯೆಂಬ ಹೆಗ್ಗಳಿಕೆಯನ್ನು ಕಳಕೊಂಡಿದ್ದ ಬಿ.ಆರ್.ಶೆಟ್ಟಿ ಎಲ್ಲವನ್ನೂ ಕಳಕೊಂಡು ಊರಿಗೆ ಮರಳಿದ್ದರು. ಮೋದಿ ಅಭಿಮಾನಿಗಳ ಪೈಕಿ ಬಿ.ಆರ್. ಶೆಟ್ಟಿಯೂ ಒಬ್ಬರಾಗಿದ್ದು, ಇಂದು ಕುಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಮಧ್ಯಾಹ್ನ ಒಂದು ಗಂಟೆಗೆ ಆಗಮಿಸಿದ್ದಾರೆ. ಅಷ್ಟು ಹೊತ್ತಿಗೆ ಮೋದಿ ಬರಲು ಸಮಯ ಆಗಿದೆಯೆಂದು ಹೇಳಿ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಬಿ.ಆರ್ ಶೆಟ್ಟಿ ಅವರಿದ್ದ ಕಾರನ್ನು ಕೊಟ್ಟಾರದಲ್ಲಿಯೇ ತಡೆದಿದ್ದರಿಂದ ಅಲ್ಲಿಂದಲೇ ಕುಳೂರಿನತ್ತ ನಡೆದುಕೊಂಡು ಬಂದಿದ್ದರು. ಅವರ ಜೊತೆಗೆ ಒಬ್ಬ ಸಹಾಯಕಿ ಮಹಿಳೆಯೂ ಇದ್ದರು.

ಕಾರ್ಯಕ್ರಮದ ವೇದಿಕೆಯಿಂದ 50 ಮೀಟರ್ ದೂರದಲ್ಲಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ, ಜನರ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅದರ ನಡುವೆ ಬಂದಿದ್ದ ಬಿ.ಆರ್. ಶೆಟ್ಟಿಯವರನ್ನೂ ಪೊಲೀಸರು ತಡೆದು ನಿಲ್ಲಿಸಿದ್ದು ಒಳಗೆ ಬಿಡಲಿಲ್ಲ. ಅಲ್ಲಿ ನಿಂತಿದ್ದ ಇತರೇ ಸಾರ್ವಜನಿಕರು ನಮ್ಮನ್ನು ಒಳಬಿಡದಿದ್ದರೂ ಚಿಂತಿಲ್ಲ. ಇವರನ್ನು ಒಳಗೆ ಬಿಟ್ಟುಕೊಳ್ಳಿ. ಹಿಂದೆ ದುಬೈನಲ್ಲಿ ಮೋದಿ ಕಾರ್ಯಕ್ರಮವನ್ನೇ ಆಯೋಜಿಸಿದ್ದ ವ್ಯಕ್ತಿ ಎಂದು ಪೊಲೀಸರಿಗೆ ಪರಿಚಯ ಹೇಳಿದ್ದಾರೆ. ಅವರಲ್ಲಿ ವಿಐಪಿ ಪಾಸ್ ಇದ್ದರೂ, ಪೊಲೀಸರು ಅಲ್ಲಿಂದ ಒಳಗೆ ಬಿಡುತ್ತಿರಲಿಲ್ಲ. ಕೊನೆಗೆ ಬಿ.ಆರ್. ಶೆಟ್ಟಿ ಎಂಬ ಹೆಸರು ಕೇಳಿ ಪರಿಚಯ ಇದ್ದುದರಿಂದಲೋ ಏನೋ, ಒಂದಷ್ಟು ಹೊತ್ತು ಪರದಾಟದ ಬಳಿಕ ಒಳಗೆ ಬಿಟ್ಟರು. ಅಲ್ಲಿಂದ ರಸ್ತೆಯಲ್ಲಿ ನಡೆದುಕೊಂಡೇ ಬಂದ ಶೆಟ್ಟರು ತಾವು ಹಿಂದೊಮ್ಮೆ ಆಗರ್ಭ ಸಿರಿವಂತನಾಗಿದ್ದೆ ಎಂಬ ಯಾವ ಹಮ್ಮೂ ಇಲ್ಲದೆ ಸುಡುತ್ತಿದ್ದ ಬಿಸಿಲ ಝಳದ ನಡುವೆ ಕಾರ್ಯಕ್ರಮ ವೇದಿಕೆಯತ್ತ ನಡೆದು ಹೋದರು.

Mangalore International  Businessman BR Shetty was PM found walking to attend the Modi program at Goldfinch city and later he was stopped by the police he wasn't allowed to enter the program. But once upon he was the man who invited Modi to Dubai for the Indian community program.