ಉಳ್ಳಾಲದಲ್ಲಿ ಹಿಟ್ & ರನ್ ;  ಗಸ್ತಿನಲ್ಲಿದ್ದ ಟ್ರಾಫಿಕ್ ಸಿಬಂದಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ಹೆಡ್ ಕಾನ್ಸ್ ಟೇಬಲ್ ಗಂಭೀರ 

02-10-22 07:01 pm       Mangalore Correspondent   ಕರಾವಳಿ

ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಡಿವೈಡರ್ ಮೇಲೆ ಎಸೆಯಲ್ಪಟ್ಟ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. 

ಉಳ್ಳಾಲ, ಸೆ.2 : ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಗೆ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಡಿವೈಡರ್ ಮೇಲೆ ಎಸೆಯಲ್ಪಟ್ಟ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. 

ಉಳ್ಳಾಲಬೈಲಿನಲ್ಲಿ ಘಟನೆ ನಡೆದಿದ್ದು ಗಾಯಗೊಂಡ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಲೋಕೇಶ್ ನಾಯ್ಕ್ ಅವರನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಲೋಕೇಶ್ ನಾಯ್ಕ್ ಮತ್ತು ಎಎಸ್ಐ ಮಂಜುಳಾ ಅವರು ಹೈವೇ ಪೆಟ್ರೋಲ್ ವಾಹನದಲ್ಲಿ ಭಾನುವಾರ ಸಂಜೆ ಉಳ್ಳಾಲಬೈಲಲ್ಲಿ ಗಸ್ತಿನಲ್ಲಿದ್ದ ವೇಳೆ ಘಟನೆ ನಡೆದಿದೆ. 

ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಧಾವಿಸುತ್ತಿದ್ದ ಸ್ವಿಫ್ಟ್ ಕಾರನ್ನ ಲೋಕೇಶ್ ಅವರು ತಪಾಸಣೆಗಾಗಿ ತಡೆದು ಬದಿಗೆ ನಿಲ್ಲುವಂತೆ ಸೂಚಿಸಿದ್ದರು. ಬದಿಗೆ ಬಂದಿದ್ದ ಕಾರು ಏಕಾಏಕಿ ಎದುರಲ್ಲಿದ್ದ ಲೋಕೇಶ್ ಗೆ ಬಲವಾಗಿ ಡಿಕ್ಕಿ ಹೊಡೆದು ಉಳ್ಳಾಲದ ಕಡೆಗೆ ಪರಾರಿಯಾಗಿದೆ. 

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಲೋಕೇಶ್ ಅವರು ರಸ್ತೆಯ ವಿಭಜಕಕ್ಕೆ ಎಸೆಯಲ್ಪಟ್ಟಿದ್ದಾರೆ. ತಲೆಯ ಭಾಗಕ್ಕೆ ಡಿವೈಡರ್ ಬಡಿದು ಲೋಕೇಶ್ ಗಂಭೀರ ಗಾಯಗೊಂಡಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಡಿಕ್ಕಿ ಹೊಡೆದು ಪರಾರಿಯಾದ ಸ್ವಿಫ್ಟ್ ಕಾರಿನ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಸಮೀಪದ ಸಿಸಿಟಿವಿಗಳನ್ನ ತಪಾಸಣೆ ನಡೆಸುತ್ತಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Mangalore Hit and run accident in Ullal, traffic police constable was rammed by an unidentified car and was thrown to the divider, constable Lokesh Nail is said to be injured seriously and is critical.