ನರಿಂಗಾನ ಗ್ರಾಮದಲ್ಲಿ ಸರಕಾರಿ ಕಂಬಳ ಕರೆಗೆ ಯುಟಿ ಖಾದರ್ ಶಿಲಾನ್ಯಾಸ ; ಬೋಳದಪದವಿನಲ್ಲಿ ತುಳುಗ್ರಾಮ, ಎಕ್ಸಿಬಿಷನ್ ಸೆಂಟರ್ 

29-10-22 10:02 pm       Mangalore Correspondent   ಕರಾವಳಿ

ನರಿಂಗಾನ ಗ್ರಾಮದ ಬೋಳದಪದವಿನ ವಿಶಾಲ ಪ್ರದೇಶದಲ್ಲಿ ಸರಕಾರಿ ಕಂಬಳ ಕರೆ ನಿರ್ಮಾಣವಾಗಲಿದ್ದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ‌ ಶಾಸಕ ಯು.ಟಿ ಖಾದರ್ ಅವರು ನೂತನ ಕರೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. 

ಉಳ್ಳಾಲ, ಅ.29 : ನರಿಂಗಾನ ಗ್ರಾಮದ ಬೋಳದಪದವಿನ ವಿಶಾಲ ಪ್ರದೇಶದಲ್ಲಿ ಸರಕಾರಿ ಕಂಬಳ ಕರೆ ನಿರ್ಮಾಣವಾಗಲಿದ್ದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ‌ ಶಾಸಕ ಯು.ಟಿ ಖಾದರ್ ಅವರು ನೂತನ ಕರೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಮಾಡಿದ್ದಾರೆ. 

ಕಂಬಳ‌ ಮತ್ತು ಯಕ್ಷಗಾನ‌ ನಮ್ಮ ಜಿಲ್ಲೆಯ ಸಾಂಸ್ಕೃತಿಕ ರಂಗದ ಎರಡು ಕಣ್ಣುಗಳಾಗಿದ್ದು ಅದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ವಿಧಾನಸಭೆಯಲ್ಲೂ ಧ್ವನಿ ಎತ್ತಿ ಯಶಸ್ಸು ಕಂಡಿದ್ದೇನೆ. ನರಿಂಗಾನ‌ ಗ್ರಾಮದ ಕಂಬಳ ಪ್ರೇಮಿಗಳ ಮನವಿಯಂತೆ ಗ್ರಾಮದ ಬೋಳದಪದವಿನಲ್ಲಿ ನೂತನ ಕಂಬಳಗದ್ದೆ(ಕರೆ) ನಿರ್ಮಾಣವಾಗಲಿದ್ದು ಅದಕ್ಕೆ ಶಿಲಾನ್ಯಾಸಗೈದಿರುವುದು ಮನಸ್ಸಿಗೆ ತುಂಬ ಸಂತಸ ಕೊಟ್ಟಿದೆ. ಬೋಳದ ಪದವಿನ ಐದು ಎಕರೆ ಪ್ರದೇಶದಲ್ಲಿ ತುಳು ಗ್ರಾಮ ನಿರ್ಮಾಣವಾಗಲಿದ್ದು ಆ ನಿಟ್ಟಿನಲ್ಲಿ ಬೋಳ, ಮೋರ್ಲದ ಸರಕಾರಿ ಸ್ಥಳದ ಪ್ರತಿ ಯೋಜನೆಯನ್ನು‌ ಒಟ್ಟು ಸೇರಿಸಿ ಎಕ್ಸಿಬಿಷನ್ ಸೆಂಟರ್ ಆಗಿ ಮಾಡಿ ತೋರಿಸಲಿದ್ದೇವೆ. ತುಳು ಗ್ರಾಮದ ಮೂಲಕ ಜಿಲ್ಲೆಯ ಎಲ್ಲ ಸಮಾಜದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಮುಂದಿನ ಜನಾಂಗವೂ ತಿಳಿಯಲು ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಯುಟಿ ಖಾದರ್ ಹೇಳಿದರು.
ನೆತ್ತಿಲಪದವು, ಬೋಳದಪದವು ಕೇವಲ ಹೆಸರಾಗಿ ಉಳಿಯದೇ ಮುಂದಿನ ದಿನಗಳಲ್ಲಿ ಜನಾಕರ್ಷಣೆಯ ಕೇಂದ್ರವಾಗಲಿದೆ. ಭವಿಷ್ಯದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಕ್ರೀಡಾಂಗಣ ಕೂಡ ಸಕಲ ಸೌಲಭ್ಯಗಳೊಂದಿಗೆ ನಿರ್ಮಾಣವಾಗಲಿದೆ. ಈಗಾಗಲೇ ಸುಮಾರು ಮೂರು‌ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸ್ವಿಮ್ಮಿಂಗ್ ಫೂಲ್ ಮತ್ತು ಕಮ್ಯುನಿಟಿ ಸೆಂಟರ್ ಗೆ ಸ್ಥಳ ಗುರುತಿಸಿದ್ದೇವೆ ಎಂದರು.

ಇದೇ ವೇಳೆ ಅವರು ಕಲ್ಲರಕೋಡಿ ಬಳಿ 2.5 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಅಡಿಯಲ್ಲಿ ಬೃಹತ್ ನೀರಿನ‌ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸಗೈದರು.
ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಜೆ. ಶೆಟ್ಟಿ, ಉಪಾಧ್ಯಕ್ಷರಾದ ನವಾಝ್ ಕಲ್ಲರಕೋಡಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.

Mangalore UT Khader lays foundation stone to Government Lake for Kambala in Ullal.