ತಿಂಗಳ ಅಂತರದಲ್ಲಿ ಮೂರು ರಿಕ್ಷಾ ಚಾಲಕರ ಅಕಾಲಿಕ ಸಾವು ; ಸರಣಿ ಸಾವಿಗೆ ಮತ್ತೆ ಕುಂಪಲ ಗಢ ಗಢ ! 

26-09-22 11:33 am       Mangalore Correspondent   ಕರಾವಳಿ

ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಕುಂಪಲದ ಮೂರು ರಿಕ್ಷಾ ಚಾಲಕರು ಅಕಾಲಿಕ ಸಾವನ್ನಪ್ಪಿದ್ದು, ಸರಣಿ ಸಾವಿನಿಂದಾಗಿ ಮತ್ತೆ ಕುಂಪಲ ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.‌ 

ಉಳ್ಳಾಲ, ಸೆ.26: ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಕುಂಪಲದ ಮೂರು ರಿಕ್ಷಾ ಚಾಲಕರು ಅಕಾಲಿಕ ಸಾವನ್ನಪ್ಪಿದ್ದು, ಸರಣಿ ಸಾವಿನಿಂದಾಗಿ ಮತ್ತೆ ಕುಂಪಲ ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.‌ 

ನಿನ್ನೆ ರಾತ್ರಿ ಕುಂಪಲ ಮೂರುಕಟ್ಟೆ ನಿವಾಸಿ ಆಟೋ ಚಾಲಕ ಜಯಪ್ರಕಾಶ್(42) ಯಾನೆ ಬಾಚ ಅವರು ಅಲ್ಪ ಕಾಲದ ಅಸೌಖ್ಯದಿಂದ ಸಾವನ್ನಪ್ಪಿದ್ದಾರೆ. ಲಿವರ್ ಸಂಬಂಧಿ ಕಾಯಿಲೆಯಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಜಯಪ್ರಕಾಶ್ ಅವರನ್ನು ಶುಕ್ರವಾರ ಆಸ್ಪತ್ರೆಗೆ ಸೇರಿಸಲಾಗಿದ್ದು ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಜಯಪ್ರಕಾಶ್ ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ವಿಜಯ್ ಪ್ರಕಾಶ್ (ಪಕ್ಕು) ಅವರ ಅವಳಿ ಸಹೋದರನಾಗಿದ್ದರು. ಅವರು ತಂದೆ, ತಾಯಿ ಸಹೋದರರು, ಪತ್ನಿ , ಮಗಳನ್ನ ಅಗಲಿದ್ದಾರೆ. 

ಸೆ.3ರಂದು ಕುಂಪಲ ಕೃಷ್ಣ ನಗರ ನಿವಾಸಿ ಹಿಂದೂ ಯುವ ಸೇನೆಯ ಪ್ರಮುಖರಾದ ಜಯಂತ್ ಎಸ್ ಕುಂಪಲ(48) ಅವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಸೆ.13ರಂದು ಕುಂಪಲ, ಬಲ್ಯ ನಿವಾಸಿ ಧನಂಜಯ ರಾವ್ (53) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹೀಗೆ ಅಕಾಲಿಕವಾಗಿ ಸಾವನ್ನಪ್ಪಿದ ಮೂವರು ಕೂಡ ಆಟೋ ಚಲಾಯಿಸಿ ಕುಟುಂಬವನ್ನ ಸಾಕುತ್ತಿದ್ದರಲ್ಲದೆ ಸಂಘ‌, ಸಂಸ್ಥೆಗಳಲ್ಲಿ ಗುರುತಿಸಿ ಜನಾನುರಾಗಿಯಾಗಿದ್ದರು. 

ವರ್ಷದ ಹಿಂದೆ ಕುಂಪಲ ಆಶ್ರಯ ಕಾಲನಿಯ ರೂಪದರ್ಶಿ ಪ್ರೇಕ್ಷಾ ಸಾವಿನ ಬಳಿಕ ಈ ಪ್ರದೇಶದಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ಇದೀಗ ಒಂದೇ ತಿಂಗಳಲ್ಲಿ ಮೂರು ಆಟೋ ಚಾಲಕರು ಅಕಾಲಿಕ ಸಾವನ್ನಪ್ಪಿರುವುದು ಕುಂಪಲದಲ್ಲಿ ಸರಣಿ ಸಾವಿನ ಬಗ್ಗೆ ಆತಂಕ ಮೂಡಿಸಿದ್ದು ಜನರನ್ನು ಗಢ ಗಢ ನಲುಗಿಸಿದೆ.

Mangalore Three auto drivers die in span of just one month in Kumpala.