ಮಣ್ಣು ಪರೀಕ್ಷೆಗೆ ರೆಡಿಯಾಗಿದೆ ರೋಬೋಟ್ ; ವಿದ್ಯಾರ್ಥಿಯ ಸಾಧನೆಗೆ ಸಿಕ್ಕೀತೇ ಗರಿಮೆ ?

12-10-20 03:38 pm       Mangalore Correspondent   ಕರಾವಳಿ

ರೈತರ ಕಷ್ಟವನ್ನು ಅರಿತ ಯುವ ವಿದ್ಯಾರ್ಥಿಯೊಬ್ಬ ಮಣ್ಣು ಪರೀಕ್ಷೆಗೆಂದೇ ರೋಬೋಟ್ ಒಂದನ್ನು ತಯಾರು ಮಾಡಿದ್ದಾನೆ. 

ಮಂಗಳೂರು, ಅಕ್ಟೋಬರ್ 12: ರೈತರು ತಮ್ಮ ಹೊಲದ ಮಣ್ಣಿನ ಫಲವತ್ತತೆ ಆಧರಿಸಿ ಕೃಷಿ ಮಾಡಬೇಕೆಂದು ಸರಕಾರ ಹೇಳುತ್ತೆ. ಕೃಷಿ ತಜ್ಞರೂ ಇದೇ ಮಾತನ್ನು ಹೇಳುತ್ತಾರೆ. ಆದರೆ ರೈತರು ತಮ್ಮ ಹೊಲದ ಮಣ್ಣು ಪರೀಕ್ಷೆ ಮಾಡುವುದು ಅಷ್ಟು ಸುಲಭ ಇಲ್ಲ. ರೈತರ ಕಷ್ಟವನ್ನು ಅರಿತ ಯುವ ವಿದ್ಯಾರ್ಥಿಯೊಬ್ಬ ಮಣ್ಣು ಪರೀಕ್ಷೆಗೆಂದೇ ರೋಬೋಟ್ ತಯಾರು ಮಾಡಿದ್ದಾನೆ. 

ಆತನ ಹೆಸರು ಸಾರ್ಥಕ್. ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ದ್ವಿತೀಯ ಪಿಯು ಸೈನ್ಸ್ ವಿದ್ಯಾರ್ಥಿ. ವಿಜ್ಞಾನದಿಂದ ರೈತರಿಗೆ ನೆರವಾಗಬೇಕು ಎನ್ನುವ ಉದಾತ್ತ ಧ್ಯೇಯ ಇಟ್ಟುಕೊಂಡಿರುವ ಸಾರ್ಥಕ್ ರೋಬೋಟ್ ಒಂದನ್ನು ಆವಿಷ್ಕರಿಸಿದ್ದಾನೆ. ಈ ರೋಬೋಟ್ ಜೊತೆಗೆ ಮೊಬೈಲ್ ಆಪ್ ಒಂದನ್ನೂ ಅಭಿವೃದ್ಧಿ ಪಡಿಸಿದ್ದಾನೆ. ರೋಬೋಟನ್ನು ಜಮೀನಿನಲ್ಲಿ ಬಿಟ್ಟರೆ ಮಣ್ಣನ್ನು ಪರೀಕ್ಷಿಸಿ, ಕೆಲವೇ ಸೆಕೆಂಡಿನಲ್ಲಿ ವರದಿಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಮಣ್ಣು ಯಾವ ಬೆಳೆಗೆ ಸೂಕ್ತ ಎನ್ನುವುದನ್ನೂ ಹೇಳುತ್ತದೆ. ಮೊಬೈಲ್ ಎಪ್ಲಿಕೇಶನಲ್ಲಿ ರೈತನ ಕೈಗೇ ಮಣ್ಣಿನ ಗುಣಮಟ್ಟದ ಬಗ್ಗೆ ವರದಿ ಬರುತ್ತದೆ ಎನ್ನುತ್ತಾನೆ, ಸಾರ್ಥಕ್.

ಸಾಮಾನ್ಯವಾಗಿ ಜಮೀನಿನಲ್ಲಿ ಮಣ್ಣನ್ನು ಪರೀಕ್ಷೆ ಮಾಡಬೇಕಿದ್ದರೆ ರೈತರು ಕೃಷಿ ವಿಜ್ಞಾನ ಕೇಂದ್ರಕ್ಕೆ ಒಯ್ಯಬೇಕು. ಅಲ್ಲಿ ತಜ್ಞರು ಅದನ್ನು ಟೆಸ್ಟ್ ಮಾಡಿಸಿ, ವರದಿ ನೀಡುವಾಗ ಒಂದು ವಾರ ಬೇಕಾಗುತ್ತದೆ. ದೊಡ್ಡ ಮಟ್ಟಿನಲ್ಲಿ ರೈತರು ಮಣ್ಣನ್ನು ಹೊತ್ತು ತಂದರೆ ಅದನ್ನು ಟೆಸ್ಟ್ ಮಾಡುವ ಕಿಟ್ ಇಲಾಖೆಯಲ್ಲೂ ಇಲ್ಲ. ಇಂಥ ಸಂದರ್ಭದಲ್ಲಿ ಹೊಸ ಮಾದರಿಯ ರೋಬೋಟ್ ರೈತರಿಗೆ ವರದಾನ ಆಗಬಲ್ಲದು ಎನ್ನುವ ಭರವಸೆಯಿದೆ. ಈ ರೋಬೋಟ್ ಕೇವಲ ಮಣ್ಣು ಪರೀಕ್ಷೆ ಮಾತ್ರ ಮಾಡುವುದಲ್ಲ. ಇದರ ಜೊತೆಗೆ, ಈ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಸಬೇಕು, ಅವುಗಳಿಗೆ ಏನೆಲ್ಲ ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎನ್ನುವುದನ್ನೂ ಸೂಚಿಸುತ್ತದೆ. ತೆಂಗು ಬೆಳೆ ಅಥವಾ ಅಡಿಕೆ ಬೆಳೆಯಬಹುದೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟು ಉತ್ತರ ಪಡೆಯುವ ತಂತ್ರಜ್ಞಾನ ಇದರಲ್ಲಿದೆ. ಎಲ್ಲವೂ ಮೊಬೈಲ್ ಎಪ್ಲಿಕೇಶನಲ್ಲಿ ಪ್ರಶ್ನೋತ್ತರಗಳು ನಡೆಯುವುದರಿಂದ ರೈತರಿಗೆ ಕೈಯಲ್ಲೇ ತಂತ್ರಜ್ಞಾನ ಸಿಕ್ಕಂತಾಗುತ್ತದೆ. 
 
ಆಧುನಿಕ ಮಾದರಿಯಲ್ಲಿ ಕೃಷಿ ಮಾಡಲು ಈ ರೋಬೋಟ್ ಅತ್ಯಂತ ಉಪಯುಕ್ತ. ಆದರೆ, ಸದ್ಯಕ್ಕೆ ಸಣ್ಣ ಮಟ್ಟಿಗೆ ಡೆವಲಪ್ ಮಾಡಿದ್ದು, ಇದನ್ನೇ ಸ್ವಲ್ಪ ಹಣ ಹೂಡಿಕೆ ಮಾಡಿದರೆ ಜಮೀನಿನ ಆಯಾ ಭಾಗಕ್ಕೆ ಸ್ವತಃ ತೆರಳುವ ರೀತಿ ರೋಬೋಟ್ ಅಭಿವೃದ್ಧಿ ಪಡಿಸಬಹುದಾಗಿದೆ. ಸರಕಾರದಿಂದ ಅಥವಾ ಕಂಪನಿಗಳ ಕಡೆಯಿಂದ ಬೆಂಬಲ ಸಿಕ್ಕರೆ ಉತ್ತಮವಾಗಿ ಅಭಿವೃದ್ಧಿ ಪಡಿಸಬಲ್ಲೆ ಎನ್ನುವ ಭರವಸೆ ಸಾರ್ಥಕನದ್ದು. 

Photo Gallery: ಮಣ್ಣು ಪರೀಕ್ಷೆಗೆ ರೆಡಿಯಾಗಿದೆ ರೋಬೋಟ್

A prototypical robot has been designed by a student from Mangaluru, Sarthak S Kumar. The unique robot is likely to be boon for farmers. It collects readings from a field, such as details about soil moisture, temperature and humidity. Kumar said, "This system will enable farmers to choose the right crop for cultivation."