ಪುತ್ತೂರಿನಲ್ಲೇ ತರಬೇತಿ, ರಹಸ್ಯ ಸಭೆಗಳನ್ನು ನಡೆಸ್ತಿದ್ದ ಪಿಎಫ್ಐ ನಾಯಕರು ; ಪೊಲೀಸರ ತನಿಖೆಯಲ್ಲಿ ನಿಗೂಢ ಸತ್ಯಗಳು ಬೆಳಕಿಗೆ

07-10-22 08:48 pm       Mangalore Correspondent   ಕರಾವಳಿ

ಇತ್ತೀಚೆಗೆ ಎನ್ಐಎ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಪಿಎಫ್ಐ ಸಂಘಟನೆಯ ರಾಜ್ಯ ಮಟ್ಟದ ನಾಯಕರನ್ನು ಬಂಧಿಸಿದ್ದರು.

ಮಂಗಳೂರು, ಅ.8: ಇತ್ತೀಚೆಗೆ ಎನ್ಐಎ ಮತ್ತು ರಾಜ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಪಿಎಫ್ಐ ಸಂಘಟನೆಯ ರಾಜ್ಯ ಮಟ್ಟದ ನಾಯಕರನ್ನು ಬಂಧಿಸಿದ್ದರು. ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಮೂಲದ ಮತ್ತೊಬ್ಬ ಆರೋಪಿಯನ್ನೂ ಬಂಧಿಸಿದ್ದರು. ಪ್ರಮುಖ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ವಿಚಾರಗಳು ಬಯಲಿಗೆ ಬಂದಿದ್ದು ರಾಜ್ಯ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.

ಪುತ್ತೂರಿನಲ್ಲಿ ಪಿಎಫ್ಐ ಸಂಘಟನೆಯ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರು ರಹಸ್ಯ ಸಭೆ ನಡೆಸುತ್ತಿದ್ದರು. ಪಿಎಫ್ಐ ಸಂಘಟನೆಗೆ ಸೇರಿದ್ದೆಂದು ಯಾವುದೇ ಕುರುಹೂ ಇಲ್ಲದ ಕಟ್ಟಡವನ್ನು ತಮ್ಮ ಕಚೇರಿಯನ್ನಾಗಿಸ್ಕೊಂಡು ಗುಪ್ತ ಸಭೆಗಳನ್ನು ನಡೆಸುತ್ತಿದ್ದರು ಅನ್ನುವ ವಿಚಾರ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಪುತ್ತೂರಿನ ಜುಮ್ಮಾ ಮಸೀದಿ ಬಳಿಯ ಕೆಪಿ ಕಾಂಪ್ಲೆಕ್ಸ್ ನಲ್ಲಿ ಮಹಡಿಯೊಂದನ್ನು ಪಿಎಫ್ಐ ಪುತ್ತೂರು ಜಿಲ್ಲಾ ಕಚೇರಿಯೆಂದು ಮಾಡಿಕೊಳ್ಳಲಾಗಿತ್ತು. ಆದರೆ, ಅಲ್ಲೊಂದು ಕಚೇರಿ ಇದೆ ಅನ್ನೋದು ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ.

NIA crackdown on gangsters: Raids being conducted at 60 locations across  India - India News

ರಾಜ್ಯ ಮಟ್ಟದ ಪ್ಲಾನಿಂಗ್ ಬಗ್ಗೆ ಅದೇ ಕಚೇರಿಯಲ್ಲಿ ಕುಳಿತು ಚರ್ಚೆ ನಡೆಸುತ್ತಿದ್ದರು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈಗಾಗಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಭಯೋತ್ಪಾದಕರೊಂದಿಗೆ ನಂಟು ಹೊಂದಿರುವುದು ಮತ್ತು ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನಿಂಗ್ ಮಾಡುತ್ತಿತ್ತು ಅನ್ನೋದ್ರ ಬಗ್ಗೆ ಎನ್ಐಎ ಮಾಹಿತಿ ಕಲೆಹಾಕಿತ್ತು. ಅದೇ ಆಧಾರದಲ್ಲಿ ಪೊಲೀಸರು ದೇಶದ ವಿವಿಧ ಕಡೆಗಳಲ್ಲಿ ಪಿಎಫ್ಐ ನಾಯಕರ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಕೇಸು ದಾಖಲಿಸಿದ್ದರು. ಇದೀಗ ತನಿಖೆಯಲ್ಲಿ ಪುತ್ತೂರಿನ ಕಚೇರಿಯಲ್ಲಿ ಪಿಎಫ್ಐ ನಾಯಕರು ರಹಸ್ಯ ಸಭೆ ಸೇರುತ್ತಿದ್ದರು ಅನ್ನೋದು ಬೆಳಕಿಗೆ ಬಂದಿದೆ. ಎನ್ಐಎ ವಿಚಾರಣೆಯಲ್ಲಿ ಅಲ್ಲೊಂದು ಕಚೇರಿ ಇತ್ತು ಅನ್ನೋದು ತಿಳಿದು ಬರುತ್ತಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಅದನ್ನು ಸೀಜ್ ಮಾಡಲಾಗಿತ್ತು. ಅದರಂತೆ, ಸೆ.28ರಂದು ರಾತ್ರಿ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದ ಪೊಲೀಸರು ಕೆಪಿ ಕಾಂಪ್ಲೆಕ್ಸ್ ನಲ್ಲಿದ್ದ ಕಚೇರಿಯನ್ನು ಸೀಜ್ ಮಾಡಿದ್ದರು.

ಪುತ್ತೂರನ್ನು ಕೇಂದ್ರ ಮಾಡಿಕೊಂಡಿದ್ದ ಪಿಎಫ್ಐ

ಪುತ್ತೂರನ್ನು ಕೇಂದ್ರವಾಗಿಟ್ಟು ಪಿಎಫ್ಐ ಜಿಲ್ಲಾ ಕಚೇರಿ ಮಾಡಿಕೊಂಡಿತ್ತು. ಆದರೆ, ಮಂಗಳೂರಿನಲ್ಲಿಯೇ ಜಿಲ್ಲಾ ಕಚೇರಿ ಇರುವುದಾಗಿ ಹೊರ ಜಗತ್ತಿಗೆ ತೋರಿಸಿಕೊಂಡಿದ್ದರು. ಮಂಗಳೂರಿನ ಕಚೇರಿಗಿಂತಲೂ ಹೆಚ್ಚಾಗಿ ಮಹತ್ವದ ಮೀಟಿಂಗನ್ನು ಪುತ್ತೂರಿನ ಕಚೇರಿಯಲ್ಲೇ ನಡೆಸುತ್ತಿದ್ದರು. ಸಭೆಗೆ ಸ್ಥಳೀಯರಿಗೆ ಪ್ರವೇಶ ಇರುತ್ತಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಭೆಯಲ್ಲಿ ಸೀಮಿತ ನಾಯಕರು ಸೇರುತ್ತಿದ್ದರು ಎನ್ನುವುದನ್ನು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಸಂಘಟನೆಯ ಕಚೇರಿ, ಅಲ್ಲಿನ ನಾಯಕರು ಸಭೆ ನಡೆಸುತ್ತಿರುವುದು ಸ್ಥಳೀಯ ಪೊಲೀಸರಿಗೆ, ಗುಪ್ತಚರ ದಳಕ್ಕೆ ತಿಳಿಯುತ್ತದೆ. ಆದರೆ ಪಿಎಫ್ಐ ನಾಯಕರು ಸಭೆ ಸೇರುವುದನ್ನು ರಹಸ್ಯವಾಗಿರಿಸುತ್ತಿದ್ದುದೇ ಈಗ ಪೊಲೀಸರ ಕುತೂಹಲ ಮತ್ತು ಸಂಶಯಕ್ಕೆ ಕಾರಣವಾಗಿದೆ.

ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ತರಬೇತಿ

ಇತ್ತೀಚೆಗೆ ವಿಟ್ಲದ ಬಳಿಯ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ಪಿಎಫ್ಐನಲ್ಲಿ ಸಕ್ರಿಯವಾಗಿದ್ದ ಸರ್ವಿಸ್ ಟೀಮ್ ಸದಸ್ಯರಿಗೆ ಮಹತ್ವದ ತರಬೇತಿಗಳನ್ನು ನೀಡಲಾಗುತ್ತಿತ್ತು ಅನ್ನೋದು ತನಿಖೆಯಲ್ಲಿ ಕಂಡುಬಂದಿತ್ತು. ಅದರಂತೆ, ಅಯೂಬ್ ಅಗ್ನಾಡಿ ಎಂಬಾತನಿಗೆ ಸೇರಿದ್ದ ಕಮ್ಯುನಿಟಿ ಹಾಲನ್ನು ಪೊಲೀಸರು ಸೀಜ್ ಮಾಡಿದ್ದರು. ಕೇರಳದಿಂದ ಬರ್ತಿದ್ದ ನಿವೃತ್ತ ಪೊಲೀಸ್ ಅಧಿಕಾರಿಗಳು ಇದೇ ಕಮ್ಯುನಿಟಿ ಹಾಲ್ ನಲ್ಲಿ ತರಬೇತಿ ನೀಡುತ್ತಿದ್ದರು. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವುದು, ಅಪರಾಧಿ ಕೃತ್ಯಗಳ ಸಂದರ್ಭದಲ್ಲಿ ಪೊಲೀಸರಿಂದ ಪಾರಾಗುವುದು, ಕೃತ್ಯ ಎಸಗಿದ ಸಂದರ್ಭದಲ್ಲಿ ಸಾಕ್ಷ್ಯ ಸಿಗದಂತೆ ನೋಡಿಕೊಳ್ಳುವುದು, ಪೊಲೀಸ್ ರೀತಿ ಪರೇಡ್ ನಡೆಸುವುದು, ಪಿಎಫ್ಐ ಪ್ರಮುಖ ನಾಯಕರು ಬಂದ ಸಂದರ್ಭದಲ್ಲಿ ಎನ್ಎಸ್ ಜಿ ಮಾದರಿಯಲ್ಲೇ ಭದ್ರತೆ ಒದಗಿಸುವುದು ಇತ್ಯಾದಿ ಗುಪ್ತ ವಿಚಾರಗಳನ್ನು ಪಿಎಫ್ಐ ಕಾರ್ಯಕರ್ತರಿಗೆ ಹೇಳಿಕೊಡಲಾಗುತ್ತಿತ್ತು ಎನ್ನುವ ವಿಚಾರ ತಿಳಿದುಬಂದಿತ್ತು.

Secret meetings and training were held at PFI hall in Bantwal, reveals investigation.