ಬಂಟ್ವಾಳ, ಮಂಗಳೂರಿನ ಹಲವೆಡೆ ತಪಾಸಣೆ ; ಡಾಗ್ ಸ್ಕ್ವಾಡ್ ಪರಿಶೀಲನೆ, ಸ್ಫೋಟಕ ಹುದುಗಿಸಿಟ್ಟ ಬಗ್ಗೆ ಶೋಧ

21-09-22 10:47 pm       Mangalore Correspondent   ಕರಾವಳಿ

ಶಿವಮೊಗ್ಗದಲ್ಲಿ ಬಂಧಿತನಾದ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ನನ್ನು ಡಿವೈಎಸ್ಪಿ ನೇತೃತ್ವದ ತಂಡ ಮಂಗಳೂರಿಗೆ ಕರೆತಂದಿದ್ದು, ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ.

ಮಂಗಳೂರು, ಸೆ.21: ಶಿವಮೊಗ್ಗದಲ್ಲಿ ಬಂಧಿತನಾದ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ನನ್ನು ಡಿವೈಎಸ್ಪಿ ನೇತೃತ್ವದ ತಂಡ ಮಂಗಳೂರಿಗೆ ಕರೆತಂದಿದ್ದು, ಬಂಟ್ವಾಳ ತಾಲೂಕಿನ ವಿವಿಧ ಪ್ರದೇಶಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ಹಾಗೂ ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ತಂಡ ಮಾಝ್ ಮುನೀರನ್ನು ಕರೆತಂದು ವಿವಿಧ ಕಡೆಗಳಿಗೆ ಕರೆದೊಯ್ದು ಶೋಧ ಕಾರ್ಯ ನಡೆಸಿದೆ.

ಬುಧವಾರ ಮಧ್ಯಾಹ್ನ ಬಂಟ್ವಾಳ ತಾಲೂಕಿನ ನಾವುರ ಗ್ರಾಮದ ಸುಲ್ತಾನ್ ಕಟ್ಟೆ ಎಂಬಲ್ಲಿಗೆ ಕರೆದೊಯ್ದು ಅಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮಹಜರು ವೇಳೆ ಡಾಗ್ ಸ್ಕ್ವಾಡ್ ಕೂಡ ಜೊತೆಗಿದ್ದು ಅಲ್ಲಿ ಹುದುಗಿಸಿಟ್ಟಿದ್ದಾರೆ ಎನ್ನಲಾದ ಸ್ಫೋಟಕ ವಸ್ತುಗಳ ಬಗ್ಗೆ ಹುಡುಕಾಟ ನಡೆಸಲಾಗಿದೆ. ನಾವುರ ಸಮೀಪದ ಅಗ್ರಹಾರ ಎಂಬಲ್ಲಿಯೂ ಪೊಲೀಸರು ಆರೋಪಿಯನ್ನು ಕರೆದೊಯ್ದು ಶೋಧ ನಡೆಸಿದ್ದಾರೆ. ಬಂಟ್ವಾಳ, ಮಂಗಳೂರು ತಾಲೂಕಿನ ವಿವಿಧ ಕಡೆಗಳಿಗೆ ಪೊಲೀಸರು ಆರೋಪಿ ಮಾಝ್ ನನ್ನು ಕರೆದೊಯ್ದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಬಂಟ್ವಾಳದ ಹಲವೆಡೆ ನಿರ್ಜನ ಪ್ರದೇಶದಲ್ಲಿ ಬಾಂಬ್ ಸ್ಫೋಟದ ಪ್ರಯೋಗ, ತರಬೇತಿ ನಡೆಸಿರುವ ಬಗ್ಗೆ ಮಾಝ್ ಮುನೀರ್ ಅಹ್ಮದ್ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡನ್ನು ಜೊತೆಗೆ ಕರೆದುಕೊಂಡೇ ಬಂದಿರುವ ಪೊಲೀಸರು ವಿವಿಧ ಕಡೆಗಳಿಗೆ ಕರೆದೊಯ್ದು ಸ್ಫೋಟಕ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಮಹತ್ವದ ಪುರಾವೆಗಳು ಲಭಿಸಿವೆ ಎನ್ನಲಾಗುತ್ತಿದೆ.

ಮಾಝ್ ಮುನೀರ್ ಅಹ್ಮದ್ ಮಂಗಳೂರಿನಲ್ಲಿದ್ದರೆ, ಸಯ್ಯದ್ ಯಾಸೀನ್ ಶಿವಮೊಗ್ಗದಲ್ಲಿಯೇ ಇದ್ದ. ಇವರಿಬ್ಬರು ಕೂಡ ಒಂದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು. ಯಾಸೀನ್ ತುಂಗಭದ್ರಾ ನದಿಯ ಆಸುಪಾಸಿನಲ್ಲಿ ನಿರ್ಜನ ಪ್ರದೇಶಗಳಲ್ಲಿ ಬಾಂಬ್ ಹುದುಗಿಸಿಟ್ಟು ಸ್ಫೋಟದ ರಿಹರ್ಸಲ್ ನಡೆಸಿದ್ದಾನೆ ಎನ್ನುವ ಮಾಹಿತಿಗಳಿವೆ. ಅಲ್ಲದೆ, ಆಧುನಿಕ ಮಾದರಿಯಲ್ಲಿ ಬಾಂಬ್ ತಯಾರಿಸಲು ನಿರ್ಜನ ಕಾಡು ಪ್ರದೇಶದಲ್ಲಿದ್ದುಕೊಂಡು ಇವರು ಪ್ರಯೋಗ ನಡೆಸುತ್ತಿದ್ದರು ಎನ್ನುವ ಬಗ್ಗೆ ಮಾಹಿತಿ ಇರುವುದರಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಿವಿಧ ಕಡೆಗಳಿಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಇವರು ನೀಡಿರುವ ಮಾಹಿತಿ ಆಧರಿಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Shivamogga Terror suspect, accused brought to Bantwal in Mangalore got spot Mahajar.