ಟೋಲ್ ಗೇಟ್ ; ತುಳುನಾಡಿನ ಜನ ಬೇಕೋ, ನವಯುಗ್ ಹಣ ಬೇಕೋ ಎಂದು ಜನಪ್ರತಿನಿಧಿಗಳು ನಿರ್ಧರಿಸಬೇಕು! 

24-10-22 09:19 pm       Mangalore Correspondent   ಕರಾವಳಿ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಸುರತ್ಕಲ್‌ ಅಕ್ರಮ ಟೋಲ್‌ ಗೇಟ್‌ನ್ನು ಯಾವುದೇ ಸಂದರ್ಭದಲ್ಲೂ ನಿಲ್ಲಿಸಬಹುದು. ಆದರೆ, ಜನಪ್ರತಿನಿಧಿಗಳು ನವಯುಗ ಕಂಪೆನಿಯ ಹಿತರಕ್ಷಣೆಗೆ ಮುಂದಾಗಿದ್ದಾರೆ.

ಮಂಗಳೂರು, ಅ.24 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಸುರತ್ಕಲ್‌ ಅಕ್ರಮ ಟೋಲ್‌ ಗೇಟ್‌ನ್ನು ಯಾವುದೇ ಸಂದರ್ಭದಲ್ಲೂ ನಿಲ್ಲಿಸಬಹುದು. ಆದರೆ, ಜನಪ್ರತಿನಿಧಿಗಳು ನವಯುಗ ಕಂಪೆನಿಯ ಹಿತರಕ್ಷಣೆಗೆ ಮುಂದಾಗಿದ್ದಾರೆ. ಹಾಗಾಗಿ ಟೋಲ್ ಗೇಟ್ ನಿಲ್ಲಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುತ್ತಿದ್ದಾರೆ. ಜನಪ್ರತಿನಿಧಿಗಳು ತಮಗೆ ತುಳುನಾಡಿನ ಜನ ಬೇಕೋ ಅಥವಾ ನವಯುಗ ಕಂಪೆನಿಯ ಹಣ ಬೇಕೋ ಅಂತ ಕೂಡಲೇ ನಿರ್ಧಾರ ಹೇಳಬೇಕು ಎಂದು ಸುರತ್ಕಲ್‌ ಟೋಲ್‌ ಗೇಟ್‌ ವಿರೋಧಿ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಸವಾಲು ಹಾಕಿದ್ದಾರೆ.‌ 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ನಿರ್ವಹಣೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಒಮ್ಮೆಯೂ ವರ್ಷಕ್ಕೆ ₹ 3 ಕೋಟಿಗಿಂತ ಹೆಚ್ಚು ಹಣವನ್ನು ವ್ಯಯಿಸಿಲ್ಲ. ಹೆದ್ದಾರಿ ನಿರ್ವಹಣೆಗೆ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಸಂಗ್ರಹವಾಗುವ ಹಣವೇ ಸಾಕು. ಕೇವಲ ಹೆದ್ದಾರಿ ನಿರ್ವಹಣೆಗಾಗಿ ಕಾರಿನಲ್ಲಿ ಕೇವಲ 30 ಕಿ.ಮೀ ಸಂಚರಿಸುವ ಜನರು ದಿನಕ್ಕೆ ₹ 200ಕ್ಕಿಂತಲೂ ಹೆಚ್ಚು ಟೋಲ್‌ ಕಟ್ಟಬೇಕಾಗಿದೆ. ಕಾರಿನ ಪೆಟ್ರೋಲಿಗೂ ಇಷ್ಟು ಖರ್ಚು ಆಗಲ್ಲ. ಈ ರೀತಿಯ ಶೋಷಣೆಯನ್ನು ಜಿಲ್ಲೆಯ ಜನರು ಎಷ್ಟು ದಿನ ಸಹಿಸಿಕೊಂಡಿರಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

Nalin Kumar Kateel gets Dakshina Kannada Constituency ticket for third time  in a row

ಇತ್ತೀಚೆಗೆ 20 ದಿನಗಳ ಒಳಗೆ ಟೊಲ್‌ ಗೇಟ್‌ ತೆರವುಗೊಳಿಸುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದರು. ಗಡುವಿನ ಪ್ರಕಾರ ನ.7ರ ಒಳಗೆ ಟೋಲ್‌ ತೆರವಾಗಬೇಕು. 2018ರಲ್ಲೂ ಇದೇ ರೀತಿಯ ಭರವಸೆ ನೀಡಿ ಮತ್ತೆ ಮರೆತು ಬಿಟ್ಟಿದ್ದರು. ಹಾಗಾಗಿ ಅವರ ಮಾತಿನಲ್ಲಿ ಯಾರಿಗೂ ನಂಬಿಕೆ ಉಳಿದಿಲ್ಲ. ಆದರೆ ಇದುವರೆಗೂ ಟೋಲ್‌ಗೇಟ್‌ ವಿಚಾರದಲ್ಲಿ ಸೊಲ್ಲೆತ್ತದ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಈಗ ನವೆಂಬರ್‌ ಅಂತ್ಯದೊಳಗೆ ಟೋಲ್‌ ಸ್ಥಗಿತಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದಾರೆ. ಸಂಸದರು ಒಂದು ಹೇಳುವುದು, ಅವರದೇ ಪಕ್ಷದ ಸಚಿವರು ಇನ್ನೊಂದು ಹೇಳಿಕೆ ನೀಡುವುದು ಅನುಮಾನ ಮೂಡಿಸುತ್ತಿದೆ ಎಂದರು. 

Surathkal and Hejamadi toll gates to be merged within this month: NHAI  project director | Deccan Herald

ಸುರತ್ಕಲ್ ಟೋಲ್‌ಗೇಟ್‌ ನಿಯಮಬಾಹಿರ, ಅಕ್ರಮ ಎಂದು ಲೋಕೋಪಯೋಗಿ ಸಚಿವರು ವಿಧಾನಸಭೆ ಅಧಿವೇಶನದಲ್ಲಿಯೇ ಸ್ಪಷ್ಟಪಡಿಸಿದ್ದರು. ಆದರೂ ‌ಟೋಲ್‌ ಸಂಗ್ರಹವನ್ನು ತಕ್ಷಣದಿಂದ ನಿಲ್ಲಿಸಲು ಸರ್ಕಾರ ಸಿದ್ಧವಿಲ್ಲ. ಕನಿಷ್ಠ ಪಕ್ಷ ಟೋಲ್‌ ತೆರವಿನ ನಿರ್ದಿಷ್ಟ ದಿನಾಂಕವನ್ನು ಹೇಳಿ ಎಂದರೂ ಅದಕ್ಕೂ ಸಿದ್ಧವಿಲ್ಲ. ಹಾಗಾಗಿ ಅ.28ರಿಂದ ಅನಿರ್ದಿಷ್ಟ ಅವಧಿ ವರೆಗೆ ಟೋಲ್‌ ಗೇಟ್‌ ಬಳಿ ಹಗಲು ರಾತ್ರಿ ಧರಣಿ ನಡೆಸಲು ಸಮಿತಿ ತೀರ್ಮಾನಿಸಿದೆ. ಇದನ್ನು ನಿರ್ಣಾಯಕ ಹಂತಕ್ಕೆ ಒಯ್ಯದಿದ್ದರೆ ಶೋಷಣೆ ಇದೇ ರೀತಿ ಮುಂದುವರಿಯಲಿದೆ. ಹೀಗಾಗಿ ಹೋರಾಟಕ್ಕೆ ಜನರು ಬೆಂಬಲ ನೀಡಬೇಕಾಗಿದೆ ಎಂದರು.

ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ, ಸಮಿತಿಯ ಪ್ರಮುಖರಾದ ಪುರುಷೋತ್ತಮ ಚಿತ್ರಾಪುರ, ರಘು ಎಕ್ಕಾರು, ಶೇಖರ ಹೆಜಮಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಕುಂಪಲ, ಬಿ.ಕೆ.ಇಮ್ತಿಯಾಜ್, ಮುಹಮ್ಮದ್ ಕುಂಜತ್ತಬೈಲ್, ಪ್ರತಿಭಾ ಕುಳಾಯಿ, ದಯಾನಂದ ಶೆಟ್ಟಿ, ಶ್ರೀನಾಥ್ ಕುಲಾಲ್, ರಮೇಶ್ ಟಿ ಎನ್. ಸುದ್ದಿಗೋಷ್ಟಿಯಲ್ಲಿ ಇದ್ದರು.

The Toll Gate Virodhi Horata Samithi has decided to hold indefinite protests day and night from October 28 urging to vacate Surathkal toll gate.Munir Katipalla, convener of the Horata Samithi in a press release dated October 24, stated that repeated time limits sought by the government elected representatives and the officials to close the toll gate have made them suspect their intentions.