ಸ್ಮಾರ್ಟ್ ಸಿಟಿಯಲ್ಲಿ ಮೂರು ಪಟ್ಟು ಯೋಜನಾ ವೆಚ್ಚ ; ಭಾರೀ ಅವ್ಯವಹಾರ ಶಂಕೆ - ಲೋಕಾಯುಕ್ತ ತನಿಖೆಗೆ ಆಗ್ರಹ

08-10-20 05:30 pm       Mangalore Correspondent   ಕರಾವಳಿ

ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಈ ಬಗ್ಗೆ ಲೋಕಾಯುಕ್ತ ಅಥವಾ ಎಸಿಬಿ ತನಿಖೆ ನಡೆಸಬೇಕೆಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಆಗ್ರಹಿಸಿದ್ದಾರೆ. 

ಮಂಗಳೂರು, ಅಕ್ಟೋಬರ್ 08: ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಯೋಜನಾ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಯೋಜನೆಯಲ್ಲಿ ದೊಡ್ಡ ಮಟ್ಟಿನ ಅವ್ಯವಹಾರ ನಡೆದಿದ್ದು ಈ ಬಗ್ಗೆ ಲೋಕಾಯುಕ್ತ ಅಥವಾ ಎಸಿಬಿ ತನಿಖೆ ನಡೆಸಬೇಕೆಂದು ಮಾಜಿ ಎಂಎಲ್ಸಿ, ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಆಗ್ರಹಿಸಿದ್ದಾರೆ. 

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಎರಡು ವರ್ಷ ಕಳೆದರೂ ಸಮರ್ಪಕವಾಗಿ ನಡೆದಿಲ್ಲ. ಯೋಜನೆಯ ವೆಚ್ಚಗಳನ್ನು ಮೂರು ಪಟ್ಟು ಹೆಚ್ಚಿಸಲಾಗಿದ್ದು ಭಾರೀ ಅವ್ಯವಹಾರ ನಡೆದಿರುವ ಶಂಕೆಗೆ ಕಾರಣವಾಗಿದೆ. ಮಹಾನಗರ ಪಾಲಿಕೆಯ ಅನುದಾನವನ್ನು ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ವಿಂಗಡಿಸಿ ನೀಡಲಾಗುತ್ತಿದೆ. ಮೂಡಾ ವ್ಯಾಪ್ತಿಯ ಎಂಟು ಕೆರೆಗಳ ಅಭಿವೃದ್ಧಿಗೆ ಎಂಟು ಕೋಟಿ ರೂ. ಮಂಜೂರಾಗಿ ಎಂಟು ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಯೋಜನೆಯ ವೆಚ್ಚಗಳ ಬಗ್ಗೆ ಸರಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿಗೆ ವಿಧಿಸುವಂತಿಲ್ಲ. ಸರಕಾರದ ಅನುದಾನ ಕೊಳ್ಳೆ ಹೊಡೆಯುವುದನ್ನು ತಪ್ಪಿಸಲು ಇಡೀ ಯೋಜನೆಯನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಐವನ್‌ ಡಿಸೋಜ ಒತ್ತಾಯಿಸಿದ್ದಾರೆ.

ಪ್ರಧಾನ ಮಂತ್ರಿ ಇಂದಿರಾ ಅವಾಝ್ ಯೋಜನೆಯ ಫಲಾನುಭವಿಗಳಿಗೆ ಎರಡು ವರ್ಷ 9 ತಿಂಗಳು ಕಳೆದರೂ ಮನೆ ನಿರ್ಮಿಸಿಕೊಟ್ಟಿಲ್ಲ. ಅಧಿಕಾರಿಗಳು, ಶಾಸಕರೂ ಮುತುರ್ಜಿ ವಹಿಸುತ್ತಿಲ್ಲ. ಇದರಿಂದ ಮನೆ ಮಂಜೂರಾದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಶಾಸಕರು ಮುತುವರ್ಜಿ ವಹಿಸಿ ಫಲಾನುಭವಿಗಳಿಗೆ ಮನೆ ಒದಗಿಸಿಕೊಡಬೇಕೆಂದು ಐವನ್ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್, ನೀರಜ್ ಪಾಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

Former MLC Ivan D'souza alleges scam in Mangalore Smart city project, says will report to Lokayukta tpo investigate the case