ಉಳ್ಳಾಲದಿಂದ ನಾಪತ್ತೆಯಾಗಿದ್ದ ವ್ಯಕ್ತಿ ; ಕುಂಬ್ಳೆ ಸಮುದ್ರದಲ್ಲಿ ಶವ ಪತ್ತೆ ! ಗುರುತು ಸಿಗದೆ ದಫನ ಮಾಡಿದ್ದ ಪೊಲೀಸರು 

09-10-22 06:21 pm       Mangalore Correspondent   ಕರಾವಳಿ

ಕಳೆದ ಸೆ.26 ರಂದು ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮುದ್ರದಲ್ಲಿ ಪತ್ತೆಯಾಗಿತ್ತು.

ಉಳ್ಳಾಲ, ಅ.9 : ಕಳೆದ ಸೆ.26 ರಂದು ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೂರು‌‌ ದಿವಸಗಳ ಬಳಿಕ‌ ಶವದ ಗುರುತು ಪತ್ತೆಯಾಗದೆ ಕೋಸ್ಟ್ ಗಾರ್ಡ್ ಪೊಲೀಸರು ಮೃತದೇಹವನ್ನ ಹೂತು ದಫನ ಮಾಡಿದ್ದರು. ಇದೀಗ ಕುಟುಂಬಸ್ಥರು ಉಳ್ಳಾಲ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ ಶವದ ಗುರುತು ಪತ್ತೆಯಾಗಿದ್ದು ತನಿಖೆ ಆರಂಭಗೊಂಡಿದೆ. 

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಾರು ದಾರಂದ ಬಾಗಿಲು ನಿವಾಸಿ ಝಾಕಿರ್ (36)ಯಾನೆ ಜಾಕಿ ಮೃತ ವ್ಯಕ್ತಿ. ಝಾಕಿರ್ ವಿವಾಹಿತನಾಗಿದ್ದು ಈ ಹಿಂದೆ ಮಂಗಳೂರಿನ ಧಕ್ಕೆಯಲ್ಲಿ ಸಹೋದರರ ಜೊತೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದು ವ್ಯವಹಾರದಲ್ಲಿ ಕೈ ಸುಟ್ಟು ಕೊಂಡಿದ್ದನೆನ್ನಲಾಗಿದೆ. ಝಾಕಿರ್ ಇತ್ತೀಚೆಗೆ ಖಿನ್ನತೆಗೊಳಗಾಗಿದ್ದು ಕಳೆದ ಸೆ.26 ರಂದು ಮನೆಯಿಂದ ಹೊರ ಹೋಗಿದ್ದ ವೇಳೆ ನಾಪತ್ತೆಯಾಗಿದ್ದ. ಝಾಕಿರ್ ಚಲಾಯಿಸುತ್ತಿದ್ದ ಮೋಟಾರ್ ಬೈಕ್ ಮೊನ್ನೆ ಶುಕ್ರವಾರ ಸೋಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರು ನಿನ್ನೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸುವಾಗ ಝಾಕಿರ್ ಮೃತದೇಹ ಕುಂಬ್ಳೆಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. 

ಕಳೆದ ಸೆ.28 ರಂದು ಕುಂಬ್ಳೆಯ ಆಳ ಸಮುದ್ರದಲ್ಲಿ ಝಾಕಿರ್ ಮೃತದೇಹ ಮೀನುಗಾರರಿಗೆ ದೊರಕಿತ್ತು. ಕೋಸ್ಟ್ ಗಾರ್ಡ್ ಪೊಲೀಸರು ಕೇಸು ದಾಖಲಿಸಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಕೊಳೆತಿದ್ದ ಮೃತದೇಹದ ಗುರುತು ಸಿಗದ ಕಾರಣ ಕೋಸ್ಟ್ ಗಾರ್ಡ್ ಪೊಲೀಸರು ಮೂರು ದಿವಸಗಳ ನಂತರ ಶವವನ್ನ ಹೂತು ದಫನಗೈದಿದ್ದಾರೆ. 

ಈ ನಡುವೆ, ಝಾಕಿರ್ ಬೈಕ್ ಸೋಮೇಶ್ವರ ದೇವಸ್ಥಾನದ ಬಳಿ ದೊರಕಿದ್ದು ಆತ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಕುಟುಂಬ ವರ್ಗದವರು ಮೃತ ಝಾಕಿರ್ ಮೃತದೇಹವನ್ನ ಮರಳಿ ತೆಗೆಸಿ, ಮನೆಗೆ ತರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಮೃತ ಝಾಕಿರ್ ಗೆ ಓರ್ವ ಪುತ್ರನಿದ್ದು, ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ.

Mangalore Ullal missing man body found in kumble beach in kerala, depression suspected. The deceased has been identified as Zakir from Pilar. Zakir was married recently and was helping his brother in fishing business.