ಕುತ್ತಾರಿನಲ್ಲಿ ಮತ್ತೊಂದು ಹಿಟ್ & ರನ್ ! ಮಗಳ ಮದುವೆ ತಯಾರಿಯಲ್ಲಿದ್ದ ಬಡಪಾಯಿ ಗೃಹರಕ್ಷಕ ಸಿಬ್ಬಂದಿ ಕಾಲು ಮುರಿತ 

12-10-22 08:15 pm       Mangalore Correspondent   ಕರಾವಳಿ

ಕುತ್ತಾರಿನಲ್ಲಿ ಬೈಕಲ್ಲಿ ತೆರಳುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದ್ದು ಮಗಳ ಮದುವೆ ತಯಾರಿಯಲ್ಲಿದ್ದ ಬಡಪಾಯಿ ಗೃಹ ರಕ್ಷಕ ಸಿಬ್ಬಂದಿ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. 

ಉಳ್ಳಾಲ, ಅ.12 : ಕುತ್ತಾರಿನಲ್ಲಿ ಬೈಕಲ್ಲಿ ತೆರಳುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದ್ದು ಮಗಳ ಮದುವೆ ತಯಾರಿಯಲ್ಲಿದ್ದ ಬಡಪಾಯಿ ಗೃಹ ರಕ್ಷಕ ಸಿಬ್ಬಂದಿ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. 

ಗೃಹ ರಕ್ಷಕ ದಳ ಸಿಬ್ಬಂದಿ ಹಮೀದ್ ಪಾವುಳ(52) ಅವರು ಅಪಘಾತದಿಂದ ಕಾಲು ಮುರಿತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಮಧ್ಯಾಹ್ನ ತನ್ನ ಮೋಟಾರ್ ಬೈಕಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಕುತ್ತಾರಿನಲ್ಲಿ ಅಪರಿಚಿತ ಬೈಕೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ರಸ್ತೆಗೆಸೆಯಲ್ಪಟ್ಟ ಹಮೀದ್ ಅವರ ಎಡಗಾಲು ಮುರಿದಿದೆ. 

ಹಮೀದ್ ಅವರು ಗೃಹರಕ್ಷಕ ಸಿಬ್ಬಂದಿಯಾಗಿದ್ದು ಕಳೆದ ಅನೇಕ ವರುಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕೇಸು ಹಾಕುತ್ತಿದ್ದ ಟ್ರಾಫಿಕ್ ಪೊಲೀಸನಿಗೆ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನ ಹಮೀದ್ ಅವರೇ ಬೆನ್ನಟ್ಟಿ‌ ಹಿಡಿದಿದ್ದರು. ಹಮೀದ್ ಅವರ ಕಾರ್ಯವನ್ನ‌ ಶ್ಲಾಘಿಸಿ ಅಂದಿನ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಅವರು ಸನ್ಮಾನಿಸಿ ಬಹುಮಾನ ನೀಡಿದ್ದರು.ಬಡಪಾಯಿ ಹಮೀದ್ ಅವರ ಹಿರಿಯ ಮಗಳಿಗೆ ಇದೇ ಅಕ್ಟೋಬರ್ 30 ರಂದು ಮದುವೆ ನಿಶ್ಚಯವಾಗಿತ್ತು. ಹಮೀದ್ ಅವರು ಈ ಮೊದಲು ಅಪಘಾತಕ್ಕೀಡಾಗಿ ಬಲಗಾಲಿನ ಬೆರಳುಗಳನ್ನ ಕಳಕೊಂಡಿದ್ದರು. ಬಡತನದಲ್ಲಿರುವ ಹಮೀದ್ ಅವರು ಉಳ್ಳವರ ಸಹಕಾರದಲ್ಲಿ ಮಗಳ ಮದುವೆಗೆ ತಯಾರಿ ನಡೆಸುತ್ತಿದ್ದರು. 

ಕಳೆದ ಕೆಲ ದಿನಗಳ ಹಿಂದಷ್ಟೆ ಉಳ್ಳಾಲ ಬೈಲಿನಲ್ಲಿ ಗಸ್ತಿನಲ್ಲಿದ್ದ ಮಂಗಳೂರು ದಕ್ಷಿ‌ಣ ಸಂಚಾರಿ ಠಾಣೆ ಹೆಡ್ ಕಾನ್ಸ್ಟೇಬಲ್ ಲೋಕೇಶ್ ನಾಯಕ್ ಅವರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಗಾಯಾಳು ಲೋಕೇಶ್ ಇನ್ನೂ ಚೇತರಿಸಿಲ್ಲ.

Kuttar accident hit and run, traffic home guard leg broken, hospitalized in Mangalore.